ಮೀರತ್: ತನ್ನ ತಂದೆ ಪರಸ್ತ್ರೀ ಜೊತೆ ಅನೈತಿಕ ಸಂಬಂಧ ಹೊಂದಿದ್ದರಿಂದ ಆಕ್ರೋಶಗೊಂಡ ಪುತ್ರನೊಬ್ಬ ಬೇಸ್ ಬಾಲ್ ಬ್ಯಾಟಿನಿಂದ ತಂದೆಯ ತಲೆ ಹೊಡೆದು ಹತ್ಯೆ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.
ವೃತ್ತಿಯಲ್ಲಿ ಫಿಜಿಷಿಯನ್ ಆಗಿದ್ದ 46 ವರ್ಷದ ಅಶೋಕ್ ಸಿಂಘಾಲ್ ಅವರ ಶವ ಮೀರತ್ ನ ಶಾಸ್ತ್ರಿ ನಗರದಲ್ಲಿರುವ ಅವರ ನಿವಾಸದಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವೃತ್ತಿ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದೇ ಎಂಬ ಅನುಮಾನದ ಮೇಲೆ ಆ ನಿಟ್ಟಿನತ್ತ ತಮ್ಮ ತನಿಖೆ ಮುಂದುವರೆಸಿದ್ದರು. ಅಶೋಕ್ ಸಿಂಘಾಲ್ ಅವರ ಪುತ್ರ ಅಂಕಿತ್ ಸಿಂಘಾಲ್ ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದ.
ಅಂಕಿತ್ ಸಿಂಘಾಲ್ ಪದೇ ಪದೇ ತನ್ನ ಹೇಳಿಕೆ ಬದಲಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ವೇಳೆ ಪ್ರಕರಣ ಬಯಲಿಗೆ ಬಂದಿದೆ. ಬಿಜ್ನೋರಿನ ಕಿರಣ್ ಎಂಬಾಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಅಶೋಕ್ ಸಿಂಘಾಲ್, ಪರ ಸ್ಥಳಕ್ಕೆ ಹೋಗುವ ಸಂದರ್ಭಗಳಲ್ಲಿ ಆಕೆಯನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದನೆನ್ನಲಾಗಿದೆ. ಇದರಿಂದ ಅಕ್ರೋಶಗೊಂಡಿದ ಮಗ ಅಂಕಿತ್ ಸಿಂಘಾಲ್, ಮೇ 20 ರಂದು ಪಾನಮತ್ತನಾಗಿ ಮನೆಗೆ ಬಂದು ಬೇಸ್ ಬಾಲ್ ಬ್ಯಾಟಿನಿಂದ ತಂದೆಯ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದ. ಈಗ ಆತನಿಂದ ಕೃತ್ಯಕ್ಕೆ ಬಳಸಿದ್ದ ಬ್ಯಾಟ್ ಹಾಗೂ ರಕ್ತಸಿಕ್ತ ಬಟ್ಟೆಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ.