ಹೈದರಾಬಾದ್: ಎರಡು ಮಕ್ಕಳ ತಾಯಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯನ್ನು ಮನೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಅಮಾನುಷ ಘಟನೆ ನಡೆದಿದೆ.
ಹೈದರಾಬಾದಿನ ನಾಚರಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಲಕ್ಷ್ಮೀ ನಗರದಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಕಂಪನಿಯಲ್ಲಿ ಸೂಪರ್ ವೈಸರ್ ಆಗಿದ್ದ ಕೃಷ್ಣ ಎಂಬವರು ಹತ್ಯೆಗೀಡಾಗಿದ್ದಾರೆ. ಎಂಟು ವರ್ಷಗಳ ಹಿಂದೆ ಇವರ ವಿವಾಹ ಭಾಗ್ಯಶ್ರೀ ಎಂಬಾಕೆಯೊಂದಿಗೆ ನೆರವೇರಿದ್ದು, ದಂಪತಿಗಳಿಗೆ ಇಬ್ಬರು ಮಕ್ಕಳೂ ಇದ್ದಾರೆ.
ಭಾಗ್ಯಶ್ರೀ ತನ್ನ ವಿವಾಹಕ್ಕೂ ಮುನ್ನವೇ ರಾಜಶೇಖರ್ ಎಂಬಾತನೊಂದಿಗೆ ಸಂಬಂಧ ಹೊಂದಿದ್ದಳೆನ್ನಲಾಗಿದ್ದು, ವಿವಾಹದ ನಂತರವೂ ಇವರಿಬ್ಬರ ನಡುವಿನ ಅನೈತಿಕ ಸಂಬಂಧ ಮುಂದುವರೆದಿತ್ತೆನ್ನಲಾಗಿದೆ. ಈ ವಿಚಾರ ಭಾಗ್ಯಶ್ರೀ ಪತಿ ಕೃಷ್ಣ ಅವರ ಗಮನಕ್ಕೆ ಬರುತ್ತಿದ್ದಂತೆಯೇ ಪತ್ನಿಗೆ ಆತನ ಸಂಪರ್ಕವಿಟ್ಟುಕೊಳ್ಳದಂತೆ ಎಚ್ಚರಿಕೆ ನೀಡಿದ್ದರೆನ್ನಲಾಗಿದೆ. ಆದರೂ ತನ್ನ ಅನೈತಿಕ ಸಂಬಂಧ ಮುಂದುವರೆಸಿದ್ದ ಭಾಗ್ಯಶ್ರೀ ರಾತ್ರಿ ಪತಿ ಮನೆಯಲ್ಲಿದ್ದ ವೇಳೆ ಪ್ರಿಯಕರ ರಾಜಶೇಖರನನ್ನು ಕರೆಸಿಕೊಂಡು ಹತ್ಯೆ ಮಾಡಿ ಆತನೊಂದಿಗೆ ಪರಾರಿಯಾಗಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ನಾಚಾರಾಮ್ ಪೊಲೀಸ್ ಠಾಣಾ ಪೊಲೀಸರು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.