ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ‘ರಾಜ ಧರ್ಮ’ ಅನುಸರಿಸುವುದನ್ನು ಬಿಟ್ಟು, ‘ರಾಜೆ ಧರ್ಮ’ದ ಹಿಂದೆ ಬಿದ್ದಿದ್ದಾರೆ, ಎಂದು ಲಲಿತ್ ಮೋದಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶನಿವಾರ ಟೀಕಿಸಿದೆ.
‘ಬಿಜೆಪಿಯು ‘ರಾಜೆ ಧರ್ಮ’ ಮತ್ತು ‘ಲಲಿತ್ ಧರ್ಮ’ವನ್ನು ಅನುಸರಿಸುವುದನ್ನು ಬಿಡಲಿ. ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅರಸ್ ಮತ್ತು ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಅವರಿಂದ ರಾಜೀನಾಮೆ ಪಡೆಯಲಿ’ ಎಂದು ಕಾಂಗ್ರೆಸ್ ವಕ್ತಾರ ಅಜಯ್ ಕುಮಾರ್ ಶನಿವಾರ ಸುದ್ದಿಗಾರರಲ್ಲಿ ಹೇಳಿದರು.
‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ಜನರಿಗೆ ಆಶ್ವಾಸನೆ ನೀಡಿದಂತೆ ಕಪ್ಪು ಹಣ ಹಾಗೂ ಭ್ರಷ್ಟಾಚಾರ ನಿಗ್ರಹಕ್ಕೆ ಯಾವುದೇ ಕ್ರಮ ಕೈಗೊಳ್ಳದೆ, ಜನರನ್ನು ಭ್ರಮನಿರಸನವಾಗುವಂತೆ ಮಾಡಿದ್ದಾರೆ. ಇವುಗಳ ಕ್ರಮ ಕೈಗೊಳ್ಳುವುದು ಬಿಟ್ಟು, ಮೋದಿಯೇ ಭ್ರಷ್ಟರನ್ನು ರಕ್ಷಿಸುತ್ತಿದ್ದಾರೆ,’ ಎಂದು ಟೀಕಿಸಿದರು.
ಮೊದಲು ರಾಜೆಗೆ ಬೆಂಬಲಿಸಲು ನಿಕಾರಿಸಿದ ಬಿಜೆಪಿ, ಇದೀಗ ಅವರ ಪರವಾಗಿ ಮಾತನಾಡುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್ನಿಂದ ಇಂಥ ಟೀಕೆಗಳು ವ್ಯಕ್ತವಾಗಿದ್ದು, ‘ಲಲಿತ್ ಮೋದಿಯಂಥವರಿಗೆ ವಲಸೆ ದಾಖಲೆ ಪಡೆಯಲು ಸಹಕರಿಸಿ, ಮೋದಿ ಸರಕಾರ ರಾಷ್ಟ್ರ ವಿರೋಧಿ ನೀತಿ ಅನುಸರಿಸುತ್ತಿದೆ,’ ಎಂದು ಆರೋಪಿಸಿದೆ.
13 ವರ್ಷಗಳ ಹಿಂದೆ ಗುಜರಾತ್ನಲ್ಲಿ ಕೋಮು ಹಿಂಸಾಚಾರ ಸಂಭವಿಸಿದಾಗ ‘ರಾಜ ಧರ್ಮವನ್ನು ಪಾಲಿಸಿ’ ಎಂದು ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಗೆ ಅಂದಿನ ಪ್ರಧಾನಿ ವಾಜಪೇಯಿ ಸೂಚಿಸಿರುವುದು ಇಲ್ಲಿ ಉಲ್ಲೇಖಾರ್ಹ.