
ಲಖ್ನೌ,ಜ.12:ಕಳಭಟ್ಟಿ ಸಾರಾಯಿ ಕುಡಿದು ಐವರು ಮೃತಪಟ್ಟು, 50ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ಉತ್ತರಪ್ರದೇಶದ ರಾಜಧಾನಿ ಲಖ್ನೌ ಸಮೀಪದ ಮಲಿಹಾಬಾದ್ ಪ್ರದೇಶದಲ್ಲಿ ಇಂದು ನಡೆದಿದೆ. ಮಲಿಹಾಬಾದ್ ಪ್ರದೇಶದ ಖರ್ಟಲ ಗ್ರಾಮದ ನಿವಾಸಿಗಳು ಇಂದು ಮಧ್ಯಾಹ್ನ ಕಳ್ಳಭಟ್ಟಿ ಸಾರಾಯಿ ಕುಡಿದು ಸುಮಾರು 60 ಜನ ಅಸ್ವಸ್ಥರಾದರು. ತಕ್ಷಣ ಅವರನ್ನೆಲ್ಲ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಐವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಮೃತರನ್ನು ಇನ್ನು ಗುರುತಿಸಲಾಗಿಲ್ಲ.
ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇನ್ನೂ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಆಸ್ಪತ್ರೆ ಬಳಿ ಸೇರಿರುವ ಕೆಲವರ ಬಂಧುಬಳಗದವರು ತಮ್ಮವರನ್ನು ಕಳೆದುಕೊಂಡು ರೋದಿಸುತ್ತಿದ್ದಾರೆ.