ಪ್ರಧಾನಿಯಾದ ಬಳಿಕ ದೀಪಾವಳಿಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಆಚರಿಸಿದ್ದ ಮೋದಿ ಅವರು ಈ ಬಾರಿಯ ರಂಜಾನ್ ಹಬ್ಬವನ್ನೂ ಸಹ ಅಲ್ಲಿಯೇ ಆಚರಿಸುವ ಸಾಧ್ಯತೆ ಇದೆ.
ಲಭ್ಯ ಮಾಹಿತಿ ಪ್ರಕಾರ ಜೂನ್ 18 ಅಥವಾ 19ರಂದು ನಡೆಯಲಿರುವ ಹಬ್ಬದ ದಿನದಂದು ಕಣಿವೆ ನಾಡಿನಲ್ಲಿ ಬಿಜೆಪಿ ಆಯೋಜಿಸಲಿರುವ ಈದ್ ಮಿಲಾದ್ ಸಮಾರಂಭದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಸಮಗ್ರ ಅಭಿವೃದ್ಧಿಗಾಗಿ ಒಂದು ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಅನ್ನು ಹಬ್ಬದ ಕೊಡುಗೆಯಾಗಿ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಉಗ್ರರ ಉಪಟಳದಿಂದ ತತ್ತರಿಸಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುದಾನದ ಕೊರತೆ ಇತ್ತು. ಅಲ್ಲದೇ ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪಕ್ಕೂ ಹಲವು ವ್ಯವಸ್ಥೆಗಳು ಹಾಳಾಗಿದ್ದವು. ಈ ಹಿನ್ನೆಲೆಯಲ್ಲಿ ರಂಜಾನ್ ಹಬ್ಬದ ಕೊಡುಗೆಯಾಗಿ ಪುನರ್ವಸತಿ ಮತ್ತು ಅಭಿವೃದ್ಧಿ ಪ್ಯಾಕೇಜ್ ಎಂಬ ಹೆಸರಿನ ಪ್ಯಾಕೇಜ್ ನೀಡಲಿದ್ದಾರೆ ಎನ್ನಲಾಗುತ್ತಿದೆ.