ನವದೆಹಲಿ, ಮೇ 7: ರೈತರ ಭವಿಷ್ಯ ಬದಲು ಮಾಡು ವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಲೋಕಸಭೆಯಲ್ಲಿಂದು ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಅಮೇಥಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಏನೆಲ್ಲಾ ಭರವಸೆ ನೀಡಿದ್ದರು ಹಾಗೂ ಫುಡ್ ಪಾರ್ಕ್ ನಿರ್ಮಾಣಕ್ಕೆ ಅವರು ಭರವಸೆ ನೀಡಿದ್ದರು. ಆದರೆ ಫುಡ್ಪಾರ್ಕ್ ಕೈಬಿಡುವುದರ ಮೂಲಕ ರೈತರಿಗೆ ಭಾರೀ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದರು.
ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕೀಯ ಮಾಡಬಾರದು ಎಂದ ಅವರು, ಕೇಂದ್ರ ಸರ್ಕಾರ ರೈತರಿಗೆ ಯಾವುದೇ ಸಲವತ್ತು ನೀಡುತ್ತಿಲ್ಲ ಎಂದರು.
ಭೂಸುಧಾರಣೆ ವಿಧೇಯಕ ರೈತರಿಗೆ ಮಾರಕವಾಗಿದ್ದು, ಈ ಬಗ್ಗೆ ಹಲವಾರು ಬಾರಿ ಹೋರಾಟ ಮಾಡಿದರೂ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದರು. ರಾಹುಲ್ ಅವರ ಈ ಹೇಳಿಕೆಗೆ ಇತರ ವಿರೋಧ ಪಕ್ಷ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.
ರಾಹುಲ್ ಮಾತನಾಡುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಕೇಂದ್ರ ಗೃಹ ಸಚಿವ ರಾಜ್ನಾಥ್ಸಿಂಗ್ ಮಾತನಾಡಿ, ಸರ್ಕಾರ ಯಾವಾಗಲೂ ರೈತರ ಪರವಾಗಿಯೇ ಇದೆ. ರೈತರ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧ. ಈ ವಿಷಯದಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ. ಕಾಂಗ್ರೆಸ್ನವರಾದ ನೀವೇ ರಾಜಕೀಯ ಮಾಡುತ್ತೀರಿ ಎಂದು ತಿರುಗೇಟು ನೀಡಿದರು. ನಾನೂ ಸಹ ಓರ್ವ ರೈತನ ಮಗ. ರೈತರ ಬಗ್ಗೆ ನನಗೂ ಅಪಾರ ಕಾಳಜಿ ಇದೆ ಎಂದರು.