ಆಸ್ಸಾಂನಲ್ಲಿ ಎಡೆ ಬಿಡದೇ ಸುರಿಯುತ್ತಿರುವ ಮಳೆಯಿಂದ ನೆರೆ ಪ್ರವಾಹ ಕಂಡುಬಂದಿದ್ದು ನೆರೆಯ ಅಬ್ಬರಕ್ಕೆ 80,000 ಕ್ಕೂ ಹೆಚ್ಚು ಜನರು ನೆಲೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಇಲ್ಲಿನ 10 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಾಗಿ ವಿದ್ಯುತ್ ಸೇರಿದಂತೆ ಸಂಪರ್ಕ ವ್ಯವಸ್ಥೆಯೂ ಹಾಳಾಗಿದ್ದು, ಇದರ ಜತೆಗೆ 28 ಹಳ್ಳಿಗಳು ಸಂಪೂರ್ಣ ಮುಳುಗಡೆಯಾಗಿದೆ ಎಂಬ ಮಾಹಿತಿ ಲಭಿಸಿದೆ.
ಬ್ರಹ್ಮಪುತ್ರ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಮಂಗಳವಾರ ಬೆಳಗ್ಗೆ ಸರ್ಕಾರ ನೆರೆ ಎಚ್ಚರಿಕೆ ನೀಡಿತ್ತು. ಅಲ್ಲದೇ ಬಾರ್ಪೇಟಾ, ಧೀಮಾಜಿ,ಸೋನಿತ್ಪುರ್,ಲಖೀಮ್ಪುರ್,ತೀನ್ಸುಖೀಯಾ ,ಡರಾಂಗ್,ನಾಲ್ಬಾರಿ ,ಗೋಲ್ಪಾರ ,ಜೋರ್ಹಾಟ್ ಮತ್ತು ಕಾಮ್ರೂಪ್ ಜಿಲ್ಲೆಗಲಲ್ಲಿ ನೆರೆ ಹೆಚ್ಚುತ್ತಿದ್ದು ಲಖೀಮ್ ಪುರ್ನಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಈಗಾಗಲೇ ಸುಮಾರು 192 ಹಳ್ಳಿಗಳ ಜನರು ನೆರೆಯಿಂದ ಕಂಗಾಲಾಗಿದ್ದು ಕೆಲವೆಡೆ ಗಂಜಿ ಕೇಂದ್ರವನ್ನೂ ಸ್ಥಾಪಿಸಲಾಗಿದೆ. ಒಂದೊಮ್ಮೆ ಮಳೆಯ ಅಬ್ಬರ ಇನ್ನೂ ಮುಂದುವರೆದರೆ ಇನ್ನಷ್ಟು ಅನಾಹುತ ಹೆಚ್ಚುವ ಸಾಧ್ಯತೆ ಇದೆ.