ಹೊಸದಿಲ್ಲಿ: ತನ್ನ ಸರಕಾರ ದಾವೂದ್ ಇಬ್ರಾಹೀಂನನ್ನು ಭಾರತಕ್ಕೆ ಕರೆ ತರುತ್ತದೆ ಎಂಬುದಾಗಿ ಗೃಹ ಸಚಿವ ರಾಜ್ನಾಥ್ ಸಿಂಗ್ ಇತ್ತೀಚೆಗೆ ನೀಡಿರುವ ಹೇಳಿಕೆ ಉತ್ಪ್ರೇಕ್ಷೆಯಿಂದ ಕೂಡಿದೆ ಅನ್ನಿಸಬಹುದು. ಆದರೆ, ಭಾರತದ ‘ಮೋಸ್ಟ್ ವಾಂಟೆಡ್’ ಪಾತಕಿ ಪಾಕಿಸ್ತಾನದಲ್ಲಿ ಐಎಸ್ಐಯ ಆಶ್ರಯದಲ್ಲಿ ಬದುಕುತ್ತಿದ್ದಾನೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಸುಮಾರು ನಾಲ್ಕು ತಿಂಗಳ ಹಿಂದೆ ದಾವೂದ್ ದುಬೈಯಲ್ಲಿರುವ ತನ್ನ ಅನುಯಾಯಿ ಜಾವೇದ್ಗೆ ಪಾಕಿಸ್ತಾನದಿಂದ ಮೂರು ಕರೆಗಳನ್ನು ಮಾಡಿದ್ದು, ಅವುಗಳನ್ನು ಗುಪ್ತಚರ ಸಂಸ್ಥೆಗಳು ದಾಖಲಿಸಿಕೊಂಡಿವೆ. ಇದು ಗ್ಯಾಂಗ್ಸ್ಟರ್ ನೆರೆಯ ದೇಶದಲ್ಲಿ ಇರುವುದನ್ನು ಮತ್ತೊಮ್ಮೆ ಖಚಿತಪಡಿಸಿದೆ.
‘‘ದಾವೂದ್ ಪಾಕಿಸ್ತಾನದಲ್ಲಿಲ್ಲ’’ ಎಂಬ ಪಾಕಿಸ್ತಾನ ಹೈಕಮಿಶನರ್ ಅಬ್ದುಲ್ ಬಾಸಿತ್ರ ಹೇಳಿಕೆಯನ್ನು ಇವು ಸುಳ್ಳು ಎಂಬುದಾಗಿ ಸಾಧಿಸಿವೆ. ಜಾವೇದ್ ಭಾರತ ಮತ್ತು ದುಬೈಯಲ್ಲಿ ದಾವೂದ್ನ ಉದ್ಯಮವನ್ನು ನೋಡಿಕೊಳ್ಳುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.