ನವದೆಹಲಿ, ಏ.14- ಅಧಿಕಾರಾವಧಿ ಮುಗಿದರೂ ಸರ್ಕಾರಿ ಬಂಗಲೆಗಳನ್ನು ತೆರವುಗೊಳಿಸಲು ಹಿಂದೇಟು ಹಾಕಿದ್ದ ಕೇಂದ್ರದ ನಾಲ್ವರು ಮಾಜಿ ಸಚಿವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೂಡಲೇ ಬಂಗಲೆ ತೆರವುಗೊಳಿಸಬೇಕು. ಇಲ್ಲದಿದ್ದರೆ ಬಲವಂತ ವಾಗಿಯಾದರೂ ಮನೆಯಿಂದ ಹೊರ ಹಾಕಬೇಕಾಗುತ್ತದೆ ಎಂದು ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಸಂಸದರಲ್ಲದೆ, ರಾಜ್ಯಸಭೆಯಲ್ಲೂ ಇಲ್ಲದ ಮಾಜಿಗಳಿಗೇಕೆ ಬಂಗಲೆ ನೀಡಬೇಕೆಂದು ಅಧಿಕಾರಿಗಳು ನೋಟಿಸ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ಕೇಂದ್ರದ ಮಾಜಿ ಸಚಿವರಾದ ಅಂಬಿಕಾ ಸೋನಿ, ಕುಮಾರಿ ಶೆಲ್ಜಾ, ವಯಲಾರ್ ರವಿ ಹಾಗೂ ರಾಜೀವ್ ಶುಕ್ಲ ಅವರುಗಳಿಗೆ ನೋಟಿಸ್ ನೀಡಲಾಗಿದೆ. ಇದರ ಜತೆಗೆ ಹಾಲಿ ಸಂಸದರಾದ ಕರ್ನಾಟಕದ ಕೆ.ಎಚ್.ಮುನಿಯಪ್ಪ , ಅಧೀರ್ ರಂಜನ್ ಚೌದರಿ ಹಾಗೂ ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯಗೆ ಬಂಗಲೆ ತೆರವುಗೊಳಿಸುವಂತೆ ಸೂಚಿಸಲಾಗಿದೆ.
ದೆಹಲಿಯ ಲೂಟಿಯಾನ್ ಪ್ರದೇಶದಲ್ಲಿ ಬಂಗಲೆ ಪಡೆದಿದ್ದ ಇವರು ಹಲವು ಬಾರಿ ತೆರವುಗೊಳಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಕೇಂದ್ರದ ನಿಯಮಾವಳಿಯಂತೆ ಹಾಲಿ ಸಚಿವರಿಗೆ ಮಾತ್ರ ಬಂಗಲೆ ನೀಡಲು ಅವಕಾಶವಿದೆ. ಮಾಜಿ ಸಚಿವರು ಮತ್ತು ಸಂಸದರು ಬಂಗಲೆ ಪಡೆಯಬೇಕೆಂದರೆ ನಗರಾಭಿವೃದ್ಧಿ ಇಲಾಖೆಗೆ ಇಂತಿಷ್ಟು ಬಾಡಿಗೆ ನೀಡಬೇಕು. ಅದು ಲಭ್ಯತೆ ಆಧಾರದ ಮೇಲೆ ಮಾತ್ರ ನಿಗದಿಯಾಗಲಿದೆ. ಮೂಲಗಳ ಪ್ರಕಾರ ದೆಹಲಿಯ ಅಕ್ಬರ್ ರಸ್ತೆ , ಲೂಟಿಯಾನ್ ಪ್ರದೇಶದಲ್ಲಿ ಈ ರೀತಿ ಬಂಗಲೆ ಪಡೆದು ಅನೇಕರು ಠಿಕಾಣಿ ಹೂಡಿದ್ದಾರೆ.
ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಶೋಭಾ ಓಜಾ, ಲೂಟಿಯಾನ್ ಪ್ರದೇಶದಲ್ಲಿ ಬಂಗಲೆ ಪಡೆದು ಈಗಲೂ ಕೂಡ ತೆರವುಗೊಳಿಸಿಲ್ಲ. ಇದೇ ರೀತಿ ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಪ್ಯಾಂಥರಸ್ರದನ ಮುಖ್ಯಸ್ಥ ಭೀಮ್ಸಿಂಗ್ ಕಾಂಗ್ರೆಸ್ ಖಜಾಂಚಿ ಮೋತಿ ಲಾಲ್ ಓರಾ ಮತ್ತಿತರರು ಈಗಲೂ ಬಂಗಲೆಯಲ್ಲೇ ಠಿಕಾಣಿ ಹೂಡಿದ್ದಾರೆ.