ಹೈದರಾಬಾದ್: ಮಕ್ಕಳಿಲ್ಲದ ಕಾರಣಕ್ಕೆ ಅಪಾರವಾಗಿ ನೊಂದುಕೊಂಡಿದ್ದ ಗೆಳೆಯನ ನೋವನ್ನು ಹೋಗಲಾಡಿಸಲು ಬಯಸಿದ ಮಹಿಳೆಯೋರ್ವಳು ಭಿಕ್ಷುಕರ ಮಗುವನ್ನು ಅಪಹರಿಸಿದ ಘಟನೆ ಹೈದರಾಬಾದಿನಲ್ಲಿ ನಡೆದಿದೆ.
ಜುಲೈ 6 ರಂದು ಈ ಘಟನೆ ನಡೆದಿದ್ದು ಆರೋಪಿ ಮಹಿಳೆಯನ್ನು ಹೈದರಾಬಾದ್ ಮಹಾನಗರಪಾಲಿಕೆಯ ಗುತ್ತಿಗೆ ನೌಕರಳಾಗಿರುವ ಭಾಗ್ಯ ಎಂದು ಗುರುತಿಸಲಾಗಿದೆ.
ಹುಬ್ಬಳಿ ಮೂಲದ ಭಿಕ್ಷುಕ ದಂಪತಿಗಳಾದ ಸಚಿನ್ ಮತ್ತು ಮಂಜುಲತಾ 4 ತಿಂಗಳ ಮಗುವೊಂದಿಗೆ ಅಂಗಡಿಯೊಂದರ ಮುಂದೆ ಮಲಗಿದ್ದರು. ನಿದ್ದೆಗೆ ಜಾರಿದ್ದ ಮಗುವಿನ ತಾಯಿಗೆ ಎಚ್ಚರವಾದಾಗ ಮಡಿಲಲ್ಲಿ ಮಗು ಮಹೇಶನಿರಲಿಲ್ಲ. ಹೀಗಾಗಿ ತಾಯಿ ದಬೀಪುರ ಪೊಲೀಸ್ ಠಾಣೆಯಲ್ಲಿ ಮಗ ಮಹೇಶ್ ನಾಪತ್ತೆಯಾದ ಕುರಿತು ಜುಲೈ 10 ರಂದು ಪ್ರಕರಣವನ್ನು ದಾಖಲಿಸಿದ್ದಳು.
ತನಿಖೆ ನಡೆಸಿದ ಪೊಲೀಸರಿಗೆ ನೀಲಿ ಸೀರೆ ತೊಟ್ಟ ಮಹಿಳೆಯೋರ್ವಳು ಮಗುವನ್ನು ಎತ್ತಿಕೊಂಡು ಸಾಗುತ್ತಿರುವ ದೃಶ್ಯಾವಳಿಗಳು ಹತ್ತಿರದ ಅಂಗಡಿಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಕಂಡುಬಂದಿದೆ. ಆಕೆಯನ್ನು ಪತ್ತೆ ಹಚ್ಚಿದ ಪೊಲೀಸರು ಬಂಧಿಸಿ ಠಾಣೆಗೆ ಕರೆ ತಂದಿದ್ದಾರೆ. ಮಗುವನ್ನು ಅಪಹರಿಸಿದ ಕಾರಣವನ್ನು ಕೇಳಿದ ಪೊಲೀಸರು ಆಕೆ ನೀಡಿದ ಉತ್ತರ ಕೇಳಿ ದಂಗು ಬಡಿದು ಹೋಗಿದ್ದರು. ಮಕ್ಕಳಿಲ್ಲದ ಗೆಳೆಯನೊಬ್ಬನಿಗೆ ಉಡುಗೊರೆಯಾಗಿ ನೀಡಲು ಮಗುವನ್ನು ಅಪಹರಿಸಿದ್ದಾಗಿ ಆಕೆ ಬಾಯ್ಬಿಟ್ಟಿದ್ದಾಳೆ.
ಮಗುವೀಗ ಪೋಷಕರ ಮಡಿಲಿಗೆ ಮರಳಿದೆ.