ಕೋಟ(ರಾಜಸ್ಥಾನ),ಮೇ 5: ಅಂಧ ಬಾಲಕಿಯನ್ನು ಅಪಹರಿಸಿ ಬಂಧನಲ್ಲಿಟ್ಟು , ಸತತ ಮೂರು ತಿಂಗಳ ಕಾಲ 9 ಮಂದಿ ದುಷ್ಕರ್ಮಿಗಳು ನಿರಂತರ ಅತ್ಯಾಚಾರವೆಸಗಿ ನಂತರ 50 ಸಾವಿರ ರೂ.ಗಳಿಗೆ ಮಾರಾಟ ಮಾಡಲು ಪ್ರಯತ್ನಿಸಿರುವ ಅತ್ಯಂತ ಹೇಯ ಕೃತ್ಯವೊಂದು ಇದೀಗ ಬೆಳಕಿಗೆ ಬಂದಿದೆ.
ರಾಜಸ್ಥಾನ ರಾಜ್ಯದ ಒರಾನ್ನ ಮೋತ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಂದನಖೇಡಿ ಗ್ರಾಮದಲ್ಲಿ ಈ ಅಮಾನುಷ ಘಟನೆ ನಡೆದಿದೆ. ಅಂಧ ಹುಡುಗಿಯನ್ನು ಖರೀದಿಸಲು ಯಾರೂ ಮುಂದಾಗದ ಹಿನ್ನೆಲೆಯಲ್ಲಿ
ಪುನಃ ಆಕೆಯನ್ನು ಚಂದನಖೇಡಿಗೆ ವಾಪಸ್ ಕರೆತಂದಿರುವ ದುಷ್ಕರ್ಮಿಗಳು ಬಾಲಕಿಯನ್ನು ಗ್ರಾಮದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳು ಅದೇ ಗ್ರಾಮದವರು ಎನ್ನಲಾಗಿದ್ದು , ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು , ಅಂಧ ಬಾಲಕಿ ತನಗೆ ನ್ಯಾಯ ದೊರಕಿಸಿ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಪಟ್ಟು ಹಿಡಿದಿದ್ದಾಳೆ ಎಂದು ತಿಳಿದುಬಂದಿದೆ. ಶೀಘ್ರ ನನಗೆ ನ್ಯಾಯ ಸಿಗಬೇಕು. ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಬಾಲಕಿ ಒತ್ತಾಯಿಸಿದ್ದಾಳೆ. ಈ ನಡುವೆ 9 ಮಂದಿ ದುಷ್ಕರ್ಮಿಗಳ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು , ಅಂಧ ಬಾಲಕಿಗೆ ನ್ಯಾಯ ದೊರಕಿಸಿಕೊಡಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಸತ್ಯೇಂದ್ರ ಸಿಂಗ್ ಭರವಸೆ ನೀಡಿದ್ದಾರೆ.