ನವದೆಹಲಿ: ತಮ್ಮ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಅವರೊಂದಿಗೆ ತಾನು ಅಕ್ರಮ ಸಂಬಂಧ ಹೊಂದಿರುವುದಾಗಿ ಕೆಲವು ವ್ಯಕ್ತಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆ ದೂರಿನ ನೀಡಿದ ಬಳಿಕ ಎಫ್ಐಆರ್ ದಾಖಲಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಈ ಸಂಬಂಧ ಏಪ್ರಿಲ್ 29ರಂದೇ ಐಪಿಸಿ ಸೆಕ್ಷನ್ 509(ಮಹಿಳೆಯ ಗೌರವಕ್ಕೆ ಧಕ್ಕೆ ತರುವುದು) ಹಾಗೂ ಸೆಕ್ಷನ್ 67ರಡಿ ನಂದನಗರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಪ್ರಕರಣದ ಕುರಿತು ತನಿಖೆ ಸಹ ನಡೆಯುತ್ತಿದೆ. ಆದರೆ ಪ್ರಕರಣ ಸಂಬಂಧ ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ಉಪ ಪೊಲೀಸ್ ಆಯುಕ್ತ (ಈಶಾನ್ಯ) ವೀಣು ಬನ್ಸಾಲ್ ಅವರು ಹೇಳಿದ್ದಾರೆ.
ಆದಾಗ್ಯೂ, ದೆಹಲಿ ಉಪ ಪೊಲೀಸ್ ಆಯುಕ್ತರು, ಎಫ್ಐಆರ್ನಲ್ಲಿರುವ ಆರೋಪಿಗಳ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದರು.
ಕುಮಾರ್ ವಿಶ್ವಾಸ್ ತಮ್ಮೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂಬ ಗಾಳಿ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ್ದರೂ ಇದನ್ನು ನಿರಾಕರಿಸದೇ ಮೌನ ವಹಿಸಿದ್ದ ಕುಮಾರ್ ವಿಶ್ವಾಸ್ ವಿರುದ್ದ ಆಪ್ ಕಾರ್ಯಕರ್ತೆ ದೆಹಲಿ ಪೊಲೀಸರಿಗೆ ಹಾಗೂ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಸಂಬಂಧ ಮಹಿಳಾ ಆಯೋಗ ಕುಮಾರ್ ವಿಶ್ವಾಸ್ ಅವರಿಗೆ ನೋಟಿಸ್ ಸಹ ಜಾರಿ ಮಾಡಿದೆ.
-ಕನ್ನಡ ಪ್ರಭ