ನವದೆಹಲಿ: ವಿದೇಶಾಂಗ ಸಚಿವೆ ಆಯ್ತು, ಈಗ ರಾಜಸ್ಥಾನ ಮುಖ್ಯಮಂತ್ರಿ ವಸುಂಧರ ರಾಜೇ ಅವರನ್ನು ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಜತೆಗಿನ ಆತ್ಮೀಯತೆ ಮತ್ತಷ್ಟು ಸಂಕಷ್ಟಕ್ಕೆ ತಳ್ಳುವುದು ಸ್ಪಷ್ಟವಾಗಿದೆ.
ಈ ನಡುವೆ ಸುಷ್ಮಾ ಸ್ವರಾಜ್ ಅವರ ರಕ್ಷಣೆಗೆ ಪ್ರಧಾನಿ ಮೋದಿ ಅವರ ಸಂಪುಟವೇ ಧಾವಿಸಿದ್ದರೂ ರಾಜೇ ವಿಚಾರದಲ್ಲಿ ಮಾತ್ರ ಬಿಜೆಪಿ ಎಚ್ಚರಿಕೆಯ ನಡೆ ಇಡಲು ನಿರ್ಧರಿಸಿದೆ. ಇನ್ನಷ್ಟು ಸತ್ಯ ಹೊರಬೀಳುವವರೆಗೆ ರಾಜೇ ಅವರನ್ನು ಸಮರ್ಥಿಸಿಕೊಳ್ಳುವಂತಹ ಹೇಳಿಕೆ ನೀಡಬಾರದು ಎಂದು ಪಕ್ಷದ ವರಿಷ್ಠರು ಆದೇಶ ಹೊರಡಿಸಿದ್ದಾರೆ. ಅಲ್ಲದೆ ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಸ್ವತಃ ರಾಜೇ ಅವರಿಗೂ ಬಿಜೆಪಿ ಸೂಚಿಸಿದೆ ಎಂದು ವರದಿ ಮಾಡಲಾಗಿದೆ.
ಇನ್ನು ರಾಜೇ ಅವರ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು, ಆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಪ್ರತಿಕ್ರಿಯಿಸುವುದಾಗಿ ಹೇಳಿದರು.
ಈ ಮಧ್ಯೆ, ಲಲಿತ್ ಮೋದಿ ಅವರ ಜತೆಗಿನ ಮತ್ತಷ್ಟು ಮಾಹಿತಿ ಬಹಿರಂಗವಾಗುತ್ತಿದ್ದಂತೆ ಆತಂಕಗೊಂಡಿರುವ ರಾಜೇ ಅವರು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ದಿಢೀರ್ ಭೇಟಿ ನಿರ್ಧರಿಸಿದ್ದಾರೆ.