ನವದೆಹಲಿ: ದೆಹಲಿ ವಿಶೇಷ ಪೊಲೀಸ್ ತಂಡ ನಡೆಸಿದ ಶೂಟೌಟ್ ನಿಂದಾಗಿ ಸಾವನ್ನಪ್ಪಿದ್ದ ಮನೋಜ್ ವಶಿಷ್ಠ ಕುಟುಂಬ ಸೋಮವಾರ ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ ಅವರನ್ನು ಭೇಟಿ ಮಾಡಿರುವುದಾಗಿ ತಿಳಿದುಬಂದಿದೆ.
ಮೃತ ಮನೋಜ್ ವಶಿಷ್ಠ ಅವರ ಪತ್ನಿ ಹಾಗೂ ಇನ್ನಿತರ ಕುಟುಂಬಸ್ಥರು ಇಂದು ಗೃಹ ಸಚಿವರ ಮನೆಗೆ ಭೇಟಿ ನೀಡಿದ್ದು, ಪ್ರಕರಣ ಕುರಿತಂತೆ ಸೂಕ್ತ ರೀತಿಯ ತನಿಖೆ ನಡೆಸುವಂತೆ ಮನವಿ ಸಲ್ಲಿಸಿದೆ ಎಂದು ತಿಳಿದುಬಂದಿದೆ. ಮನೋಜ್ ವಶಿಷ್ಠ ಕುಟುಂಬ ನೀಡಿದ ಮನವಿಯನ್ನು ಸ್ವೀಕರಿಸಿರುವ ರಾಜನಾಥ್ ಸಿಂಗ್ ಅವರು ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಮೃತ ಮನೋಜ್ ವಶಿಷ್ಠ ಕೊಲೆ ಪ್ರಯತ್ನ ಹಾಗೂ 50 ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದನು ಎಂದು ಹೇಳಿದ್ದ ದೆಹಲಿ ವಿಶೇಷ ತಂಡದ ಪೊಲೀಸರು ಶನಿವಾರ ಶೂಟೌಟ್ ಮಾಡಿ ಮನೋಜ್ ವಶಿಷ್ಠ ಎಂಬುವವರನ್ನು ಹತ್ಯೆ ಮಾಡಿತ್ತು.
ಪೊಲೀಸರ ಈ ಕ್ರಮವನ್ನು ವಿರೋಧಿಸಿದ್ದ ಮೃತ ಮನೋಜ್ ವಶಿಷ್ಠ ಕುಟುಂಬ ಇದೊಂದು ನಕಲಿ ಶೂಟೌಟ್ ಪ್ರಕರಣವಾಗಿದ್ದು, ಮನೋಜ್ ವಶಿಷ್ಠ ಯಾವುದೇ ತಪ್ಪು ಮಾಡಿಲ್ಲ ಎಂದು ಆರೋಪ ವ್ಯಕ್ತಪಡಿಸಿತ್ತು. ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ದೆಹಲಿ ವಿಶೇಷ ಪೊಲೀಸ್ ತಂಡ, ದೆಹಲಿ, ಮುಂಬೈ ಹಾಗೂ ಚಂಡೀಗಡದಲ್ಲಿ ಮನೋಜ್ ವಶಿಷ್ಠ ವಿರುದ್ಧ 50 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅರ್ಥಿಕ ದೌರ್ಬಲ್ಯ ನೆಪ ಹೂಡುವ ಮೂಲಕ ಮೃತ ಮನೋಜ್ ವಶಿಷ್ಟ ಕುಟುಂಬ ಪ್ರಕರಣದ ಕುರಿತು ತಪ್ಪು ಮಾಹಿತಿ ನೀಡುತ್ತಿದೆ ಎಂದು ಹೇಳಿತ್ತು.