ಗಲ್ಫ್

ದುಬೈಯಲ್ಲಿ ಭಾರತೀಯ ಮೂಲದ ಕಾರ್ಪೆಂಟರ್‌ಗೆ ಲಕ್ಕಿ ಡ್ರಾನಲ್ಲಿ ಸಿಕ್ಕಿತು ಬರೋಬರಿ 2 ಕೋಟಿ ಕಾರು!

Pinterest LinkedIn Tumblr

ದುಬೈ: ಲಕ್ಕಿ ಡ್ರಾ, ಲಾಟರಿ, ಕೂಪನ್ ಕುರಿತು ಹಲವು ಕತೆಗಳನ್ನು ನೀವು ಕೇಳಿರುತ್ತೀರಿ. ಕೆಲವು ನಿಜವಾದರೆ ಹಲವು ಸುಳ್ಳಾಗಿದೆ. ಹಲವರು ಮೋಸ ಕೂಡ ಹೋಗಿದ್ದಾರೆ. ಇಷ್ಟಾದರೂ ಲಕ್ಕಿ ಡ್ರಾ ಅಂದರೆ ಎಲ್ಲರ ಕಿವಿ ನೆಟ್ಟಗಾಗುತ್ತೆ. ಒಂದು ಕ್ಷಣ ನಾವು ನಮ್ಮನ್ನೆ ಮರೆಯುತ್ತೇವೆ. ಇದೇ ರೀತಿ ಲಕ್ಕಿ ಡ್ರಾ ಮೂಲಕ ದುಬೈನಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಭಾರತೀಯನಿಗೆ ಜಾಕ್ ಪಾಕ್ ಸಿಕ್ಕಿದೆ.

ದುಬೈನಲ್ಲಿ ಕೆಲಸ ಮಾಡುತ್ತಿರುವ ಪಂಜಾಬ್ ಮೂಲದ ಬಲ್ವೀರ್ ಸಿಂಗ್‌ಗೆ ಲಕ್ಕಿ ಡ್ರಾ ಗೆಲುವು ಸಾಧಿಸಿದ ಅದೃಷ್ಠವಂತ. UAE ಟೆಲಿಕಾಂ ಕಂಪನಿ ಡು ಲಕ್ಕಿ ಡ್ರಾ ನಡೆಸಿತ್ತು. ದುಬೈ ಟೆಲಿಕಾಂ ಡು ಕಂಪನಿ ನಂಬರ್‌ಗಳನ್ನು ಸಂಗ್ರಹಿಸಿ ಲಕ್ಕಿ ಡ್ರಾ ನಡೆಸಿತ್ತು. ರಾಸ್ ಅಲ್ ಕೈಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಲ್ವೀರ್‌ಗೆ ಕಂಪನಿ ದುಬೈ ಟೆಲಿಕಾಂ ಡು ಮೊಬೈಲ್ ಸಿಮ್ ನೀಡಿತ್ತು. ಹೀಗಾಗಿ ಈತನ ನಂಬರ್ ಕೂಡ ಲಕ್ಕಿ ಡ್ರಾನಲ್ಲಿತ್ತು. ಒಂದು ದಿನ ದಿಢೀರ್ ಆಗಿ ಬಲ್ವೀರ್‌ಗೆ ಕರೆ ಬಂದಿತ್ತು. ನೀವು ಮೆಕ್ಲೆರೆನ್ 570S ಸ್ಪೈಡರ್ ಕಾರು ಗೆದ್ದಿದ್ದೀರಿ ಎಂದಿದ್ದರು.

ಈ ಕರೆಯನ್ನು ಬಲ್ವೀರ್ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕಾರಣ ಈ ರೀತಿಯ ಹಲವು ಕರೆ ಹಾಗು ಮೆಸೇಜ್‌ಗಳು ಹಾಗೂ ಮೋಸ ಹೋದವರ ಕತೆ ಬಲ್ವೀರ್ ಈಗಾಗಲೇ ಕೇಳಿದ್ದರು. ಕರೆ ಬಳಿಕ ಮಸೇಜ್ ಕೂಡ ಬಂದಿತ್ತು. ಎರಡನೇ ಕರೆ ಬಂದಾಗ, ಬಲ್ವೀರ್ ಎಚ್ಚೆತ್ತುಕೊಂಡರು. ಗೂಗಲ್‌ನಲ್ಲಿ ಮೆಕ್ಲೆರೆನ್ 570S ಸ್ಪೈಡರ್ ಕಾರು ಯಾವುದು? ಇದರ ಬೆಲೆ ಎಷ್ಟು ಅನ್ನೋದನ್ನು ಪರೀಶೀಲಿಸಿದ್ದಾರೆ. ಆಗಲೆ ಗೊತ್ತಾಗಿದ್ದು ತಾನು ಗೆದ್ದಿರೋದು ಬರೋಬ್ಬರಿ 2 ಕೋಟಿ ರೂಪಾಯಿ ಕಾರು ಅನ್ನೋದು.

ತಕ್ಷಣವೇ ಸಮೀಪದ ಶೋ ರೂಂಗೆ ತೆರಳಿ ಪರೀಶೀಲಿಸಿದ್ದಾರೆ. ಬಲ್ವೀರ್ ಸಂತಸಕ್ಕೆ ಪಾರವೇ ಇರಲಿಲ್ಲ. ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಬಲ್ವೀರ್‌ಗೆ ಕಾರು ಖರೀದಿಸಬೇಕು ಅನ್ನೋದು ಬಹುದಿನಗಳ ಹಂಬಲವಾಗಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಏಕಾಏಕಿ 2 ಕೋಟಿ ರೂಪಾಯಿ ಕಾರು ಲಕ್ಕಿ ಡ್ರಾ ಮೂಲಕ ಬಂದ ಖುಷಿಗೆ ಕುಣಿದು ಕುಪ್ಪಳಿಸಿದ್ದ.

ನಂಬರ್ ರಿಜಿಸ್ಟ್ರೇಶನ್ ಮಾಡಿ ಕಾರು ಪಡೆದುಕೊಂಡ ಬಲ್ವೀರ್‌ ಬಳಿ ಲೈಸೆನ್ಸ್ ಕೂಡ ಇಲ್ಲ. ಈ ಕಾರನ್ನು ನಿರ್ವಹಿಸೋ ಶಕ್ತಿ ಕೂಡ ಬಲ್ವೀರ್‌ಗಿಲ್ಲ. ಹೀಗಾಗಿ ಸ್ಥಳೀಯ ಬ್ರೋಕರ್ ಮೂಲಕ ಮೆಕ್ಲೆರೆನ್ ಕಾರನ್ನು ಮಾರಾಟ ಮಾಡಿದ್ದರು. ಆದರೆ ಬ್ರೋಕರ್ ಚಾರ್ಜ್ ಹಾಗೂ ಇತರ ಬೆಲೆ ಕಡಿತಗೊಳಿಸಿ ಬಲ್ವೀರ್‌ಗೆ ಸಿಕ್ಕಿದ್ದು 1.13 ಕೋಟಿ ರೂಪಾಯಿ.

ಕಾರು ಮಾರಾಟ ಮಾಡಿದ ಹಣದಲ್ಲಿ ತವರಿಗೆ ತೆರಳಿ ತಂದೆ ತಾಯಿ, ಪತ್ನಿ ಹಾಗೂ ಮಕ್ಕಳ ಜೊತೆ ಕೆಲ ಕಾಲ ಇರಬೇಕು ಎಂದು ಪ್ಲಾನ್ ಹಾಕಿಕೊಂಡಿದ್ದಾರೆ. ಪಂಜಾಬ್‌ನ ತನ್ನ ಬಿಶಾನ್ ಕೋಟ್ ಹಳ್ಳಿಯಲ್ಲಿ ಮನೆ ಕಟ್ಟಿಸಬೇಕು. ಡ್ರೈವಿಂಗ್ ಕಲಿತು ಸಣ್ಣ ಕಾರು ಖರೀದಿಸಬೇಕು ಅನ್ನೋ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಬಾಲ್ಯದಿಂದಲೇ ನಾನು ತುಂಬಾ ಕಷ್ಟಪಟ್ಟಿದ್ದೇನೆ, ತುತ್ತು ಅನ್ನಕ್ಕೂ ಪರದಾಡಿದ್ದೇನೆ, ಕುಟುಂಬ ನಿರ್ವಹಣೆಗಾಗಿ ದುಬೈನಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದೇನೆ. ದೇವರು ನನ್ನ ಕಷ್ಟಕ್ಕೆ ಸ್ಪಂದಿಸಿದ್ದಾನೆ ಎಂದು ಭಾವುಕರಾಗಿದ್ದಾರೆ. ಕೆಲ ದಿನಗಳ ಬಳಿಕ ಮತ್ತೆ ಕೆಲಸಕ್ಕೆ ಹಾಜರಾಗುತ್ತೇನೆ ಎಂದು ಬಲ್ವೀರ್ ಹೇಳಿದ್ದಾರೆ.

Comments are closed.