ಹೊಸದಿಲ್ಲಿ: ದಿಲ್ಲಿ ಸೇರಿದಂತೆ ಉತ್ತರ ಭಾರತದಲ್ಲಿ ಮಂಗಳವಾರ 12.40ಕ್ಕೆ ಪ್ರಬಲ ಭೂಕಂಪದ ಅನುಭವವಾಗಿದೆ.
ಸುಮಾರು 60 ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪನದಲ್ಲಿ ಭೂಕಂಪದ ತೀವ್ರತೆ 6.9ರಷ್ಟು ದಾಖಲಾಗಿದೆ. ಯಾವುದೇ ಸಾವು, ನೋವು ಆಸ್ತಿ ಹಾನಿ ಬಗ್ಗೆ ಸದ್ಯ ವರದಿ ಆಗಿಲ್ಲ.
ಬಿಹಾರ, ಸಿಕ್ಕಿಂ, ಪಶ್ಚಿಮ ಬಂಗಾಳ, ಅಸ್ಸಾಂ, ಛತ್ತೀಸ್ಗಢ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶದಲ್ಲೂ ಕಂಪನದ ಅನುಭವವಾಗಿದ್ದು, ಭಯಭೀತರಾದ ಜನ ತಮ್ಮ ಮನೆ, ಕಚೇರಿಗಳಿಂದ ಹೊರಗೋಡಿದ್ದಾರೆ. ಭೂಕಂಪದ ಅನುಭವವಾದ ನಂತರ ಮೆಟ್ರೊ ರೈಲು ಸಂಚಾರ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ನೇಪಾಳದ ರಾಜಧಾನಿ ಕಾಠ್ಮಂಡುವಿನಿಂದ 83 ಕೀ.ಮೀ ದೂರದಲ್ಲಿರುವ ಚೀನಾ, ನೇಪಾಳ ಗಡಿ ಭಾಗದ ಕೊಡಾರಿಯಾ ಪ್ರದೇಶ ಭೂಕಂಪದ ಕೇಂದ್ರ ಬಿಂದುವಾಗಿದ್ದು, ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚು ಅಪಾಯಕಾರಿ:
ಏಪ್ರಿಲ್ 25ರ ಭೂಕಂಪದಂತೆ ಇಂದಿನ ಭೂಕಂಪವೂ ಮೇಲ್ಪದರದಲ್ಲಿ ಸಂಭವಿಸಿದ್ದು, ಇದು ಹೆಚ್ಚು ಅಪಾಯಕಾರಿ ಎನ್ನಲಾಗಿದೆ. ಸಣ್ಣ ಭೂ ಪ್ರದೇಶದಲ್ಲಿ ಹೆಚ್ಚು ಒತ್ತಡವನ್ನು ಬಿಡುಗಡೆ ಮಾಡುವುದರಿಂದ ಇದು ಹೆಚ್ಚು ಅನಾಹುತಕ್ಕೆಕಾರಣವಾಗುತ್ತದೆ. ಏಪ್ರಿಲ್ 25ರ ಪ್ರಬಲ ಭೂಕಂಪ ಹಾಗೂ ಪಶ್ಚಾತ್ ಕಂಪನಗಳಿಂದ ನೇಪಾಳದಲ್ಲಿ ಮೃತರ ಸಂಖ್ಯೆ 8,000 ದಾಟಿತ್ತು. 17 ಸಾವಿರ ಮಂದಿ ಗಾಯಗೊಂಡಿದ್ದರು. ಬಿಹಾರದಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.