ಗಾಜಿಯಾಬಾದ್: ದೇಶಕ್ಕೆ ಅವಮಾನವಾಗುವ ರೀತಿಯಲ್ಲಿ ರಾಷ್ಟ್ರ ಧ್ವಜವನ್ನು ಮೈಗೆ ಸುತ್ತಿಕೊಂಡಿದ್ದಾರೆ ಎನ್ನುವ ಆರೋಪದ ಅಡಿಯಲ್ಲಿ ಬಾಲಿವುಡ್ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ವಿರುದ್ಧ ಉತ್ತರ ಪ್ರದೇಶದ ಗಾಜಿಯಾಬಾದ್ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ಕಳೆದ ಫೆಬ್ರವರಿ 15 ರಂದು ಅಡಿಲೇಡ್ನಲ್ಲಿ ನಡೆದ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ರಾಷ್ಟ್ರ ಧ್ವಜವನ್ನು ಮೈಗೆ ಸುತ್ತಿಕೊಂಡಿದ್ದನ್ನು ಆರೋಪಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಚೇತನ್ ದಿಮಾನ್ ದೂರುನೀಡಿದ್ದಾರೆ.
ದೂರುದಾರ ದಿಮಾನ್ ಮತ್ತು ಅವರ 5 ಜನ ಸ್ನೇಹಿತರು ಬಚ್ಚನ್ಗಳಿಬ್ಬರೂ ರಾಷ್ಟ್ರಧ್ವಜವನ್ನು ಅವಮಾನಿಸುವಂತೆ ಸುತ್ತಿಕೊಂಡಿದ್ದನ್ನು ನೋಡಿರುವುದಾಗಿ ದೂರುದಾರರ ಪರ ವಕೀಲ ಸಂಜೀವ್ ಶರ್ಮಾ ತಿಳಿಸಿದ್ದಾರೆ.
ರಾಷ್ಟ್ರ ಧ್ವಜಕ್ಕೆ ಈ ಇಬ್ಬರು ನಟರು ಅಂತರಾಷ್ಟ್ರೀಯ ಮಟ್ಟದಲ್ಲಿ ಅವಮಾನಿಸಿದ್ದು, ಭಾರತದ ಘನತೆಗೆ ಚ್ಯುತಿ ತಂದಿದ್ದಾರೆ. ಹೀಗಾಗಿ ರಾಷ್ಟ್ರ ಗೌರವ ಅವಮಾನ ನಿರ್ಭಂದ ಕಾಯ್ದೆ 1971 ಮತ್ತು 2002ರ ಧ್ವಜ ಸಂಹಿತೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.