ಜೋಧಪುರ (ಪಿಟಿಐ): ಲೈಂಗಿಕ ಕಿರುಕುಳದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ಅವರನ್ನು ಬಿಡುಗಡೆ ಮಾಡಬೇಕು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಇಲ್ಲಿನ ನ್ಯಾಯಾಲಯದಲ್ಲಿ ಶುಕ್ರವಾರ ವಾದಿಸಿದ್ದಾರೆ.
ಒಂದು ಗಂಟೆ ಅಸಾರಾಮ್ ಜಾಮೀನು ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪನ್ನು ಶನಿವಾರಕ್ಕೆ ಮುಂದೂಡಿದೆ.
ಅಸಾರಾಮ್ ಅವರ ವಿರುದ್ಧ ದೋಷರೋಪಣೆ ಮಾಡಲಾಗಿದ್ದು, ಸಾಂದರ್ಭಿಕ ಸಾಕ್ಷ್ಯಾಧಾರಗಳ ಮೇಲೆ ಅವರನ್ನು ಶಿಕ್ಷೆಗೆ ಒಳಪಡಿಸಲಾಗಿದೆ ಎಂಬುದನ್ನು ನಾನು ನಿರೂಪಿಸಿದ್ದೇನೆ ಎಂದು ಹೇಳಿರುವ ಸುಬ್ರಮಣಿಯನ್ ಸ್ವಾಮಿ, ತೀರ್ಪು ಅಸಾರಾಮ್ ಪರವಾಗಿ ಬರುವ ವಿಶ್ವಾಸವಿದೆ ಎಂದಿದ್ದಾರೆ
ತಮ್ಮ ಪರ ನ್ಯಾಯಾಲಯದಲ್ಲಿ ವಾದ ಮಾಡುವಂತೆ ಅಸಾರಾಮ್ ಸಹಿ ಮಾಡಿದ ಪತ್ರ ಗುರುವಾರ ನನಗೆ ತಲುಪಿತು. ಇಲ್ಲಿ ಅವರಿಗೆ ಜಾಮೀನು ದೊರೆಯದಿದ್ದರೆ ಮುಂದಿನ ಹಂತದ ನ್ಯಾಯಾಲಯದಲ್ಲಿ ಅವರ ಜಾಮೀನಿಗೆ ಹೋರಾಡುತ್ತೇನೆ ಎಂದು ಹೇಳಿದ ಸ್ವಾಮಿ, ‘ಅಸಾರಾಮ್ ಜಾಮೀನು ಪಡೆಯಲು ಅರ್ಹರಾಗಿದ್ದಾರೆ’ ಎಂದು ತಿಳಿಸಿದ್ದಾರೆ.
ಆದರೆ ಅಸರಾಮ್ ಜಾಮೀನಿಗೆ ವಿರೋಧ ವ್ಯಕ್ತಪಡಿಸಿರುವ ಸರ್ಕಾರಿ ವಕೀಲ ಸೋಲಂಕಿ, ಅಸಾರಾಮ್ ವಿರುದ್ಧ ಯಾವ ಪ್ರರಕಣ ದಾಖಲಿಸಲಾಗಿದೆ ಎಂಬುದನ್ನು ಪ್ರಮುಖವಾಗಿ ಪರಿಗಣಿಸಬೇಕು ಎಂದು ವಾದಿಸಿದ್ದಾರೆ.