ದುಬೈ (ಸೆ. 13): ದುಬೈ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯನೊಬ್ಬ 2 ವರ್ಷಗಳ ಹಿಂದೆ ಪ್ರಯಾಣಿಕರ ಬ್ಯಾಗ್ನಿಂದ 2 ಮಾವಿನ ಹಣ್ಣುಗಳನ್ನುಕದ್ದು ತಿಂದಿದ್ದ. ಹಣ್ಣು ಕದ್ದ ಆರೋಪದ ಮೇಲೆ ಭಾರತೀಯ ಸಿಬ್ಬಂದಿ ಮೇಲೆ ದೂರು ದಾಖಲಾಗಿತ್ತು. ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿದೆ.
27 ವರ್ಷದ ಭಾರತೀಯ ಯುವಕ ದುಬೈ ಏರ್ಪೋರ್ಟ್ನಲ್ಲಿ ಸಿಬ್ಬಂದಿಯಾಗಿ ಸೇರಿಕೊಂಡಿದ್ದ. 2017ರಲ್ಲಿ ಆತ ಪ್ರಯಾಣಿಕರೊಬ್ಬರ ಬ್ಯಾಗ್ನಿಂದ 2 ಮಾವಿನ ಹಣ್ಣುಗಳನ್ನು ತಿಂದಿದ್ದ ವಿಷಯ ಹೊರಬಿದ್ದಿತ್ತು. ಸುಮಾರು 116 ರೂ. ಮೌಲ್ಯದ 2 ಮಾವಿನ ಹಣ್ಣುಗಳನ್ನು ಕದ್ದು ತಿಂದಿದ್ದ ಆ ಸಿಬ್ಬಂದಿ ವಿಚಾರಣೆ ನಡೆಸಲಾಗಿದೆ.
ಈ ಬಗ್ಗೆ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿರುವ ಯುವಕ, ‘ನನಗೆ ಆಗ ಬಹಳ ಬಾಯಾರಿಕೆಯಾಗಿತ್ತು. ನೀರಿನ ಬಾಟಲ್ಗಾಗಿ ಹುಡುಕುತ್ತಿದ್ದಾಗ ಹಣ್ಣಿನ ಬಾಗ್ ಕಣ್ಣಿಗೆ ಬಿದ್ದಿತು. ಅದರಲ್ಲಿದ್ದ 2 ಮಾವಿನ ಹಣ್ಣುಗಳನ್ನು ತೆಗೆದುಕೊಂಡು ತಿಂದಿದ್ದು ನಿಜ’ ಎಂದು ಹೇಳಿದ್ದ. ಕಳೆದ ವರ್ಷ ಏಪ್ರಿಲ್ನಲ್ಲಿ ಪೊಲೀಸರು ಆತನನ್ನು ವಿಚಾರಣೆ ನಡೆಸಿದ್ದರು. ಬಳಿಕ ಆತನನ್ನು ಬಂಧಿಸಿ, ಹಣ್ಣುಗಳನ್ನು ಕದ್ದು ತಿಂದ ಆರೋಪದಲ್ಲಿ ಕೇಸ್ ಹಾಕಲಾಗಿತ್ತು.
ವಿಮಾನದ ಸಿಸಿಟಿವಿಯಲ್ಲಿ ಆತನ ಹಣ್ಣುಗಳನ್ನು ಕದ್ದು ತಿಂದ ದೃಶ್ಯ ಸೆರೆಯಾಗಿತ್ತು. ಆದರೆ, ಆತನನ್ನು ಇದೀಗ ಕೋರ್ಟ್ಗೆ ಯಾಕೆ ಹಾಜರುಪಡಿಸಲಾಯಿತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಭದ್ರತಾ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸುತ್ತಿದ್ದಾಗ ಈ ಯುವಕ ಭಾರತಕ್ಕೆ ಪ್ರಯಾಣಿಸುತ್ತಿದ್ದವರ ಬ್ಯಾಗ್ ಓಪನ್ ಮಾಡಿ ಹಣ್ಣುಗಳನ್ನು ತೆಗೆದುಕೊಂಡಿದ್ದು ಗಮನಕ್ಕೆ ಬಂದಿತ್ತು.
ಕದ್ದು ಹಣ್ಣು ತಿಂದ ಏರ್ಪೋರ್ಟ್ ಸಿಬ್ಬಂದಿಗೆ ಈ ಪ್ರಕರಣದಲ್ಲಿ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಈ ಪ್ರಕರಣದ ವಿಚಾರಣೆಯನ್ನು ಸೆ. 23ಕ್ಕೆ ಮುಂದೂಡಲಾಗಿದೆ.
Comments are closed.