ನವದೆಹಲಿ, ಮೇ 30: ಕೇಂದ್ರ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ವಿವಾದಿತ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಮಸೂದೆ ಜಾರಿಗೆ ಮತ್ತೊಮ್ಮೆ ಕೇಂದ್ರ ಸಚಿವ ಸಂಪುಟ ಶಿಫಾರಸು ನೀಡಿದೆ. ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಮಸೂದೆಯನ್ನು ರೈತರ ಲಾಭಕ್ಕಾಗಿ ಕೇಂದ್ರ ಸಚಿವ ಸಂಪುಟ ಶಿಫಾರಸು ಮಾಡಿದೆ ಎಂದು ಬಿಜೆಪಿ ನಾಯಕ ಮತ್ತು ದೂರಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಸಚಿವ ಸಂಪುಟ ಸಭೆಯ ನಂತರ ಈ ವಿಷಯ ತಿಳಿಸಿದ ಅವರು, ಭೂಸ್ವಾಧೀನ ಕಾಯ್ದೆ ಮಸೂದೆಯನ್ನು ಇಂದು ಮತ್ತೊಮ್ಮೆ ಕೇಂದ್ರ ಸಂಪುಟ ಅನುಮೋದಿಸಿದೆ. ಭೂಮಿ ಸ್ವಾಧೀನದ ವೇಳೆ ರೈತರು ಇನ್ನು ಮುಂದೆ ತೊಂದರೆ ಅನುಭವಿಸುವ ಸಾಧ್ಯತೆಗಳಿರುವುದಿಲ್ಲ. ರೈತರು ತಮ್ಮ ಭೂಮಿಗೆ ಸಾಕಷ್ಟು ಪರಿಹಾರ ಪಡೆಯಲಿದ್ದಾರೆ. ಭೂಸ್ವಾಧೀನ ಕಾಯ್ದೆ ಸಾಧಕ-ಬಾಧಕಗಳ ಪರಿಶೀಲನೆಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯ ಒಪ್ಪಿಗೆ ನೀಡಿದೆ.
ಕೇಂದ್ರ ಸರ್ಕಾರವು ಈ ಮೊದಲು ಕೂಡ ಎರಡು ಬಾರಿ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಸದನದಲ್ಲಿ ಮಂಡಿಸಿತ್ತು. ಬಿಜೆಪಿಗೆ ಬಹುಮತವಿರುವ ಲೋಕಸಭೆಯಲ್ಲಿ ವಿಧೇಯಕ ಅನುಮೋದನೆ ಪಡೆಯಿತಾದರೂ, ರಾಜ್ಯ ಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತವಿಲ್ಲದ ಕಾರಣ ಬಿದ್ದುಹೋಗಿತ್ತು. ಕಾಂಗ್ರೆಸ್ ವಿರೋಧ: ಆದರೆ, ಕೇಂದ್ರದ ಕ್ರಮವನ್ನು ವಿರೋಧಿಸಿರುವ ಕಾಂಗ್ರೆಸ್, ಎನ್ಡಿಎ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದೆ.