ನವದೆಹಲಿ: ಎಲ್ಲರೊಂದಿಗೂ ವಾಗ್ವಾದಕ್ಕಿಳಿಯುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಆಡಳಿತದ ಕಡೆಗೆ ಗಮನ ಕೊಡಿ ಎಂದು ಬಿಜೆಪಿ ಮಂಗಳವಾರ ‘ಸ್ನೇಹಪರ ಸಲಹೆ’ ನೀಡಿದೆ.
‘ಕೇಜ್ರಿವಾಲ್ ಅವರು ಚುನಾವಣೆಯಲ್ಲಿ ನಿರ್ಣಾಯಕ ಗೆಲವು ಸಾಧಿಸಿದ್ದಾರೆ. ಹೀಗಾಗಿ ಅವರು ಜನರಿಗಾಗಿ ಕೆಲಸ ಮಾಡಬೇಕು ಮತ್ತು ಆಡಳಿತ ನಡೆಸಬೇಕು. ಆದರೆ ಅವರ ಸರ್ಕಾರ ಪದೇ ಪದೆ ಅವಘಡಗಳಿಗೆ ಕಾರಣವಾಗುತ್ತಿರುವುದು ವಿಷಾದಕರ’ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.
‘ಅರವಿಂದ್ ಕೇಜ್ರಿವಾಲ್ ಜಿ, ನಿಮಗೊಂದು ಫ್ರೆಡ್ಲಿಯಾಗಿ ಸಲಹೆ ನೀಡುತ್ತಿದ್ದೇನೆ. ಆಡಳಿತ ನಡೆಸುವುದು ಗಂಭೀರ ವಿಷಯ. ದಯವಿಟ್ಟು ಇದನ್ನು ಗಮನದಲ್ಲಿಟ್ಟುಕೊಳ್ಳಿ’ ಎಂದು ರವಿಶಂಕರ್ ಅವರು ಸಲಹೆ ನೀಡಿದ್ದಾರೆ.
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಇತ್ತೀಚಿಗೆ ತಮ್ಮ ಪಕ್ಷದವರೊಂದಿಗೆ ಹಾಗೂ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ರಾಜನಾಥ್ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಷ್ಟೆ ಅಲ್ಲದೆ ಸರ್ಕಾರದ ಅಧಿಕಾರಿಗಳೊಂದಿಗೂ ವಾಗ್ವಾದಕ್ಕಿಳಿದಿದ್ದರು ಎಂದು ಸಚಿವರು ಹೇಳಿದರು.