ನವದೆಹಲಿ: ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವುದಕ್ಕೆ ಕೇವಲ ಐದು ದಿನಗಳು ಬಾಕಿ ಇರುವಾಗಲೇ ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ಭಾನುವಾರ ದೆಹಲಿಗೆ ಬಂದು ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರನ್ನು ಭೇಟಿಯಾಗಿ ಚರ್ಚಿಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಮಗನ ಮದುವೆ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸಲು ಮಾಂಝಿ ರಾಜಧಾನಿಗೆ ಬಂದಿದ್ದಾರೆ. ಇದೇ ವೇಳೆ ಅವರು ಪಶ್ಚಿಮಬಂಗಾಳದ ಅತಿಥಿಗೃಹವೊಂದರಲ್ಲಿ ತ್ರಿಪಾಠಿ ಅವರನ್ನು ಭೇಟಿಯಾದರು ಎಂದು ಮೂಲಗಳು ತಿಳಿಸಿವೆ.
ಬಿಹಾರದ ರಾಜಕೀಯದ ಬಗ್ಗೆ ಬಿಜೆಪಿಯೊಂದಿಗೆ ಮುಂದಿನ ಕಾರ್ಯತಂತ್ರ ರೂಪಿಸುವುದಕ್ಕಾಗಿ ಮಾಂಝಿ ದೆಹಲಿಗೆ ಬಂದಿದ್ದಾರೆ ಎಂದು ಜೆಡಿಯು ಮುಖಂಡ ಕೆ.ಸಿ.ತ್ಯಾಗಿ ಹೇಳಿದ್ದಾರೆ.
ಪಟ್ನಾ ವರದಿ: ರಾಜ್ಯಪಾಲ ತ್ರಿಪಾಠಿ, ಬಿಜೆಪಿ ತಳೆದಿರುವ ಧೋರಣೆಯಿಂದಾಗಿ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮೂಡಿದೆ ಎಂದು ಜೆಡಿಯು, ಅದರ ಮಿತ್ರಪಕ್ಷಗಳು ಆರೋಪ ಮಾಡಿವೆ.
ತಾವು ದೀರ್ಘಕಾಲ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ ಎನ್ನುವುದು ಗೊತ್ತಿದ್ದರೂ ಮಾಂಝಿ ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದಾರೆ. ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಆರ್ಥಿಕ ಅರಾಜಕತೆ ಉಂಟಾಗಿದೆ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ವಸಿಷ್ಠ ನಾರಾಯಣ ಸಿಂಗ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಹೈದರಾಬಾದ್ ವರದಿ: ಬಿಹಾರದ ಆಡಳಿತ ಪಕ್ಷವು ತನ್ನ ಆಂತರಿಕ ಕಲಹದಲ್ಲಿ ಅನಗತ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಎಳೆಯುವುದಕ್ಕೆ ಯತ್ನಿಸುತ್ತಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಆರೋಪಿಸಿದ್ದಾರೆ.