ಚೆನ್ನೈ: ತನ್ನ ಮೇಲೆ ಅತ್ಯಾಚಾರವೆಸಗಿದವನ ಜೊತೆ ಯಾವುದೇ ರಾಜಿಗೂ ಸಿದ್ದವಿಲ್ಲವೆಂದು ತಿಳಿಸಿರುವ ಸಂತ್ರಸ್ಥೆ ನ್ಯಾಯಾಲಯದ ಶಿಕ್ಷೆಯಿಂದ ಪಾರಾಗಲು ಅಪರಾಧಿ ಈ ನಾಟಕವಾಡುತ್ತಿದ್ದಾನೆಂದು ಆರೋಪಿಸಿದ್ದಾಳೆ.
ಮದ್ರಾಸ್ ಹೈಕೋರ್ಟ್ ಅತ್ಯಾಚಾರ ಆರೋಪದ ಮೇಲೆ ಶಿಕ್ಷೆಗೊಳಗಾಗಿದ್ದ ಮೋಹನ್ ಎಂಬಾತನಿಗೆ ಆತ ತಾನು ಸಂತ್ರಸ್ಥೆಯನ್ನು ವಿವಾಹವಾಗುವುದಾಗಿ ತಿಳಿಸಿದ್ದ ಮೇರೆಗೆ ಆಕೆಯೊಂದಿಗೆ ಸಂಧಾನ ನಡೆಸಲು ಅನುವು ಮಾಡಿಕೊಟ್ಟಿದ್ದು, ಇದೀಗ ಅತ್ಯಾಚಾರಕ್ಕೊಳಗಾದ ಯುವತಿ ಯಾವುದೇ ಕಾರಣಕ್ಕೂ ತಾನು ಆತನೊಂದಿಗೆ ಮದುವೆಯಾಗಲು ಸಿದ್ದಳಿಲ್ಲವೆಂದು ಸ್ಪಷ್ಟ ಮಾತುಗಳಲ್ಲಿ ಹೇಳಿರುವ ಕಾರಣ ಮತ್ತೆ ಜೈಲು ಕಂಬಿ ಎಣಿಸಬೇಕಾಗಿದೆ.
ಮೋಹನ್ ಎಂಬಾತ 2008 ರಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪಿ ಮೋಹನನಿಗೆ 7 ವರ್ಷಗಳ ಕಾಲ ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು. ಈ ಮಧ್ಯೆ ಗರ್ಭಿಣಿಯಾಗಿದ್ದ ಸಂತ್ರಸ್ಥೆ ಮಗುವಿಗೆ ಜನ್ಮ ನೀಡಿದ್ದು, ಆ ಹೆಣ್ಣು ಮಗುವಿಗೀಗ ಆರು ವರ್ಷಗಳಾಗಿವೆ.
ಯುವತಿಯ ಪೋಷಕರೂ ಸಾವನ್ನಪ್ಪಿದ ಬಳಿಕ ಆಕೆ ತನ್ನ ಮಗುವಿನ ಜೊತೆ ಆನಾಥಳಾಗಿದ್ದು, ಸಂತ್ರಸ್ಥೆ ಒಪ್ಪಿದರೆ ವಿವಾಹವಾಗುವುದಾಗಿ ಅಪರಾಧಿ ಮೋಹನ್ ನ್ಯಾಯಾಲಯಕ್ಕೆ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಮಾತುಕತೆಗೆ ಅನುವು ಮಾಡಿಕೊಟ್ಟಿದ್ದು, ಇದು ವಿವಾದಕ್ಕೆ ಕಾರಣವಾಗಿತ್ತು.