ನವದೆಹಲಿ,ಜೂ.7: ತುಂಬು ಗರ್ಭಿಣಿಯೊಬ್ಬಳ ಹೆರಿಗೆ ಸಮಯ ಬಂದರೂ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ಮೀನಾಮೇಷ ಎಣಿಸಿದ ಪರಿಣಾಮ ಬೀದಿಯಲ್ಲೇ ಮಗುವಿಗೆ ಜನ್ಮವಿತ್ತ ದುಃಸ್ಥಿತಿ ಪ್ರಸಂಗ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಪತಿ ಆಸ್ಪತ್ರೆಗೆ ಕರೆದುಕೊಂಡು ಹೋದ. ಆದರೆ ವೈದ್ಯೋ ನಾರಾಯಣ ಹರಿ ಎಂಬುದನ್ನು ಮರೆತ ಇಲ್ಲಿನ ವೈದ್ಯರು ಅಮಾನವೀಯವಾಗಿ ವರ್ತಿಸಿದ್ದಾರೆ. ಮಹಿಳೆ ಹೆರಿಗೆ ನೋವಿನಿಂದ ಬಳಲುತ್ತಿದ್ದರೂ ದಾಖಲಿಸಿಕೊಳ್ಳದ ವೈದ್ಯರು ಇಲ್ಲಿಂದ ಅಲ್ಲಿಗೆ, ಅಲ್ಲಿಂದು ಇಲ್ಲಿಗೆ ಅಲೆದಾಡಿಸಿದ್ದಾರೆ. ಈ ರೀತಿ ಅರ್ಧ ಗಂಟೆ ಸಮಯ ವ್ಯರ್ಥವಾದಾಗ ವಿಧಿಯಿಲ್ಲದೆ ಗರ್ಭಿಣಿ ಬೇರೊಂದು ಆಸ್ಪತ್ರೆಗೆ ಹೊರಡಲು ಮುಂದಾದರು.
ಇನ್ನೇನು ಆಟೋದಲ್ಲಿ ತೆರಳಬೇಕು ಎನ್ನುವಷ್ಟರಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಎಲ್ಲ ಘಟನೆಗೆ ಸಾಕ್ಷಿಯಾಗಿದ್ದು ಮಾಧ್ಯಮದವರು. ತಮ್ಮ ನಿಜ ಬಂಡವಾಳ ಹೊರ ಜಗತ್ತಿಗೆ ಬಯಲಾಗುತ್ತದೆ ಎಂದು ಗಾಬರಿಗೊಂಡ ವೈದ್ಯರು ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡರು. ಇಷ್ಟೆಲ್ಲ ನಡೆದಿದ್ದರೂ ಆಸ್ಪತ್ರೆಯ ಸಂಬಂಧಪಟ್ಟವರು ತುಟಿಕ್ ಪಿಟಿಕ್ ಎಂದಿಲ್ಲ. ತಾಯಿ ಮತ್ತು ಮಗುವಿನ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.