ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆರ್ಟಿಐ ಮೂಲಕ ತಮ್ಮ ಆಸ್ತಿಯ ವಿವವರನ್ನು ಬಹಿರಂಗಪಡಿಸಲು ಮತ್ತೆ ಆಕ್ಷೇಪವ್ಯಕ್ತಪಡಿಸಿದ್ದಾರೆ.
ಸೋನಿಯಾ ಪುತ್ರಿಯ ಆಸ್ತಿ ವಿವರ ಕೋರಿ ಆರ್ಟಿಐ ಕಾರ್ಯಕರ್ತ ದೇವ್ ಆಶೀಶ್ ಭಟ್ಟಾಚಾರ್ಯ ಅರ್ಜಿ ಸಲ್ಲಿಸಿದ್ದರು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪ್ರಿಯಾಂಕಾ ಗಾಂಧಿ, ಆರ್ಟಿಐ ಅರ್ಜಿಗೆ ತಡೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ನನ್ನ ಆಸ್ತಿ ಕುರಿತು ಆರ್ ಟಿಐ ಮೂಲಕ ವಿವರ ಕೇಳಿದ್ದ ಅರ್ಜಿದಾರ ಹಿಮಾಚಲ ಪ್ರದೇಶ್ ನಿವಾಸಿಯಲ್ಲ ಎಂದು ವಾದಿಸಿದ್ದಾರೆ.
ಆರ್ಟಿಐ ಅರ್ಜಿದಾರರು ಹಿಮಾಚಲ ಪ್ರದೇಶದ ನಿವಾಸಿ ಅಲ್ಲ ಎಂಬ ಕಾರಣ ನೀಡಿ ಆಸ್ತಿ ವಿವರ ಬಹಿರಂಗಕ್ಕೆ ಪ್ರಿಯಾಂಕಾ ತಡೆ ಕೋರಿದ್ದಾರೆ. ಅಷ್ಟೇ ಅಲ್ಲ ಅರ್ಜಿದಾರ ದೇವ್ ಆಶೀಶ್ ಭಟ್ಟಾಚಾರ್ಯ ಅವರ ಬಾಧ್ಯಸ್ಥಿಕೆ(ಲೋಕಸ್ ಸ್ಟ್ಯಾಂಡಿ)ಯನ್ನು ಪ್ರಿಯಾಂಕಾ ಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ.
ಈ ಪ್ರಕರಣದ ಕುರಿತು ಈಗಾಗಲೇ ತನ್ನ ಆಸ್ತಿಯ ಕುರಿತ ಮಾಹಿತಿಯನ್ನು ಬಹಿರಂಗಪಡಿಸಿದರೆ ತನ್ನ ಜೀವಕ್ಕೆ ಅಪಾಯವಿದೆ ಎಂದು ನ್ಯಾಯಾಲಯದಲ್ಲಿ ವಾದಿಸಿದ್ದರು. ಇದೀಗ ಮತ್ತೆ ತಮ್ಮ ಆಸ್ತಿ ಬಹಿರಂಗಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಟ್ಟಾಚಾರ್ಯ ಹಿಮಾಚಲದ ನಿವಾಸಿಯಲ್ಲ, ಅವರು ನೋಯ್ಡಾದ ನಿವಾಸಿ. ಹಾಗಾಗಿ ಅವರು ನನ್ನ ಆಸ್ತಿ ಕುರಿತು ಮಾಹಿತಿ ನೀಡಬೇಕೆಂದು ಕೋರಿರುವ ಅರ್ಜಿಯನ್ನು ವಜಾ ಮಾಡಬೇಕೆಂದು ಪ್ರಿಯಾಂಕಾ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.