ಸ್ವಯಂಘೊಷಿತ ದೇವಮಾನವ ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣದ ಪ್ರಮುಖ ಸಾಕ್ಷಿ ಕೃಪಾಲ್ ಸಿಂಗ್ ಶುಕ್ರವಾರ ರಾತ್ರಿ ತಿಂದಿದ್ದ ಗುಂಡೇಟಿನ ಪರಿಣಾಮ ಮೃತಪಟ್ಟಿದ್ದಾನೆ.
ಶುಕ್ರವಾರ ಕೃಪಾಲ್ ಸಿಂಗ್ ಷಹಜಾನ್ಪುರ ಜಿಲ್ಲೆಯಲ್ಲಿ ಮೇಲೆ ಮಾರುಕಟ್ಟೆಯಿಂದ ಮನೆಗೆ ಬರುತ್ತಿದ್ದಾಗಅಪರಿಚಿತ ಶಸ್ತ್ರಧಾರಿಗಳು ಗುಂಡಿನ ದಾಳಿ ನಡೆಸಿದ್ದರು. ಗುಂಡೇಟಿನಿಂದ ಗಾಯಗೊಂಡ ಕೃಪಾಲ್ ಸಿಂಗ್ ಅವರನ್ನು ಬರೇಲಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ರಾತ್ರಿ 23.25ರ ಸಮಯದಲ್ಲಿ ಕೃಪಾಲ್ ಸಾವನ್ನಪ್ಪಿದ್ದಾರೆ.
ಈ ಮೂಲಕ ಅಸಾರಾಂ ಬಾಪು ಅವರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಾಕ್ಷಿಗಳು ಹತ್ಯೆಯಾದಂತಾಗಿದ್ದು ಪ್ರಕರಣ ಮತ್ತಷ್ಟು ಗಂಭೀರತೆ ಪಡೆಯುವ ಸಾಧ್ಯತೆ ಇದೆ. ಈ ನಡುವೆ ದಾಳಿಕೋರರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು ಕೊಲೆಗಾರರನ್ನು ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.