ನವದೆಹಲಿ: ಸರ್ಕಾರಿ ನೌಕರರು ಮತ್ತು ಕೆಲವು ಪ್ರತಿಷ್ಠಿತ ಕಾರ್ಪೊರೇಟ್ ಕಂಪೆನಿಗಳ ಉದ್ಯೋಗಿಗಳು ಭಾಗಿಯಾಗಿರುವ ‘ಸರ್ಕಾರದ ರಹಸ್ಯ ದಾಖಲೆ ಕಳವು’ ₨೧೦ ಸಾವಿರ ಕೋಟಿ ಮೊತ್ತದ ಹಗರಣ ಎಂದು ಪ್ರಮುಖ ಆರೋಪಿ, ಮಾಜಿ ಪತ್ರಕರ್ತ ಶಂತನು ಸೈಕಿಯಾ ಹೇಳಿದ್ದಾರೆ.
ಈ ನಡುವೆ, ಆರೋಪಿಗಳಿಂದ ‘ರಾಷ್ಟ್ರೀಯ ಭದ್ರತೆ’ಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತ ೧೨ ಮಂದಿಯ ವಿರುದ್ಧ ಸರ್ಕಾರಿ ಗೋಪ್ಯತೆ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸುವ ಸಾಧ್ಯತೆ ಇದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಪೆಟ್ರೋಲಿಯಂ ಮಾತ್ರವಲ್ಲ, ಹಣಕಾಸು, ಕಲ್ಲಿದ್ದಲು ಮತ್ತು ವಿದ್ಯುತ್ ಸಚಿವಾಲಯದ ದಾಖಲೆಗಳೂ ಸಿಕ್ಕಿವೆ.
ಜಲ್ದಿ ದೂಧ್ ಕಾ ದೂಧ್, ಪಾನಿ ಕಾ ಪಾನಿ ಹೊ ಜಾಯೇಗಾ (ಶೀಘ್ರವೇ ಸತ್ಯ ಹೊರಬೀಳಲಿದೆ). ರಹಸ್ಯ ಮಾಹಿತಿ ಸೋರಿಕೆ ಪ್ರಕರಣವನ್ನು ನಮ್ಮ ಸರ್ಕಾರ ಬಯಲಿಗೆಳೆದಿದೆ ಎನ್ನುವುದು ಸಮಾಧಾನ ತಂದಿದೆ. ನಾವು ಎಚ್ಚರಿಕೆ ವಹಿಸದಿದ್ದರೆ ಇದು ಬೆಳಕಿಗೇ ಬರುತ್ತಿರಲಿಲ್ಲ
– ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ
ಆರೋಪಿಗಳಾದ ಎಸ್ಸಾರ್ನ ವಿನಯ್ ಕುಮಾರ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಶೈಲೇಶ್ ಸಕ್ಸೇನಾ, ಕೇರ್ನ್ಸ್ನ ಕೆ.ಕೆ.ನಾಯ್ಕ್, ಜುಬಿಲಂಟ್ ಎನರ್ಜಿಯ ಸುಭಾಷ್ಚಂದ್ರ, ಅನಿಲ್ ಅಂಬಾನಿ ಗ್ರೂಪ್ನ ರಿಶಿ ಆನಂದ್ ಅವರನ್ನು ಪೊಲೀಸರು ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಿದರು. ಇವರನ್ನೆಲ್ಲ ಕೋರ್ಟ್ ಫೆ.೨೪ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಬಯಲಾಗಿದ್ದು ಹೇಗೆ?
ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳು ಪದೇ ಪದೇ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದನ್ನು ಗಮನಿಸಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋಬಾಲ್ ಅವರು ಈ ಕುರಿತು ತನಿಖೆ ನಡೆಸುವಂತೆ ಬಾಹ್ಯ ಬೇಹುಗಾರಿಕೆ ಸಂಸ್ಥೆ ‘ರಾ’ಗೆ ಸೂಚಿಸಿದ್ದರು. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದ್ದು ಸುದ್ದಿವಾಹಿನಿಯೊಂದರಲ್ಲಿ ವರದಿಯಾಗಿತ್ತು. ಇದು ಧೋಬಾಲ್ ಕಳವಳಕ್ಕೆ ಕಾರಣವಾಗಿತ್ತು.
ಈ ಸಂಬಂಧ ಸಂಪುಟ ಕಾರ್ಯದರ್ಶಿ ಅಜಿತ್ ಕುಮಾರ್ ಸೇಥ್ ಅವರಿಗೂ ಧೋಬಾಲ್ ಪತ್ರ ಬರೆದಿದ್ದರು. ಈ ವಿಚಾರವೂ ಮಾಧ್ಯಮಗಳಲ್ಲಿ ವರದಿಯಾಯಿತು. ಈ ಬೆಳವಣಿಗೆಯ ನಂತರ, ಸರ್ಕಾರಿ ಕಚೇರಿಗಳಿಂದ ಮಾಹಿತಿ ಸೋರಿಕೆಯಾಗುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಚಿವಾಲಯಗಳ ಮೇಲೆ ಕಣ್ಣಿಡಲಾಯಿತು.
ಸೂಕ್ಷ್ಮ ದಾಖಲೆಗಳ ಸೋರಿಕೆ ಕುರಿತಂತೆ ಕಳೆದ ಡಿಸೆಂಬರ್ನಲ್ಲಿ ಧೋಬಾಲ್ ಅವರು ಹಲವು ಸಂಪುಟ ಸಚಿವರ ಜತೆಗೂ ಸಭೆ ನಡೆಸಿದ್ದರು. ಪತ್ರಕರ್ತರು, ಸರ್ಕಾರಿ ಅಧಿಕಾರಿಗಳು, ಕಾರ್ಪೊರೇಟ್ ದಲ್ಲಾಳಿಗಳ ಮಧ್ಯೆ ಅಕ್ರಮ ನಂಟು ಇರುವ ಕುರಿತು ಎಚ್ಚರಿಕೆ ನೀಡಿದ್ದರು.
ಹಗರಣದ ಸುಳಿವು ಸಿಕ್ಕಿದ ಕೂಡಲೇ ಪ್ರಮುಖ ಸಚಿವಾಲಯಗಳಲ್ಲಿ ಭದ್ರತೆಹೆಚ್ಚಿಸಲಾಯಿತು. ಶಂಕಿತರನ್ನು ಪತ್ತೆ ಹಚ್ಚಲು ಮಹತ್ವದ ದಾಖಲೆಗಳಂತೆ ಕಾಣುವ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿತ್ತು.
ಪೆಟ್ರೋಲಿಯಂ ಸಚಿವಾಲಯ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
ಕಂಪೆನಿಗಳ ಕಚೇರಿ ಮೇಲೆ ದಾಳಿ: ಸರ್ಕಾರದ ದಾಖಲೆ ಕಳವು ಪ್ರಕರಣದಲ್ಲಿ ಮತ್ತಷ್ಟು ಶೋಧಕ್ಕಾಗಿ ದೆಹಲಿ ಪೊಲೀಸರು ನೊಯ್ಡಾ ಬಳಿಯ ಪೆಟ್ರೊಕೆಮಿಕಲ್ ಕಂಪೆನಿಗಳ ಕಚೇರಿಯ ಮೇಲೆ ಶನಿವಾರ ದಾಳಿ ನಡೆಸಿದರು.
ಪೊಲೀಸರು ತಮ್ಮನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಕರೆದೊಯ್ಯುತ್ತಿರುವಾಗಲೇ ಸುದ್ದಿಗಾರರೊಂದಿಗೆ ಮಾತನಾಡಿದ ಶಂತನು, ‘ಇದು ₨ ೧೦ ಸಾವಿರ ಕೋಟಿ ಹಗರಣ.
ನಾನು ಇದನ್ನು ಬಯಲು ಮಾಡಲು ಯತ್ನಿಸುತ್ತಿದ್ದೆ. ದಯವಿಟ್ಟು ಈ ಮಾತನ್ನು ನಿಮ್ಮ ವರದಿಯಲ್ಲಿ ಉಲ್ಲೇಖಿಸಿ’ ಎಂದರು.
ಶಂತನು ಹೇಳಿಕೆಗೆ ಪ್ರತಿಕ್ರಿಯಿಸಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್್, ‘ಶಂತನು ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಈ ರೀತಿ ಮಾತನಾಡುತ್ತಿದ್ದಾರೆ’ ಎಂದಿದ್ದಾರೆ.