ಗಲ್ಫ್

ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ನಿಂದ ಸಂಭ್ರಮದ ಬೆಳ್ಳಿ ಹಬ್ಬ ಆಚರಣೆ

Pinterest LinkedIn Tumblr

ಬಹರೈನ್ :ದ್ವೀಪದಲ್ಲಿ ನೆಲೆಸಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯದವರ ಒಕ್ಕೂಟವಾದ “ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸ್ಸೋಸಿಯೇಶನ್” ತನ್ನ ಬೆಳ್ಳಿ ಹಬ್ಬದ ಆಚರಣೆಯನ್ನು ಇಲ್ಲಿನ ಸಲ್ಮಾನಿಯ ಪರಿಸರದಲ್ಲಿರುವ ಮರ್ಮರಿಸ್ ಸಭಾಂಗಣದಲ್ಲಿ ಬಹಳ ಅದ್ದೊರಿಯಾಗಿ ಆಚರಿಸಿತು. .
ಕರ್ನಾಟಕ ಘನ ಸರಕಾರದ ನಗರಾಭಿವೃದ್ಧಿ ಸಚಿವ ಹಾಗು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಶ್ರೀ ಯು .ಟಿ .ಖಾದೆರ್ ರವರು ಸಮಾರಂಭದ ಮುಖ್ಯ ಅತಿಥಿಗಳ ಸ್ಥಾನವನ್ನು ಅಲಂಕರಿಸಿದ್ದರೆ ,ಮಾಜಿ ಅರಣ್ಯ ಸಚಿವ ರಮಾನಾಥ್ ರೈ ಯವರು ಬೆಳ್ಳಿಹಬ್ಬದ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು . ಮಾಜಿ ಶಾಸಕ ರಾದ ಮೊಯಿದೀನ್ ಭಾವ ಹಾಗು ಅನೇಕ ಮುಸ್ಲಿಂ ಸಮುದಾಯದ ಸಾಧಕರುಗಳು ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಪಾಲ್ಗೊಂಡು ಹೆಚ್ಚಿನ ಕಳೆ ನೀಡಿದರು .

ಸಮುದಾಯದ ಪುಟಾಣಿಗಳು ಸಾಂಪ್ರದಾಯಿಕ ದಪ್ಪುವಿನೊಂದಿಗೆ ಗಣ್ಯರುಗಳನ್ನು ಸಭಾಂಗಣದ ಮುಖ್ಯ ದ್ವಾರದಿಂದ ವೇದಿಕೆಯವರೆಗೆ ಬರಮಾಡಿಕೂಳುವುದರೊಂದಿಗೆ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭಕ್ಕೆ ನಾಂದಿ ಹಾಡಿದರು . ನಂತರ ವೇದಿಕೆಯಲ್ಲಿ ಪುಟಾಣಿಗಳು ಮುಸ್ಲಿಂ ಸಾಂಪ್ರದಾಯಿಕ ನ್ರತ್ಯವಾದ ಒಪ್ಪನದ ಪ್ರದರ್ಶನ ನೀಡಿದರು . ನಂತರ ಜರುಗಿದ ಸಭಾಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕರ್ನಾಟಕ ಘನ ಸರಕಾರದ ನಗರಾಭಿವೃದ್ಧಿ ಸಚಿವ ಹಾಗು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಶ್ರೀ ಯು .ಟಿ .ಖಾದೆರ್ ,ಮಾಜಿ ಅರಣ್ಯ ಸಚಿವ ರಮಾನಾಥ್ ರೈ,ಮಾಜಿ ಶಾಸಕ ಮೊಯಿದೀನ್ ಭಾವ,ಡಾ ಅಬ್ದುಲ್ ರೆಹಮಾನ್ ,ಬ್ಯಾರಿ ಚೇಂಬರ್ ಓಫ್ ಕಾಮರ್ಸ್ ನ ಸ್ಥಾಪಕ ಛೇರ್ಮನ್ ರಶೀದ್ ಎಸ್ಸೆಂಮಾರ್ ,ಅಲ್ ಹಿಲಾಲ್ ಹಾಸ್ಪಿಟಲ್ ನ ಅಬ್ದುಲ್ ಲತೀಫ್ ,ವಿ . ಅಬ್ದುಲ್ ಖಾದರ್ ಹಾಜಿ,ಕೆ .ಎಸ್ .ಶೇಖಬ್ಬ ಕರ್ನಿರೆ ,ಯು .ಟಿ .ಇಫ್ತೀಕರ್ ಝಖೀರ್ ಅಹ್ಮದ್ ,ಅಮರನಾಥ್ ರೈ ಹಾಗು ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ನ ಅಧ್ಯಕ್ಷರಾದ ಅಬ್ದುಲ್ ರಜಾಕ್ ಹಾಜಿ ಯವರು ಉಪಸ್ಥಿತರಿದ್ದರು .

ಈ ಸಂಧರ್ಭದಲ್ಲಿ ಅಧ್ಯಕ್ಷ ರಾದ ಅಬ್ದುಲ್ ರಜಾಕ್ ಹಾಜಿಯವರು ಮಾತನಾಡಿ “ಕಳೆದ 25 ವರುಷಗಳಿಂದ ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುವ ಪ್ರೀತಿಯ ಜವಾಬ್ದಾರಿಯನ್ನು ನೀಡಿ ಅದನ್ನು ಮುನ್ನಡೆಸಿಕೊಂಡು ಹೋಗಲು ತಮಗೆ ಶಕ್ತಿ ನೀಡಿರುವ ಅಲ್ಲಾಹು ವಿಗೂ ,ಸಮುದಾಯದ ಎಲ್ಲಾ ಸದಸ್ಯರಿಗೂ ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಿಸಿದರು . ಇಂದಿನ ಯುವ ಜನಾಂಗ ಮೊಬೈಲುಗಳಲ್ಲಿ ,ವಾಟ್ಸಾಪ್ ಗಳಲ್ಲಿ ಸುಮ್ಮನೆ ಕಾಲ ಹರಣ ಮಾಡುವ ಬದಲು ವಿದ್ಯಭ್ಯಾಸಕ್ಕೆ ಹೆಚ್ಚಿನ ಗಮನ ನೀಡಬೇಕು” ಎಂದು ಕರೆ ನೀಡಿದರು . ವೇದಿಕೆಯಲ್ಲಿರುವ ಗಣ್ಯರುಗಳು ಮಾತನಾಡಿ ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಸಂಘಟನೆಯು ಸಮಾಜಮುಖಿ ಕಾರ್ಯಗಳೊಂದಿಗೆ ಕಳೆದ ೨೫ ವರುಷಗಳಿಂದ ನಡೆದು ಬಂದ ಹಾದಿಯನ್ನು ಅದರ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು . ಗಣ್ಯರುಗಳನ್ನು ಈ ಸಂಧರ್ಭದಲ್ಲಿ ಸ್ಮರಣಿಕೆಗಳನ್ನು ನೀಡಿ ಸಮ್ಮಾನಿಸಲಾಯಿತು . ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಇಲ್ಲಿನ ವಿವಿಧ ದಕ್ಷಿಣ ಕನ್ನಡ ಮೂಲದ 7 ಸಂಘಟನೆಗಳನ್ನು ತನ್ನ ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡು ಈ ಬೆಳ್ಳಿ ಹಬ್ಬದ ಕಾರ್ಯಕ್ರಮವನ್ನು ಆಯೋಜಿಸಿತ್ತು . ಈ 7 ಸಂಘಟನೆಗಳು ಒಂದಾಗಿ ಅಬ್ದುಲ್ ರಜಾಕ್ ಹಾಜಿ ಯವರಿಗೆ ಅವರು ಕಳೆದ 25 ವರುಷಗಳಿಂದ ಸಂಘಟನೆಯನ್ನು ಅತ್ಯಂತ ದಕ್ಷವಾಗಿ ಮುನ್ನಡೆಸಿಕೊಂಡು ಹೋಗಿ ತಮ್ಮ ನಾಯಕತ್ವದ ಗುಣಗಳಿಂದ ಇತರರಿಗೆ ಮಾದರಿಯಾಗಿರುವುದಕ್ಕೆ ಸಮುದಾಯದ ಜನರ ಪ್ರೀತಿ ,ವಿಶ್ವಾಸ,ಅಭಿಮಾನದ ದ್ಯೋತಕವಾಗಿ ಸ್ಮರಣಿಕೆಯನ್ನು ನೀಡಿ ಹೃದಯಸ್ಪರ್ಶಿ ಸಮ್ಮಾನ ನೀಡಿದರು .
ಬೆಳ್ಳಿಹಬ್ಬದ ಸಮಾರೋಪ ಸಮಾರಂಭಕ್ಕೆ ಮುನ್ನ ಸುಮಾರು ಒಂದು ತಿಂಗಳ ಕಾಲ ಸಮುದಾಯದ ಸದಸ್ಯರಿಗಾಗಿ ಕಬ್ಬಡಿ ,ಕ್ರಿಕೆಟ್ ,ವಾಲಿಬಾಲ್ ಹಾಗು ಇನ್ನಿತರ ಆಟೋಟ ಸ್ಪರ್ಧೆಗಳು ,ಆಹಾರೋತ್ಸವ ಮುಂತಾದ ಕಾರ್ಯಕಮಗಳನ್ನು ಆಯೋಜಿಸಲಾಗಿತ್ತು . ಇದರಲ್ಲಿ ವಿಜೇತರೆಲ್ಲರಿಗೂ ಬಹುಮಾನಗಳನ್ನು ವಿತರಿಸಲಾಯಿತು . ಈ ಒಟ್ಟು ಕಾರ್ಯಕ್ರಮವನ್ನು ನಾಡಿನ ಖ್ಯಾತ ನಿರೂಪಕ ಸಾಹಿಲ್ ಜಹೀರ್ ರವರು ಆಕರ್ಷಕವಾಗಿ ನಿರೂಪಿಸಿದರು .

1992ರಲ್ಲಿ ಸಮುದಾಯದ ಸದಸ್ಯರ ನೋವು,ನಲಿವುಗಳಿಗಾಗಿ ಸ್ಪಂದಿಸಲು ಅಸ್ತಿತ್ವಕ್ಕೆ ಬಂದಂತಹ ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಇದೀಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ . ಕಳೆದ 25 ವರುಷಗಳಿಂದ ತಾಯ್ನಾಡಿನಲ್ಲಿ ನೆಲೆಸಿರುವ ಹಾಗು ದ್ವೀಪದಲ್ಲಿರುವ ಸಮುದಾಯದ ಜನರ ಕಣ್ಣೀರೊರೆಸುವ ಅನೇಕ ಜನಹಿತ ಕಾರ್ಯಗಳನ್ನು ಮಾಡುವುದರೊಂದಿಗೆ ಸಂಘಟನೆಯು ಸಾರ್ಥಕತೆಯನ್ನು ಕಂಡಿದೆ .ಆರ್ಥಿಕ ಸಂಕಷ್ಟದಲ್ಲಿರುವ ಸದಸ್ಯರಿಗೆ ಸುಲಭ ಕಂತುಗಳಲ್ಲಿ ಸಾಲ ,ಬಡ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ನೆರವು,ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಆರ್ಥಿಕ ನೆರವು ಇವೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಈ ಸಂಘಟನೆಯು ಅನೇಕ ಕುಟುಂಬಗಳಿಗೆ ಬೆಳಕಾಗಿದೆ .ಇದುವರಗೆ ಸಹಾಯವನ್ನು ಕೋರಿ ಬಂದಂತಹ ಯಾವುದೇ ಮನವಿಯನ್ನೂ ತಿರಸ್ಕರಿಸದೆ ಪ್ರತಿಯೊಂದನ್ನು ಪುರಸ್ಕರಿಸಿ ಸಹಾಯ ಮಾಡಿರುವ ಮುಖೇನ ಸಂಘಟನೆಯು ಮಾನವೀಯತೆಯನ್ನು ಮೆರೆದಿದೆ . ದ್ವೀಪದಲ್ಲಿ ನೆಲೆಸಿರುವ ಸಮುದಾಯದ ಜನರುಗಳನ್ನು ತನ್ನ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಂಡು ಹೊರಾಂಗಣ ಕ್ರೀಡಾಕೂಟ ,ಇಫ್ತಾರ್ ಕೂಟ ,ವಾರ್ಷಿಕೋತ್ಸವ ಮುಂತಾದವುಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಸಮುದಾಯದ ಎಲ್ಲರೂ ಪರಸ್ಪರ ಒಬ್ಬರನ್ನೊಬ್ಬರು ಅರಿತು,ಬೆರೆತು ಒಗ್ಗಟ್ಟಾಗಿ ಬಾಳುವಂತೆ ಮಾಡಿದೆ .

ಸಮುದಾಯದ ನೋವು,ನಲಿವುಗಳಿಗೆ ಸ್ಪಂದಿಸುತ್ತಾ ಸಂಘಟನೆಯೊಂದು ಹೊರ ದೇಶದ ಮಣ್ಣಿನಲ್ಲಿ ಯಶಸ್ವಿಯಾಗಿ ಸಾರ್ಥಕತೆಯ 25 ವರುಷಗಳನ್ನು ಪೊರೈಸಿರುವುದು ನಿಜವಾಗಿಯೂ ದೊಡ್ಡ ಸಾಧನೆಯೇ ಸರಿ. ಸಮುದಾಯವು ಇನ್ನಷ್ಟು ಯಶಸ್ಸನ್ನು ಕಾಣಲಿ ,ನೊಂದವರ ಬಾಳಲ್ಲಿ ಇನ್ನಷ್ಟು ಬೆಳಕು ಚೆಲ್ಲಲಿ ಎಂದು ಶುಭ ಹಾರೈಸೋಣ .
ಚಿತ್ರ-ವರದಿ-ಕಮಲಾಕ್ಷ ಅಮೀನ್

Comments are closed.