ಜೈಪುರ, ಜೂ.19- ದಿನದಿಂದ ದಿನಕ್ಕೆ ಬಿಡಿಸಿಕೊಳ್ಳಲಾಗದ ಉರುಳಾಗಿ ಪರಿಣಮಿಸುತ್ತಿರುವ ಲಲಿತ್ಗೇಟ್ ಹಗರಣದಲ್ಲಿ ಸಿಕ್ಕಿಹಾಕಿಕೊಂಡು ಪರಿತಪಿಸುತ್ತಿರುವ ರಾಜಸ್ಥಾನ ಮುಖ್ಯಮಂತ್ರಿ ವುಸಂಧರ ರಾಜೆ ಅವರು ಬೆನ್ನು ನೋವಿನ ನೆಪವೊಡ್ಡಿ ತಮ್ಮ ಪಂಜಾಬ್ ಭೇಟಿ ಕಾರ್ಯಕ್ರಮದಿಂದ ನುಣುಚಿಕೊಂಡಿದ್ದಾರೆ.
ಹಗರಣ ಬೆಳಕಿಗೆ ಬಂದಂದಿನಿಂದ ಇದೇ ಮೊದಲ ಬಾರಿಗೆ ವಸುಂಧರಾ ಅವರು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರೊಂದಿಗೆ ಮುಖಾಮುಖಿಯಾಗಬೇಕಿತ್ತು. ಆನಂದ್ಪುರ್ ಸಾಹಿಬ್ನಲ್ಲಿ ನಡೆಯುವ ಪಕ್ಷದ ಸಭೆಯಲ್ಲಿ ವಸುಂಧರಾ ಅವರು ಇಂದು ಅಮಿತ್ ಷಾ ಮತ್ತು ಗೃಹ ಸಚಿವ ರಾಜನಾಥ್ಸಿಂಗ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಬೇಕಾಗಿತ್ತು. ಆದರೆ, ಬೆನ್ನುನೋವು ಬಲವಾಗಿದ್ದು, ಅವರು ಪ್ರಯಾಣಿಸುವಂತಿಲ್ಲ ಎಂದು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ತಿಳಿಸಿದ್ದಾರೆ.
ಐಪಿಎಲ್ ಬೆಟ್ಟಿಂಗ್ ಮತ್ತು ಕಳ್ಳಾಟ ದಂಧೆಯ ಪ್ರಮುಖ ಆರೋಪಿ ಲಲಿತ್ ಮೋದಿ ಪ್ರಸ್ತುತ ಲಂಡನ್ನಲ್ಲಿದ್ದು, ಆರೋಪಿಗೆ ನೆರವು ನೀಡಿದ ವಿವಾದದಲ್ಲಿ ಸಿಲುಕಿರುವ ವಸುಂಧರಾ ಪಕ್ಷದ ಮುಖಂಡರಿಗೆ ತೀವ್ರ ಮುಜುಗರ ಉಂಟುಮಾಡಿದ್ದಾರೆ. ಲಲಿತ್ಮೋದಿ, ರಾಜಸ್ಥಾನ ಮುಖ್ಯಮಂತ್ರಿ ಪರವಾಗಿ ತಾನೇ ಅಧಿಕಾರ ಚಲಾಯಿಸುತ್ತಿದ್ದ , ಆಡಳಿತದ ಎಲ್ಲ ವಿಷಯಗಳಲ್ಲೂ ಹಸ್ತಕ್ಷೇಪ ಮಾಡುತ್ತಿದ್ದ ಎಂದು ಐಎಎಸ್ ಅಧಿಕಾರಿಗಳು ಹೇಳಿರುವುದು, ಮುಖ್ಯಮಂತ್ರಿಯನ್ನು ಭಾರೀ ಸಂಕಷ್ಟಕ್ಕೆ ಸಿಲುಕಿಸಿದೆ.