ರಾಷ್ಟ್ರೀಯ

ಗಜೇಂದ್ರ ಚೌಹಾಣ್ ನೇಮಕ ವಿರುದ್ಧ ಮಾತನಾಡುವವರು ಹಿಂದೂ ವಿರೋಧಿಗಳು: ಆರ್ ಎಸ್ಎಸ್

Pinterest LinkedIn Tumblr

Gajendra-Chauhan

ನವದೆಹಲಿ: ಬಿಜೆಪಿ ಸದಸ್ಯ ಹಾಗೂ ಕಿರುತೆರೆ ಕಲಾವಿದ ಗಜೇಂದ್ರ ಚೌಹಾಣ್‌ ಅವರನ್ನು ಪ್ರತಿಷ್ಠಿತ ‘ಭಾರತೀಯ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆ’ಯ (ಎಫ್‌ಟಿಐಐ) ಅಧ್ಯಕ್ಷರಾಗಿ ನೇಮಕ ಮಾಡಿರುವುದನ್ನು ವಿರೋಧಿಸುತ್ತಿರುವವರು ಹಿಂದೂ ವಿರೋಧಿಗಳು ಎಂದು ಆರ್ ಎಸ್ಎಸ್ ಶನಿವಾರ ಹೇಳಿದೆ.

ಈ ಕುರಿತಂತೆ ಆರ್ ಎಸ್ಎಸ್ ತನ್ನ ಮುಖವಾಣಿ ಆರ್ಗನೈಸರ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಚೌಹಾಣ್ ನೇಮಕಾತಿ ವಿರೋಧಿಸುವವರು ಹಿಂದೂ ವಿರೋಧಿಗಳಾಗಿದ್ದು, ಮಾನಸಿಕ ಅಸ್ವಸ್ಥರಷ್ಟೇ ಈ ಬಗ್ಗೆ ವಿರೋಧ ವ್ಯಕ್ತಪಡಿಸಲು ಸಾಧ್ಯ. ಹುದ್ದೆಗೆ ಯಾರು ಉತ್ತಮರೋ ಅವರನ್ನು ಸರ್ಕಾರ ನೇಮಕ ಮಾಡಿದೆ. ಆದರೆ, ಇದನ್ನು ಒಪ್ಪದ ಹಿಂದೂ ವಿರೋಧ ಸಂಘಟನೆಗಳು ಈ ಬಗ್ಗೆ ಹೋರಾಟಗಳನ್ನು ನಡೆಸುತ್ತಿದೆ. ಸಂಸ್ಥೆಗೆ ಒಳ್ಳೆಯದನ್ನು ಬಯಸುವವರು ಈ ರೀತಿ ಮಾಡಲು ಸಾಧ್ಯವಿಲ್ಲ. ಸುಳ್ಳು ಹೇಳುವುದರಲ್ಲೇ ಅವರಿಗೆ ಆಸಕ್ತಿ ಹೆಚ್ಚಾಗಿದ್ದು, ಇಂದೊಂದು ಹಿಂದೂ ವಿರೋಧಿಗಳು ನಡೆಸುತ್ತಿರುವ ಪ್ರಚಾರವಾಗಿದೆ ಎಂದು ಹೇಳಿಕೊಂಡಿದೆ.

ಚೌಹಾಣ್ ಶಿಕ್ಷಣದ್ದಾಗಲೀ ಅವರ ಅನುಭವದಲ್ಲಾಗಲೀ ಯಾವುದರಲ್ಲೂ ಕಡಿಮೆ ಇಲ್ಲ. ರಾಜಕೀಯ ರಂಗದಲ್ಲೂ ಅನುಭವ ಹೊಂದಿದವರು, ಇದಲ್ಲದೆ 150 ಹೆಚ್ಚು ಸಿನಿಮಾ ಹಾಗೂ 600ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 34 ವರ್ಷ ಅನುಭವ ಇದೆ. ಇಷ್ಟೆಲ್ಲಾ ಲಕ್ಷಣ ಇರುವ ವ್ಯಕ್ತಿ ಎಫ್‌ಟಿಐಐ ಅಧ್ಯಕ್ಷರಾಗಿ ನೇಮಕವಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರು ಮಾನಸಿಕ ಅಸ್ವಸ್ಥರಲ್ಲದೆ ಬೇರೆನು. ಚೌಹಾಣ್ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದನ್ನು ಗಮನಿಸಿದರೆ ಇದರ ವಿರುದ್ಧ ವ್ಯವಸ್ಥಿತ ಪಿತೂರಿಯಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹೇಳಿದೆ.

ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (ಎಫ್ ಟಿಐಐ) ಅಧ್ಯಕ್ಷರಾಗಿ ಗಜೇಂದ್ರ ಚೌಹಾಣ್ ಅವರನ್ನು ನೇಮಕ ಮಾಡಿರುವುದನ್ನು ವಿರೋಧಿಸಿ ಚಲನಚಿತ್ರ ಕಲಾವಿದರು ಹಾಗೂ ಎಫ್ ಟಿಐಐ ನ ವಿದ್ಯಾರ್ಥಿಗಳು ಪ್ರತಿಭಟನೆಗಳಿದಿದ್ದವು. ದಿನಕಳೆದಂತೆ ಈ ಕುರಿತಂತೆ ಪ್ರತಿಭಟನೆಗಳು ಕಾವೇರುತ್ತಿದ್ದು, ಎಲ್ಲೆಡೆ ಗಜೇಂದ್ರ ಚೌಹಾಣ್ ನೇಮಕ ವಿರುದ್ಧ ಕೂಗು ಕೇಳಿಬರುತ್ತಿದೆ.

ಗಜೇಂದ್ರ ಚೌಹಾಣ್‌ ಅವರು ‘ಮಹಾಭಾರತ’ ಧಾರಾವಾಹಿಯಲ್ಲಿ ಯುಧಿಷ್ಠಿರನ ಪಾತ್ರ ನಿರ್ವಹಿಸಿದ್ದರು. ಅಡೂರು ಗೋಪಾಲಕೃಷ್ಣನ್‌, ಶ್ಯಾಮ್‌ ಬೆನಗಲ್‌, ಗಿರೀಶ್‌ ಕಾರ್ನಾಡ್‌, ಯು. ಆರ್‌. ಅನಂತಮೂರ್ತಿ ಇತ್ಯಾದಿ ಗಣ್ಯರು ಈ ಸ್ಥಾನ ಅಲಂಕರಿಸಿದ್ದವರು. ಗಜೇಂದ್ರ ಚೌಹಾಣ್‌ ಅವರು ಬಿಜೆಪಿ ಸದಸ್ಯರಾಗಿರುವುದರಿಂದ ಅವರನ್ನು ನೇಮಿಸಲಾಗಿದೆ. ಇದೊಂದು ರಾಜಕೀಯ ನೇಮಕಾತಿ, ಅಧ್ಯಕ್ಷರಾಗಿ ನಮಗೆ ಮೋದಿಯವರ ಕೈಗೊಂಬೆ ಬೇಡವೇ ಬೇಡ ಎಂದು ಎಫ್ ಟಿಐಐ ವಿದ್ಯಾರ್ಥಿಗಳು ಘೋಷಣೆ ಕೂಗಿ ಜುಲೈ2 ರಂದು ಪ್ರತಿಭಟನೆ ನಡೆಸಿದ್ದರು.

Write A Comment