ರಾಷ್ಟ್ರೀಯ

ಅರಿವನ್ನು ಬೆಳಗುವ ಭೀಮ ಬಾಣ

Pinterest LinkedIn Tumblr

svec12ambebr

-ಕೆ. ಫಣಿರಾಜ್‌ (ಕನ್ನಡಕ್ಕೆ: ಎನ್.ಎ.ಎಂ. ಇಸ್ಮಾಯಿಲ್)
ಸಂಪಾದಕರು ಪ್ರತಿಕ್ರಿಯೆಗಾಗಿ ಕೇಳಿರುವ ಎರಡು ಪ್ರಶ್ನೆಗಳು, ಓದಿಕೊಂಡಾಕ್ಷಣ, ಲೋಕಾಭಿರಾಮದ ಮಾತುಕತೆಗೆ ಸೆಳೆಯುವ ಧಾಟಿಯಲ್ಲಿವೆ ಅನಿಸಿತು; ಗತ-ವರ್ತಮಾನಗಳ ಕುರಿತು ಮಾತುಕತೆಯ ನಿರಾಳತೆಯಲ್ಲಿ ಉತ್ತರಿಸಿದಲ್ಲಿ ಯಾವ ಹೊಸ ವಿಷಯಗಳು ಹೊಳೆದಾವು ಎಂಬ ಅನುಮಾನದಲ್ಲಿ, ಸಮಕಾಲೀನ ಸಂಗಾತಿಗಳ ಉತ್ತರಗಳನ್ನು ಓದಿದೆ.

ಪ್ರತಿಯೊಬ್ಬರೂ, ತಮ್ಮ ಬದುಕಿನ ಅನುಭವ ಹಾಗು ಸಾಮಾಜಿಕ ಕ್ರಿಯಾಶೀಲತೆಯ ಕಾಯಕಗಳ ಅರಿವಿನಲ್ಲಿ ಪ್ರಶ್ನೆಗಳನ್ನು ಒಗ್ಗಿಸಿಕೊಂಡು ಪ್ರತಿಕ್ರಿಯೆ ನೀಡಿದ್ದಾರೆ. ಬಿಡಿಯಾಗಿ ಓದಿದಾಗ ಉತ್ತರಗಳು ವ್ಯಕ್ತಿಗತ ಬಿಡಿ ಅಭಿಪ್ರಾಯಗಳಂತೆ ಕಾಣುತ್ತಿತ್ತು. ಎಲ್ಲರನ್ನೂ ಒಟ್ಟಿಗೆ ಕೂರಿಸಿಕೊಂಡಂತೆ, ಒಟ್ಟಾಗಿ ಪೋಣಿಸಿಕೊಂಡು ಓದಿದಾಗ, ಹಲವು ಸ್ವರಗಳು ಲಯಬದ್ಧತೆಯಲ್ಲಿ ಒಂದಾಗಿ ಅರಿವಿನ ರಾಗ ರಚಿಸಿ ಉತ್ತರ ಕೊಟ್ಟಂತೆ ಕೇಳಿಸುತ್ತಿದೆ; ಹಾಗೂ, ಈ ರಾಗ ಅಂಬೇಡ್ಕರರ ಬದುಕು-ಬರಹಗಳನ್ನು, ಮತ್ತೊಂದು ನಿಟ್ಟಿನಿಂದಲೂ ಅರಿಯಬಹುದು ಎಂಬ ಹೊಳಹನ್ನು ಕೊಡುತ್ತಿದೆ.

‘ಅಂಬೇಡ್ಕರ್ ಮೊದಲ ಬಾರಿಗೆ ನಿಮ್ಮನ್ನು ಪ್ರವೇಶಿಸಿದ್ದು ಯಾವಾಗ? ಮತ್ತು ಹೇಗೆ?’ ಎಂಬ ಪ್ರಶ್ನೆಗೆ ಸರಿಸುಮಾರು ಎಲ್ಲರೂ, ತಮ್ಮ ಬಾಲ್ಯ /ಕಳೆದ ಕೆಲ ಕಾಲದ ಹಿಂದೆ ನಡೆದ ಒಂದು ಘಟನೆಯ ನೆನಪು ಮಾಡಿಕೊಳ್ಳುತ್ತಾರೆ; ಮತ್ತೂ ಆ ಘಟನೆ, ಜಾತಿ ಅಸ್ಪೃಶ್ಯತೆಯ ಆಚರಣೆ ಅತಿ ಸಾಮಾನ್ಯವೆಂಬಂತೆ, ಯಾವ ಪಶ್ಚಾತಾಪವೂ ಇಲ್ಲದೆ ನಡೆದು ಹೋದ ಗತ ಬದುಕಿನ ಅನುಭವ ಅಥವ ದೈನಂದಿನ ಬದುಕಿನ ಸಹಮತದಲ್ಲಿ ನಡೆದುಕೊಂಡು ಹೋಗುವ ಜಾತಿ ಅಸಮಾನತೆಯ ಅನುಭವವಾಗಿದೆ.

ಅಂಬೇಡ್ಕರ್ ಎಂದಾಕ್ಷಣ ಎಲ್ಲರೂ ಯಾಕೆ ಜಾತಿ ಅಸ್ಪೃಶ್ಯತೆ, ಅಸಮಾನತೆಗಳ ಗತದ ನೆನಪನ್ನು ಪ್ರಜ್ಞೆಗೆ ತಂದುಕೊಳ್ಳುತ್ತಾರೆ? ಮತ್ತೂ ಈ ವಿದ್ಯಮಾನ ‘ಅವಮಾನಕರ’, ‘ಅನ್ಯಾಯಯುತ’ ಎಂದು ಭಾವಿಸುತ್ತಾರೆ? ಎಂಬ ಪ್ರಶ್ನೆಗಳು ನನ್ನಲ್ಲಿ ಎದ್ದವು. ಈ ಪ್ರಶ್ನೆಗಳು ಎದ್ದಾಕ್ಷಣ ನನಗೆ ನೆನಪಾದದ್ದು ಅಂಬೇಡ್ಕರರ ಸ್ವಾನುಭವದ ಬದುಕಿನ ಕಥನ ‘ವೇಟಿಂಗ್ ಫಾರ್ ವೀಸಾ’. ಅಂಬೇಡ್ಕರ್ ಈ ಕಥನವನ್ನು ಬರೆದದ್ದು ತಾವು ಅಸ್ಪೃಶ್ಯತೆ ಅನುಭವಿಸಿದ ಕ್ಷಣದಲ್ಲಿಯಲ್ಲ.

ಅವರು ಒಬ್ಬ ಮಹರ್ ಜಾತಿಯಲ್ಲಿ ಹುಟ್ಟಿದವನಾಗಿ, ಅಂದಂದಿನ ಸಮಾಜದಲ್ಲಿ ವಾಸ್ತವಿಕವಾದ ಅಸ್ತಿತ್ವದ ನೋವುಗಳನ್ನು ಅಂದಂದಿಗೆ ಅನುಭವಿಸಿದರು; ಅಂದಂದಿನ ನೋವುಗಳಿಗೆ ಉತ್ತರವಾಗಿ, ಉತ್ತಮ ವಿದ್ಯಾಭ್ಯಾಸದಿಂದ ಫಲಿತವಾಗುವ ಸುಶಿಕ್ಷಿತ ಜೀವನಪದ್ಧತಿ ತಮಗೆ ಇಲ್ಲದಿರುವುದರಿಂದಲೇ ಸಮಾಜ ತಮ್ಮನ್ನು ಕನಿಷ್ಠವಾಗಿ ಕಾಣುತ್ತಿದೆ ಎಂದು ನಿರ್ಣಯಿಸಿಕೊಂಡರು; ನೋವುಗಳನ್ನು ಹಲ್ಲು ಕಚ್ಚಿ ಸಹಿಸಿಕೊಂಡು ಲಭ್ಯವಿರುವ ವಿದ್ಯಾಭ್ಯಾಸ ಪಡೆದರು; ಬರೋಡದ ಮಹಾರಾಜರ ಸಮಾಜಸುಧಾರಣಾ ಚಿಂತನೆಗಳ ಆಸರೆ ಪಡೆದು ಉನ್ನತ ವ್ಯಾಸಂಗಕ್ಕಾಗಿ ಬ್ರಿಟನ್ ಹಾಗು ಉತ್ತರ ಅಮೇರಿಕಗಳಿಗೆ ಹೋದರು;

ಅಲ್ಲಿಯೂ ವರ್ಣಭೇದ ನೀತಿಯ ತಾರತಮ್ಯ ಅನುಭವಿಸುವುದರ ಜೊತೆ, ಎದೆಗೊಟ್ಟು ನಿಂತು ಯೋಗ್ಯತೆ ತೋರಿದರೆ ಗೌರವ ಪಡೆಯುವ ವಿದ್ಯಮಾನಗಳನ್ನೂ ಅನುಭವಿಸಿದರು;  ಈ ಬಗೆಯ ಉನ್ನತ ವ್ಯಾಸಂಗಾಕಾಂಕ್ಷೆಯ ನಡುವೆ ಬರೋಡದ ಮಹಾರಾಜರು, ತಮ್ಮ ರಾಜ್ಯಾಡಳಿತಕ್ಕೆ ಅಂಬೇಡ್ಕರರ ಸೇವೆಯನ್ನು ಬಯಸಿ ಕರೆದಾಗ ಸಂತೋಷದಿಂದ ‘ಸ್ವದೇಶ’ಕ್ಕೆ ಮರಳಿದರು; ಮರಳಿ ಬಂದ ಆ ಕ್ಷಣದಲ್ಲಿ ಅವರಿಗೆ ಇದ್ದ ಭಾವ: ನಾನೀಗ ಉನ್ನತ ವ್ಯಾಸಂಗ ಪಡೆದು ಸುಶಿಕ್ಷಿತನಾಗಿರುವ ವ್ಯಕ್ತಿ, ‘ಸ್ವದೇಶ’ದಲ್ಲಿ, ಆ ಬಲದಲ್ಲಿ ತನಗೆ ದಕ್ಕಬೇಕಾದ ಮನ್ನಣೆ ಸಿಗುತ್ತದೆ. ಇಷ್ಟು ವ್ಯಕ್ತಿಯೊನ್ನತಿ ಗೌರವಾಭಿಮಾನದ ಭಾವ ಹೊತ್ತು ಅವರು ಮಹಾರಾಜರು ನೀಡಿದ್ದ ಗೌರವಯುತ ಹುದ್ದೆಯನ್ನು ನಿರ್ವಹಿಸಲು ಬರೋಡಕ್ಕೆ ಬಂದರು;

ಮಹಾರಾಜರು ನೀಡಿದ ಗೌರವಯುತ ಹುದ್ದೆಯೇನೋ ಸರಿ, ತಾನು ಅದನ್ನು ದೈನಂದಿನಲ್ಲಿ ನಿರ್ವಹಿಸಲು ಒಂದು ಯೋಗ್ಯ ವಸತಿಯನ್ನು ಹುಡುಕಿಕೊಳ್ಳಬೇಕಾಯ್ತು. ಅಂಥ ಉನ್ನತ ವ್ಯಾಸಂಗ ಹೊಂದಿದ ಒಬ್ಬ ಮಹರ್‌ಗೆ ಹದಿನೈದು ದಿನಗಳ ಕಾಲ, ಸಾಮಾನ್ಯ ಮನುಷ್ಯನೊಬ್ಬ ತನ್ನ ಅಸ್ತಿತ್ವಕ್ಕಾಗಿ ಬಳಸಬಹುದಾದ ಎಲ್ಲಾ ಚಾಲಾಕಿತನ ಬಳಸಿದ ನಂತರವೂ, ವಸತಿಗಾಗಿ ಒಂದು ಕೊಠಡಿ ದೊರಕುವುದಿಲ್ಲ; ನಿರ್ವಾಹವಿಲ್ಲದೆ, ಉನ್ನತ ವ್ಯಾಸಂಗ ಪಡೆದ ಮಹರ್, ಮಹಾರಾಜರು ನೀಡಿದ ಹುದ್ದೆ ತ್ಯಜಿಸಿ ಮುಂಬೈ ಶಹರದಲ್ಲಿ ಬದುಕು ನಡೆಸಲು ವಾಪಾಸಾಗಬೇಕಾಗುತ್ತದೆ.

ಬಾಯಲ್ಲಿ ಅನುದಿನದ ಕಹಿಯನ್ನು ಉಳಿಸಿದ ಈ ವಿದ್ಯಮಾನ ನಡೆದ ಐದಾರು ವರ್ಷಗಳ ನಂತರದಲ್ಲಿ ಅಂಬೇಡ್ಕರ್, ತಮ್ಮ ಗತ ಜೀವನದಲ್ಲಿ ನಡೆದ ಅಸ್ಪೃಶ್ಯತೆಯ ಘಟನೆಗಳನ್ನು ಒಂದೊಂದಾಗಿ ನೆನೆಸಿಕೊಳ್ಳುತ್ತಾರೆ. ಮತ್ತೂ ತನ್ನ ಹಾಗೆಯೇ ಯೋಗ್ಯ ಶಿಕ್ಷಣ ಪಡೆದು ಅಸ್ಪೃಶ್ಯತೆಯ ಆಚರಣೆಯ ಫಲವಾಗಿ ಹೀನ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿರುವವರ ವಾಸ್ತವಿಕ ಕಥನಗಳನ್ನು ಕಲೆ ಹಾಕಿದ ನಂತರ ‘ವೇಟಿಂಗ್ ಫಾರ್ ವೀಸಾ’ ಎಂಬ ಅಸ್ಪೃಶ್ಯತೆಯ ಅವಮಾನ ಜೀವನದ ಆರು ಕಥನಗಳನ್ನು ಬರೆಯುತ್ತಾರೆ;

ಈ ಬರಹದ ಧಾಟಿ ‘ದೇಶಿಯ’ರನ್ನು ಉದ್ದೇಶಿಸಿ ಇರುವುದಲ್ಲ; ‘ವಿದೇಶಿ’ಯರಲ್ಲಿ ಸಮಾನತೆಯ ಕುರಿತು ಅನುಕಂಪವುಳ್ಳ ಓದುಗರನ್ನು ಉದ್ದೇಶಿಸಿ– ನೋಡಿ, ನನ್ನ ಸ್ವದೇಶದಲ್ಲೇ ನಾನು ಪರಕೀಯ ಎಂದು ಜಗತ್ತಿಗೆ ಆರ್ತನಾಗಿ ಸಾರಿ ಹೇಳಲು ಎನ್ನುವುದು ಗಮನಾರ್ಹ. ಈ ಆರ್ತತೆ, ಅವರ ಬರೋಡ ಕಥನದಲ್ಲಿ ಹೃದಯ ವಿದ್ರಾವಕವಾಗಿ ಬರುತ್ತದೆ. ಬರೋಡ ತ್ಯಜಿಸಿ ಮುಂಬೈಗೆ ರೈಲು ಹಿಡಿಯುವುದಕ್ಕೆ ಅವರಿಗೆ ಇದ್ದ ಎರಡು ತಾಸುಗಳ ಬಿಡುವಿನಲ್ಲಿ, ಬರೋಡದ ಉದ್ಯಾನವನವೊಂದರಲ್ಲಿ ಒಂಟಿಯಾಗಿ ಕೂತು ಕೂಸಿನ ಹಾಗೆ ಬಿಕ್ಕಿ ಬಿಕ್ಕಿ ಅತ್ತೆ ಎಂದು ಅಂಬೇಡ್ಕರ್ ಬರೆಯುತ್ತಾರೆ.

‘ಸ್ವದೇಶಿ’ಯರಲ್ಲಿ ಆ ಅಂತಃಕರಣದ ನೋವಿಗೆ ಉತ್ತರವಿಲ್ಲ ಎಂಬುದು ಅಂಬೇಡ್ಕರರಿಗೆ ಖಾತ್ರಿಯಾಗಿ ಹೋಗಿತ್ತು. ಅಂದು ಮುಂಬೈ ಶಹರದಲ್ಲಾದರೂ ಅಂಬೇಡ್ಕರ್‌ಗೆ ಠಿಕಾಣಿ ಸಹಿತ ಒಂದು ಉದ್ಯೋಗ ಪಡೆದು ಜೈವಿಕ ಅಸ್ತಿತ್ವ ಉಳಿಸಿಕೊಳ್ಳಬಹುದಿತ್ತು; ಆದರೆ, ಬೆಂಗಳೂರನ್ನೂ ಸೇರಿದ ಹಾಗೇ ದೇಶದ ಎಲ್ಲ ಮಹಾನಗರಗಳಲ್ಲೂ ಇಂದು ಜಾತಿ ಶ್ರೇಣೀಕರಣದಲ್ಲಿ ಕೆಳಗಿರುವವರಿಗೆ ಆ ಶಹರಗಳು ‘ವೇಟಿಂಗ್ ಫಾರ್ ವೀಸಾ!’ ಆಗಿವೆ. ಸಹಜವಾಗಿಯೇ ಸಮಕಾಲೀನ ಸಂಗಾತಿಗಳು, ಅಂಬೇಡ್ಕರ್ ಎಂದಾಕ್ಷಣ ತಮ್ಮ ಗತದ ಅಸ್ಪೃಶ್ಯತೆ-ಅಸಮಾನತೆಗಳನ್ನು ನೆನೆಯುವುದು ಆಕಸ್ಮಿಕವಲ್ಲ. ಈ ಮೂಲಕ ಅವರು ಅಂಬೇಡ್ಕರರನ್ನು ಸ್ವಾನುಭವದ ಪಾತಳಿಯಲ್ಲಿ ಕಟು ಸಮಕಾಲೀರನ್ನಾಗಿ ತಂದು ನಿಲ್ಲಿಸಿದ್ದಾರೆ.

ಸಂಪಾದಕರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಂಗಾತಿಗಳೂ ಹಾಗು ಅವರ ಪ್ರತಿಕ್ರಿಯೆಗಳನ್ನು ಓದಿ ಈ ಬಗೆಯ ಮರುಪ್ರಶ್ನೆಗಳನ್ನು ಕೇಳಿಕೊಂಡು ಮೇಲೆ ತಿಳಿಸಿದ ಬಗೆಯಲ್ಲಿ ಉತ್ತರವನ್ನು ನಿರೂಪಿಸಿಕೊಳ್ಳುತ್ತಿರುವ ನಾನೂ, ದೇಶದ ಸ್ವಾತಂತ್ರ್ಯೋತ್ತರದಲ್ಲಿ ಮತ್ತೂ ಅಂಬೇಡ್ಕರರ ಮರಣದ ನಂತರದ ದಶಕಗಳಲ್ಲಿ ಹುಟ್ಟಿದವರು; ಅಂಬೇಡ್ಕರರ ಬದುಕು-ಬರಹಗಳನ್ನು ನಮ್ಮ ಗತ ಬದುಕು ಮತ್ತು ವರ್ತಮಾನದ ವಿದ್ಯಮಾನಗಳ ಸಂದರ್ಭದಲ್ಲಿ ಪ್ರಜ್ಞೆಗೆ ತಂದುಕೊಂಡು ಮರುನಿರೂಪಿಸಿಕೊಳ್ಳುತ್ತಿರುವ ವರ್ತಮಾನದ ವಾಸ್ತವ ನಾಡ ಜೀವಿಗಳು. ಈ ಸಂದರ್ಭದಲ್ಲಿ ಈ ಮಾತನ್ನು ಎತ್ತಿ ಹೇಳುತ್ತಿರುವುದಕ್ಕೆ ಕಾರಣವಿದೆ.

‘ಅಸ್ಪೃಶ್ಯತೆ ಇಂದಿಗೂ ಜೀವಂತವಾಗಿದ್ದು ಅಸ್ಪೃಶ್ಯತೆ ಬದುಕನ್ನು ಅಸಹನೀಯವಾಗಿಸುತ್ತಿದೆ’ ಎಂಬ ಸಾರ್ವಜನಿಕ ಪ್ರತಿಭಟನೆಗೆ ವಿರುದ್ಧವಾಗಿ ‘ಜಾತಿಭೇದ ವಸಾಹತುಶಾಹಿ ನಿರ್ಮಿಸಿದ ಭ್ರಮೆ; ವಸಾಹತುಶಾಹಿಪೂರ್ವ ಸಮಾಜದಲ್ಲಿ ಜಾತಿಭೇದ ಇರಲೇ ಇಲ್ಲ’ ಎಂದು ವಾದಿಸುತ್ತಿರುವ ಪಂಡಿತ್ತೋತ್ತಮರು ಇಂದು ಹುಟ್ಟಿದ್ದಾರೆ– ಅವರ ಸ್ವಾತಂತ್ರ್ಯ ಅವರದ್ದು. ಅಂತೆಯೇ, ಜಾತಿಭೇದದ ವಿದ್ಯಮಾನಗಳ ವಿರುದ್ಧ ಪ್ರತಿಭಟನೆ ನಡೆದಾಗ, ‘ಜಾತಿ ಅಸಮಾನತೆ’ ಎನ್ನುವುದು ವಾಸ್ತವದಲ್ಲಿ ಅನುಭವಿಸುತ್ತಿರುವವರ ‘ಸ್ವಾನುಭವ’ವಲ್ಲ; ಬದಲಾಗಿ ಅದು ‘ಪಾಶ್ಚಿಮಾತ್ಯಪ್ರೇರಿತ ಜ್ಞಾನ’ದ ಪ್ರಭಾವದಲ್ಲಿ ವಾಸ್ತವಿಕ ‘ಸ್ವದೇಶಾನುಭವ’ಕ್ಕೆ ಕುರುಡಾಗಿರುವವರ ಒರಟು ಜ್ಞಾನವಷ್ಟೇ; ‘ಅವಮಾನಿತ’ರಾದವರಿಗೆ ಇಲ್ಲದ ‘ಅವಮಾನ’ದ ಪ್ರಜ್ಞೆಯನ್ನು ಇಂಥವರು ಸೃಷ್ಟಿಸುತ್ತಿದ್ದಾರೆ ಎಂಬ ವಾದ ಮಂಡಿಸುವ ಸುಶಿಕ್ಷಿತರೂ ಇಂದು ಇದ್ದಾರೆ– ಅವರ ಸ್ವಾತಂತ್ರ್ಯವೂ ಅವರದ್ದು.

ನಾನು ಮುದ್ದಾಮಾಗಿ ‘ವೇಟಿಂಗ್ ಫಾರ್ ವೀಸಾ’ ಕೃತಿಯನ್ನು ಉದಾಹರಿಸಿದ್ದು ಇದಕ್ಕಾಗಿಯೇ. ಸ್ವತಃ ಅಂಬೇಡ್ಕರ್ ಅವರಿಗೆ, ತಾನು ಒಬ್ಬ ಮಹರ್ ಆಗಿ ಅನುಭವಿಸುತ್ತಿದ್ದ ಗತ ಕಾಲದ ವಾಸ್ತವಿಕ ಬದುಕು ಅಂದಂದಿಗೆ ನೋವಿನದಾಗಿದ್ದರೂ, ಇದಕ್ಕೊಂದು ಪರಿಹಾರವಿರಬಹುದು ಎಂಬ ಹುಡುಕಾಟವಿತ್ತು; ಅಂದು ಅವರು ಅದನ್ನು ‘ಅವಮಾನ-ಅಸಮಾನತೆ’ ಎಂದು ಗುರುತಿಸಿರಲಿಕ್ಕಿಲ್ಲ; ನೋವಿನ ಪರಿಹಾರಾರ್ಥ ದೇಶ ಸುತ್ತಿ ಕೋಶ ಓದಿ, ಅಂಬೇಡ್ಕರ್, ‘ನ್ಯಾಯ-ಸಮಾನತೆ-ಸಹಜೀವನ’ ಎನ್ನುವುದರ ಅರ್ಥವೇನು ಎಂದು ಸ್ವಾನುಭವದಲ್ಲಿ ಶೋಧಿಸಿಕೊಂಡರು.

ಆ ಶೋಧದ ನಂತರದ ಬದುಕಿನಲ್ಲಿ ಅವರಿಗೆ ‘ಅನ್ಯಾಯ-ಅಸಮಾನತೆ-ಅಸ್ಪೃಶತೆ’ಯ ಬದುಕು ಎದುರಾದಾಗ, ಆ ಪ್ರಜ್ಞೆಯಲ್ಲಿ ಅವರು ತಮ್ಮ ಗತದ ಬದುಕಿನ ನೋವುಗಳಿಗೆ ಅರ್ಥ ನಿರೂಪಣೆ ಮಾಡಿಕೊಂಡೂ ಮತ್ತು ಪ್ರಸ್ತುತದ ಬದುಕಿನ ಉದಾಹರಣೆಗಳನ್ನು ನಿರೂಪಿಸಿಕೊಂಡೂ ‘ವೇಟಿಂಗ್ ಫಾರ್ ವೀಸಾ’ ಬರೆದರು. ‘ಅಂಬೇಡ್ಕರ್ ಮೊದಲ ಬಾರಿಗೆ ನಿಮ್ಮನ್ನು ಪ್ರವೇಶಿಸಿದ್ದು ಯಾವಾಗ? ಮತ್ತು ಹೇಗೆ?’ ಎಂಬ ಪ್ರಶ್ನೆಗೆ ಉತ್ತರವಾಗಿ ಸಮಕಾಲೀನ ಸಂಗಾತಿಗಳು ತಮ್ಮ ಗತದ ಬದುಕಿನ ನೆನಪನ್ನು ವರ್ತಮಾನದಲ್ಲಿ ತಾವು ಪಡೆದ ಪ್ರಜ್ಞೆಯ ಅನುಸಾರ ತಮ್ಮ ‘ವೇಟಿಂಗ್ ಫಾರ್ ವೀಸಾ’ ಬರೆದಿದ್ದಾರೆ; ಇದು ವರ್ತಮಾನಕ್ಕೆ ಸಂಚಯಿತವಾಗುವ ಜ್ಞಾನ ಎಂಬ ಬಗ್ಗೆ ಗೌರವವಿರಲಿ.

ಆದರೆ, ‘ಈಗ ಅಂಬೇಡ್ಕರರನ್ನು ನೀವು ಯಾವ ರೀತಿ ಪರಿಭಾವಿಸುತ್ತೀರಿ?’ ಎಂಬ ಎರಡನೇ ಪ್ರಶ್ನೆಗೆ ಉತ್ತರವಾಗಿ ಸಮಕಾಲೀನ ಸಂಗಾತಿಗಳು ನೀಡಿರುವ ಉತ್ತರಗಳು ಅಸ್ಪಷ್ಟವಾಗಿವೆ; ಹೀಗಿದ್ದೂ, ಅಸ್ಪೃಶ್ಯತೆಯ ಭಿನ್ನ ಸ್ವರಗಳಲ್ಲೂ ಒಂದು ರಾಗಕ್ಕೆ ಒಗ್ಗುವ ಲಯವಿದೆ. ಎಲ್ಲರಲ್ಲೂ, ಅಂಬೇಡ್ಕರ್ ತಮ್ಮ ಬದುಕು–ಬರಹಗಳ ಮೂಲಕ ನಮ್ಮ ನಾಡಿನಲ್ಲಿ ಜೀವಂತವಾಗಿರುವ ‘ಪರಾಧೀನ-ಅಸಮಾನ-ಅನ್ಯಾಯಯುತ-ಅಸ್ಪೃಶ್ಯ’ ಬದುಕಿಗೆ ಅನ್ವಯಿಸಿ ಮರುನಿರೂಪಿಸಿದ ‘ಸ್ವಾತಂತ್ರ್ಯ-ಸಮಾನತೆ-ನ್ಯಾಯ ಮತ್ತು ಸಹಜೀವನ’ದ ವಿಚಾರ-ಆಚಾರಣೆಯ ತತ್ವಪ್ರಬೋಧೆಯಲ್ಲಿ ವರ್ತಮಾನದ ಸರ್ವರ ಸಂಕಟಗಳಿಗೂ ಪರಿಹಾರ ಕಂಡುಕೊಳ್ಳುವ ಸಂಕಲ್ಪ ನಿರೂಪಣೆ ಇದೆ.

ಇಷ್ಟಿದ್ದೂ, ತಮ್ಮ ‘ವೇಟಿಂಗ್ ಫಾರ್ ವೀಸಾ’ ಕಥನವನ್ನು ಸ್ಪಷ್ಟ ನಿರೂಪಣೆಗೂ ಹಾಗು ಸರ್ವರ ಸಂಕಟಗಳ ನಿವಾರಣೆಯ ಸಂಘರ್ಷಕ್ಕೆ ಪ್ರಬೋಧೆಯಾಗಬಲ್ಲ ಅಂಬೇಡ್ಕರರ ವೈಚಾರಿಕತೆಯ ನಡುವಿನ ಸಂಕಲ್ಪಕ್ಕೂ ನಡುವೆ ಇರುವ ವರ್ತಮಾನದ ಬಿಕ್ಕಟ್ಟುಗಳನ್ನು ನಿರೂಪಿಸುವಲ್ಲಿ ಒಂದು ಹೇಳಿಕೊಳ್ಳಲಾಗದ ಕಂದರವಿರುವುದನ್ನು ಸಂಗಾತಿಗಳು ಸೂಚ್ಯವಾಗಿ ಹೇಳುತ್ತಾರೆ. ಮೌನೇಶ್ ಬಡಿಗೇರ್‌ ಅವರು, ‘ತಮ್ಮ ನಗರ ಬದುಕಿನ ಅನುಭವದಲ್ಲಿ ಅಂಬೇಡ್ಕರ್ ತಮ್ಮನ್ನು ಅಷ್ಟಾಗಿ ಆವರಿಸಿರಲಿಲ್ಲ’ ಎಂದು ಹೇಳುವಾಗ, ಈ ಹೇಳಿಕೆ ‘ಪೊಲಿಟಿಕಲಿ ಇನ್‌ಕರೆಕ್ಟ್ ಅಥವ ಫೂಲಿಶ್’ ಆಗಿರಬಹುದು ಎಂಬ ಹಿಂಜರಿಕೆಯ ಹಿಂದೆ;

ತಮ್ಮ ನಾಟಕ ‘ಬಾಬಾ ಸಾಹೇಬ್ ಅಂಬೇಡ್ಕರ್’ ನಾಟಕದಲ್ಲಿ ಗಾಂಧಿ-ಅಂಬೇಡ್ಕರರ ವಿಚಾರಗಳ ಅನುಸಂಧಾನವನ್ನು ನಿರೂಪಿಸಿದ ಪ್ರಯತ್ನಕ್ಕೆ ದಲಿತರ ಒಂದು ಬಣ ತೋರಿಸಿದ ಹಿಂಸಾತ್ಮಕ ಪ್ರತಿಕ್ರಿಯೆಯನ್ನು ಗಣೇಶ್ ಹೆಗ್ಗೋಡು ಅವರು ವಿವರಿಸುವಲ್ಲಿ; ಅಂಬೇಡ್ಕರರ ವೈಚಾರಿಕತೆ ತಮ್ಮ ಬದುಕಿನಲ್ಲಿ ಪ್ರವೇಶವಾಗುವುದಕ್ಕೆ ಕಾರಣವಾದ ದಲಿತ ಸಂಘರ್ಷ ಸಮಿತಿ, ಹಲವು ವಿಘಟನೆಗಳ ಕಾರಣವಾಗಿ, ಅಂಬೇಡ್ಕರ್ ತಮ್ಮಲ್ಲಿ ಸ್ವಾಯತ್ತ ‘ಶಿಕ್ಷಣ ಕ್ರಮ’ವಾಗಿ ಮಾತ್ರ ಉಳಿದಿದ್ದಾರೆ ಎಂದು ಸೂಚಿಸುವ  ಸಂತೋಷ್ ಗುಡ್ಡಿಯಂಗಡಿ ಅವರ ನಿರೂಪಣೆಯಲ್ಲಿ– ಬಿಕ್ಕಟ್ಟಿನ ಸೂಚನೆಗಳನ್ನು ಕಾಣಬಹುದು.

ಈ ಸೂಚನೆಗಳನ್ನು ಅನುಸರಿಸಿ, ಒಂದು ಸ್ಪಷ್ಟ ವಿವರಣೆ ಕೊಡುವ ಪ್ರಯತ್ನ ಮಾಡುವೆ: 1970ರ ದಶಕದ ಕೊನೆ ಹಾಗೂ 1980ರ ದಶಕದ ಪೂರ್ವಾರ್ಧದಲ್ಲಿ, ಅಂಬೇಡ್ಕರರ ವೈಚಾರಿಕತೆಯನ್ನು ಕೇಂದ್ರವಾಗಿಟ್ಟುಕೊಂಡು, ದಲಿತರಲ್ಲಿ ಸ್ವಾಭಿಮಾನ, ಸ್ವಾಯತ್ತ ಸಂಘಟನಾ ಮನೋಭಾವ ಮತ್ತು ಸಕಲ ಶೋಷಿತರ ಪರವಾಗಿ ಅಧಿಕಾರಸ್ಥ ವ್ಯವಸ್ಥೆಯ ವಿರುದ್ಧದ ಹೋರಾಟಕ್ಕೆ ನಾಯಕತ್ವ ನೀಡುವ (‘ಎಲ್ಲಾ ಜಾತಿ-ವರ್ಗಗಳ ಶೋಷಿತರು ದಲಿತರು’ ಎನ್ನುವುದು ಸಂಘಟನೆಯ ಮೂಲ ದಲಿತ ನಿರ್ವಚನವಾಗಿತ್ತು) ಸಂಕಲ್ಪದಲ್ಲಿ ‘ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ’ ಸಂಘಟಿತವಾಗಿ ಕ್ರಿಯಾಶೀಲವಾಗಿತ್ತು.

ಈ ಸಂಘಟನೆ ದಲಿತರಲ್ಲಿ ಸ್ವಾಭಿಮಾನ ಹುಟ್ಟಿಸಿ, ಪ್ರಬಲ ಸಂಘಟನೆ ಕಟ್ಟಿ ಹಾಗು ಸಕಲ ಶೋಷಿತರ ನಾಯಕನಾಗುವ ಭರವಸೆ ಹುಟ್ಟಿಸಿತ್ತು. ನಂತರದಲ್ಲಿ, ಒಂದು ಪ್ರಭಾವಿ ಬಣವಾಗಿ ಅಧಿಕಾರ ರಾಜಕಾರಣದಲ್ಲಿ ಸಮ ಸ್ಥಾನ ಬೇಡುವ ವಿಚಾರದಲ್ಲಿ ಭಿನ್ನಮತ ತಲೆದೋರಿ, ಹಲವು ಬಣಗಳಾಗಿ ವಿಭಜನೆಗೊಂಡಿತು. ವಿಘಟಿತವಾದ ಪ್ರತಿ ಬಣವೂ ತನ್ನ ಪ್ರಭಾವವನ್ನು ಖಾಯಂಗೊಳಿಸಿಕೊಳ್ಳಲಿಕ್ಕಾಗಿ ವಿಭಿನ್ನ ರಾಜಕೀಯ ಹಿತಾಸಕ್ತಿಗಳ ಜೊತೆ ಸಹಯೋಗ ಬೆಳೆಸಿಕೊಳ್ಳುವ ಪ್ರಯೋಗ ಇಂದಿಗೂ ಮುಂದುವರೆದೇ ಇದೆ. ಹೀಗಾಗಿ ಈಗ ‘ಕ.ರಾ.ದ.ಸಂ.ಸ.’ದ ಪ್ರತಿ ಬಣವೂ ಮೂಲ ಸಂಘಟನೆಯ ಆಶಯದ ಒಡಕಲು ಪ್ರತಿಬಿಂಬವಾಗಿದೆ.

‘ಕ.ರಾ.ದ.ಸಂ.ಸ.’ ಸಂಘಟನೆಗೆ ಮೂಲ ಪ್ರೇರಣೆಗಳಾಗಿದ್ದ ಆಂಧ್ರಪ್ರದೇಶದ ದಲಿತ ಸಂಘಟನೆ ಮತ್ತು ಮಹಾರಾಷ್ಟ್ರದ ದಲಿತ ಸಂಘನೆಗಳೂ ಇಂದು ಒಡೆದು ಹೋಗಿವೆ. ಈ ಒಡಕಿನ ಫಲವಾಗಿ, ಅಂಬೇಡ್ಕರ್ ಹಾಗೂ ಅವರ ವಿಚಾರಧಾರೆಯ ವಾರಸುದಾರಿಕೆಯ ವಿಷಯದಲ್ಲಿ ಅತಿಯಾದ ಸ್ಪರ್ಧೆ ಉಂಟಾಗಿದೆ. ಮತ್ತೂ ಅಂಬೇಡ್ಕರ್ ವಿಚಾರಧಾರೆಗೆ ಹೊರತಾದ ಬೇರ್‍ಯಾವ ವಿಚಾರಧಾರೆಯೂ ಅಂಬೇಡ್ಕರ್ ವಿಚಾರಧಾರೆಯೊಟ್ಟಿಗೆ ಅನುಸಂಧಾನ ನಡೆಸುವ ಪ್ರಯತ್ನದಲ್ಲಿ ತೊಡಗಿದಲ್ಲಿ, ಒಡೆದು ಹೋಗಿರುವ ದಲಿತ ಸಂಘಟನೆಗಳು ಅದನ್ನು ತಮ್ಮಿಂದ ಅಂಬೇಡ್ಕರರನ್ನು ಕಿತ್ತುಕೊಳ್ಳುವ ಹುನ್ನಾರವಾಗಿ ಕಂಡು, ಆತಂಕದ ಅತಿ ಪ್ರತಿಕ್ರಿಯೆ ತೋರುವ ವಾತಾವರಣ ನಿರ್ಮಾಣವಾಗಿದೆ.

ಯಾಕೆಂದರೆ, 1980ರ ದಶಕದವರೆಗೂ ದಲಿತ ಸಂಘಟನೆಗಳನ್ನು ಹೊರತು ಪಡಿಸಿ ಯಾವ ಎಡಪಂಥೀಯ, ಪ್ರಜಾಪ್ರಭುತ್ವವಾದಿ ಸಂಘಟನೆಗಳೂ ಅಂಬೇಡ್ಕರ್ ವಿಚಾರಧಾರೆಗೆ ತಮ್ಮ ಕಾರ್ಯ ಪ್ರಣಾಳಿಕೆಯಲ್ಲಿ ಮುಖ್ಯಸ್ಥಾನ ನೀಡಿದ್ದಿಲ್ಲ; ದಲಿತರ ಸ್ಥಿತಿಗತಿಗಳನ್ನು ತಮ್ಮ ಕೇಂದ್ರ ಬಿಂದುವಾಗಿಸಿಕೊಂಡದ್ದಿಲ್ಲ.  ಆ ನಂತರದ ಸಂಘಟನಾತ್ಮಕ ಬಿಕ್ಕಟ್ಟನ್ನು ಎದುರಿಸುವ ಗಳಿಗೆಯಲ್ಲಿ, ಅಂಬೇಡ್ಕರರ ವಿಚಾರಧಾರೆಯನ್ನು ಆಸರೆಯಾಗಿಸಿಕೊಳ್ಳುವ ಪ್ರಯತ್ನಗಳನ್ನು ದಲಿತ ಸಂಘಟನೆಗಳು ಅನುಮಾನದಿಂದ ಕಾಣುವುದು ಹಾಗೂ ತೀವ್ರ ಪ್ರತಿಕ್ರಿಯೆ ಒಡ್ಡುವುದು ಅತಿಯಾಗಿ ಕಂಡರೂ, ಚಾರಿತ್ರಿಕವಾಗಿ ಅಸಹಜವಲ್ಲ.

ಇದಕ್ಕೆ ವಿವರಿಸಬಹುದಾದ ಹಲವು ಕಾರಣಗಳು ಇವೆಯಾದರೂ ವಾಸ್ತವದಲ್ಲಿ ನಮ್ಮೆದುರು ಉಳಿದುಕೊಂಡಿರುವುದು ಒಡಕಲು ಬಿಂಬಗಳು. ಪ್ರತಿಕ್ರಿಯೆ ನೀಡಿರುವ ಸಂಗಾತಿಗಳೆಲ್ಲಾ ಒಡಕಲು ಬಿಂಬವನ್ನು ಒಗ್ಗೂಡಿಸಿಕೊಂಡು ಅಂಬೇಡ್ಕರರ ಒಂದು ಪ್ರತಿಮೆ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಕಾರ್ಯಸಾಧ್ಯವಾದುದ್ದನ್ನು ಅಂತಃಕರಣದಿಂದ ಮಾಡಿತೋರಲು ಯತ್ನಿಸಿದ್ದಾರೆ. ಅನಸೂಯ ಕಾಂಬಳೆಯವರ ಪ್ರತಿಮೆಯನ್ನು ಕೊಂಚ ತಿದ್ದಿಕೊಂಡು ಹೇಳುವುದಾದಲ್ಲಿ ಇದು: ‘ಯಾರ ಎದೆಯನ್ನೂ ಇರಿಯುವುದಲ್ಲ / ಅರಿವನ್ನು ಬೆಳಗುವ ಭೀಮ ಬಾಣ’.
(ಕನ್ನಡಕ್ಕೆ: ಎನ್.ಎ.ಎಂ. ಇಸ್ಮಾಯಿಲ್)

Write A Comment