ಪಾಟ್ನಾ:ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ವಿಷದ ಹಾವುಗಳು ಎಂದು ಸಂಸದ ಪಪ್ಪು ಯಾದವ್ ಹೇಳಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಅವರ ಜತೆಗಿನ ಮನಸ್ತಾಪದಿಂದಾಗಿ ಆರ್ಜೆಡಿ ಪಕ್ಷದಿಂದ ಉಚ್ಚಾಟನೆಗೊಂಡಿರುವ ಪಪ್ಪು ಯಾದವ್, ನಿತೀಶ್ ಕುಮಾರ್ ಮಾಡಿರುವ ಟ್ವೀಟ್ ವಿವಾದದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಷದ ಹಾವುಗಳಿಂದ ತುಂಬಿದ್ದರೂ ಶ್ರೀಗಂಧ ಯಾವತ್ತೂ ವಿಷವಾಗದೇ ತನ್ನ ಸುಗಂಧ ಉಳಿಸಿಕೊಳ್ಳುತ್ತದೆಎಂದು ನಿತೀಶ್ ಕುಮಾರ್ ಮಾಡಿದ್ದ ಟ್ವೀಟ್ ಭಾರಿ ಟೀಕೆ ಕಾರಣವಾಗಿದೆ. ಅಲ್ಲದೆ ಈ ಹೇಳಿಕೆ ಲಾಲೂ ಪ್ರಸಾದ್ ಅವರನ್ನೇ ಉದ್ದೇಶಿಸಿದೆ ಎಂದು ಆರ್ಜೆಡಿ ಅಭಿಮಾನಿಗಳು ಕಿಡಿ ಕಾರಿದ್ದಾರೆ. ಇಲ್ಲಿ ವಿಷದ ಹಾವು ಲಾಲೂ ಪ್ರಸಾದ್, ಶ್ರೀಗಂಧ ನಿತೀಶ್ ಕುಮಾರ್ ಎಂಬಂತೆ ಬಿಂಬಿಸಿಕೊಳ್ಳಲು ಬಿಹಾರದ ಸಿಎಂ ಯತ್ನಿಸಿದ್ದಾರೆ ಎನ್ನುವುದು ಆರ್ಜೆಡಿ ಕಾರ್ಯಕರ್ತರ ಆಕ್ರೋಶವಾಗಿದೆ.
ಲಾಲು ಮತ್ತು ನಿತೀಶ್ ಇಬ್ಬರೂ ವಿಷದ ಹಾವುಗಳು. ಅವರಿಬ್ಬರೂ ಕಳೆದ 25 ವರ್ಷಗಳಲ್ಲಿ ಬಿಹಾರದ ಅಧಿಕಾರ ಸೂತ್ರ ಹಿಡಿದು 10 ಕೋಟಿ ಜನರಿಗೆ ವಿಷ ಉಣ್ಣಿಸುತ್ತ ಬಂದಿದ್ದಾರೆ ಎಂದು ಮಾಧೇಪುರದ ಸಂಸದ ಪಪ್ಪು ಯಾದವ್ ವ್ಯಂಗ್ಯವಾಡಿದ್ದಾರೆ.