ನವದೆಹಲಿ,ಏ.29- ಕೇಂದ್ರದಲ್ಲಿನ ಎನ್ಡಿಎ ಸರ್ಕಾರ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆಯಲ್ಲಿಂದು ತೀವ್ರ ತರಾಟೆಗೆ ತೆಗೆದುಕೊಂಡರು. ಚರ್ಚೆಯನ್ನು ಆರಂಭಿಸಿದ ರಾಹುಲ್ ರೈತರ ಸಮಸ್ಯೆ ಏನೆಂಬುದು ಪ್ರಧಾನಿ ನರೇಂದ್ರ ಮೋದಿಗೆ ಗೊತ್ತಿಲ್ಲ .ಅವರು ರೈತರ ಬಳಿ ಹೋಗಿ ಸಮಸ್ಯೆ ಅರಿಯಲಿ ಎಂದರಲ್ಲದೆ, ಈ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದಾಗ ಸದನದಲ್ಲಿ ಗೊಂದಲ ವಾತಾವರಣ ಉಂಟಾಯಿತು.
ರೈತರ ಬೆಳೆಗಳನ್ನು ಸಂರಕ್ಷಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ಎಡವಿದೆ ಎಂದಾಗ ಮಧ್ಯ ಪ್ರವೇಶಿಸಿದ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸಚಿವ ರಾಂವಿಲಾಸ್ ಪಾಸ್ವಾನ್ ಅವರು, ಪಂಜಾಬ್ದಿಂದ 57 ಲಕ್ಷ ಟನ್ ಆಹಾರ ಧಾನ್ಯಗಳನ್ನು ಸಂಗ್ರಹಿಸಲಾಗಿದೆ. ಮತ್ತು ಪಂಜಾಬ್ , ಹರಿಯಾಣ, ರಾಜ್ಯಗಳಲ್ಲಿನ ರೈತರ ಬೆಂಬಲ ಬೆಲೆ ಕಡಿತಗೊಳಿಸಿಲ್ಲ. ಬೆಳೆ ನಷ್ಟವಾದ ರೈತರಿಗೆ ಹೆಚ್ಚಿನ ಪರಿಹಾರ ನೀಡಲಾಗಿದೆ ಎಂದು ಹೇಳಿದರು.
ದೇಶದ ಕೆಲವೆಡೆ ಅಕಾಲಿಕ ಮಳೆಯಿಂದ ರೈತರ ಬೆಳೆಗಳು ನಾಶವಾದರೂ ಕೇಂದ್ರ ನೆರವಿಗೆ ಬಂದಿಲ್ಲ ಎಂದು ದೂರಿದ ರಾಹುಲ್, ಬೆಳೆ ನಷ್ಟದಿಂದ ರೈತರು ಕಂಗಾಲಾಗಿದ್ದಾರೆ ಅವರಿಗೆ ಆದ ನಷ್ಟವನ್ನು ತುಂಬಿಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ರಾಹುಲ್ ಹೇಳಿಕೆಯನ್ನು ವಿರೋಧಿಸಿದ ಸಚಿವ ಹರ್ಮಿತ್ಸಿಂಗ್ ಕ್ರೌರ್ ಅವರು ರೈತರು ಸಂಕಷ್ಟದಲ್ಲಿದಲ್ಲಿರುವಾಗ ರಾಹುಲ್ ಎಲ್ಲಿದ್ದರು ಎಂದು ಪ್ರಶ್ನಿಸಿದರಲ್ಲದೆ ರೈತರ ಬಗ್ಗೆ ನಮಗೂ ಕಾಳಜಿಯಿದೆ ಎಂದರು.
* ಎನ್ಡಿಎ ಸರ್ಕಾರ ರೈತ ವಿರೋಧಿ:
ಚಂಡೀಗಢ, ಏ.29-ಕೇಂದ್ರದಲ್ಲಿನ ಎನ್ಡಿಎ ಸರ್ಕಾರ ರೈತ ವಿರೋಧಿಯಾಗಿದ್ದು ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ದೂರಿದ್ದಾರೆ. ಪಂಜಾಬ್ನ ಕಾರ್ಯಕ್ರಮದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ಅವರೇ ದೇಶದ ಬೆನ್ನೆಲುಬು. ಅವರನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದಿದ್ದಾರೆ. ರೈತರಿಗೆ ಬರೀ ಸರ್ಕಾರ ಪರಿಹಾರದ ಹಣ ನೀಡಿದರೆ ಸಾಲದು, ಅವರ ಬಗ್ಗೆ ಅನುಕಂಪವನ್ನು ತೋರಿಸುವುದು ಅವಶ್ಯ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟೀಕಿಸಿದ ರಾಹುಲ್, ಮೇಕ್ ಇನ್ ಇಂಡಿಯಾ ಎಂದರೆ ಏನು ಎಂಬ ಬಗ್ಗೆ ನನಗೆ ಅರ್ಥವಾಗಬೇಕಿದೆ ಎಂದರು. ಎಲ್ಲ ಹಂತಗಳಲ್ಲೂ ರೈತರ ಶೋಷಣೆಯಾಗುತ್ತಿದೆ. ಅವರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಹಾಗೂ ನಷ್ಟದ ಪರಿಹಾರ ಸಿಗುತ್ತಿಲ್ಲ ಎಂದರಲ್ಲದೆ, ಕೇಂದ್ರದಲ್ಲಿನ ಎನ್ಡಿಎ ಸರ್ಕಾರ ಭೂಸ್ವಾಧೀನ ವಿಧೇಯಕದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿ ಇದೊಂದು ರಾಜಕೀಯ ಡ್ರಾಮಾ ಎಂದು ಬಣ್ಣಿಸಿದರು. ಪಾದಯಾತ್ರೆ: ರೈತರ ಸಮಸ್ಯೆಗಳನ್ನು ಅರಿಯಲು ಮಹಾರಾಷ್ಟ್ರದ ವಿದರ್ಭಕ್ಕೆ ಏ.30ರಂದು ಪಾದಯಾತ್ರೆ ಕೈಗೊಳ್ಳುವುದಾಗಿ ರಾಹುಲ್ ತಿಳಿಸಿದರು.
-ಕೃಪೆ: ಈ ಸಂಜೆ