ಗಲ್ಫ್

ಮಿತ್ರಂಪಾಡಿ ಜಯರಾಮ್ ರೈ ಅಬುಧಾಬಿಯ ಪ್ರತಿಷ್ಠಿತ ಐ.ಎಸ್.ಸಿ. ಉಪಾಧ್ಯಕ್ಷರಾಗಿ ಆಯ್ಕೆ

Pinterest LinkedIn Tumblr

ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿಯಲ್ಲಿರುವ ಅನಿವಾಸಿ ಭಾರತೀಯರ ಭವ್ಯ ಸೌಧ ಇಂಡಿಯಾ ಸೋಶಿಯಲ್ ಅಂಡ್ ಕಲ್ಚರಲ್ ಸೆಂಟರ್ ವಿಶ್ವದಲ್ಲೇ ಅನಿವಾಸಿ ಭಾರತೀಯರ ಅತ್ಯಂತ ದೊಡ್ಡದಾಗಿರುವ ಸಂಘಟನೆಯ 2018 -19 ನೇ ಸಾಲಿನ ಉಪಾಧ್ಯಕ್ಷರಾಗಿ ಚುನಾವಣೆಯಲ್ಲಿ ಬಹು ಮತದಿಂದ ಮಿತ್ರಂಪಾಡಿ ಜಯರಾಮ್ ರೈಯವರು ಜಯಶೀಲರಾಗಿದ್ದಾರೆ.

ಅತ್ಯಾಧಿಕ ಸಂಖ್ಯೆಯಲ್ಲಿರುವ ಕೇರಳ ರಾಜ್ಯ ಸಮುದಾಯದ ಸದಸ್ಯರ ನಡುವಿನಲ್ಲಿ ಕನ್ನಡಿಗರಾಗಿ ಜಯಭೇರಿ ಬಾರಿಸಿದ್ದು ಜಯರಾಂ ರೈಯವರ ಸಜ್ಜನಿಕೆಗೆ ಸಾಕ್ಷಿಯಗಿದೆ.

2003 ರಿಂದ ಅಜೀವ ಸದಸ್ಯರಾಗಿ ಐ. ಎಸ್. ಸಿ. ಗೆ ಗೌರವಾನ್ವಿತ ಆಡಿಟರ್ ಆಗಿ ಎರಡು ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎರಡು ಬಾರಿ ಮುಖ್ಯ ಚುನಾವಣಾ ಅಧಿಕಾರಿಯಾಗಿಯೂ ತಮ್ಮ ಕರ್ತವ್ಯದಲ್ಲಿ ಅಪಾರ ಅನುಭವ ಪಡೆದಿದ್ದಾರೆ.

ಐ.ಎಸ್.ಸಿ. ಟೋಸ್ಟ್ ಮಾಸ್ಟರ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷರಾಗಿ ಹಾಗೂ ಟೋಸ್ಟ್ ಮಾಸ್ಟರ್ಸ್ ಇಂಟನ್ರ್ಯಾಶನಲ್ ಅಬುಧಾಬಿ ಏರಿಯಾ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಇಂಡಿಯನ್ ಬಿಸ್ನೆಸ್ ಅಂಡ್ ಪ್ರೊಫೆಸನಲ್ ಗ್ರೂಪ್‍ನ ಸಕ್ರೀಯಾ ಸದಸ್ಯರಾಗಿಯೂ, ಯು.ಎ.ಇ.ಯ ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪ್ರಸ್ತುತ ಯು.ಎ.ಇ.ಯ ಪ್ರತಿಷ್ಠಿತ ಸಂಸ್ಥೆ ಬಿನ್ ಪರ್ಧಾನ್ ಗ್ರೂಪ್ ನ ಫೈನಾನ್ಸ್ ಅಂಡ್ ಅಡ್ಮಿನ್ ಮ್ಯಾನೆಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಂಡಿಯಾ ಸೋಶಿಯಲ್ ಅಂಡ್ ಕಲ್ಚರಲ್ ಸೆಂಟರ್ (ಐ.ಎಸ್.ಸಿ.) ಅಬುಧಾಬಿಯಲ್ಲಿ ಐವತ್ತು ವರ್ಷಗಳ ಹಿಂದೆ ಸ್ಥಾಪನೆಯಾಗಿದೆ. ಅತ್ಯಧುನಿಕ ವಾಸ್ತುಶಿಲ್ಪದೊಂದಿಗೆ ನಿರ್ಮಾಣವಾಗಿರುವ ಭವ್ಯ ಸೌಧ ಐ.ಎಸ್.ಸಿ. ಯ ಸ್ಥಳ ಅಬುಧಾಬಿ ರಾಜಮನೆತನ ಶೇಖ್ ಕುಟುಂಬದ ಕೊಡುಗೆಯಾಗಿದೆ. ಐ.ಎಸ್.ಸಿ. ಯ ಯಶಸ್ವಿ ಹೆಜ್ಜೆಯಲ್ಲಿ ಯು.ಎ.ಇ. ಯ ಪ್ರಖ್ಯಾತ ಉಧ್ಯಮಿ ಡಾ. ಬಿ. ಆರ್. ಶೆಟ್ಟಿಯವರ ಕೊಡುಗೆ ಅಪಾರವಾಗಿದೆ. ಪ್ರಸ್ತುತ ವೈಸ್ ಚೇರ್ಮನ್ ಸ್ಥಾನದಲ್ಲಿದ್ದಾರೆ. ಭಾರತೀಯ ವೈವಿಧ್ಯಮಯ ಕಲೆ ಸಂಸ್ಕೃತಿ, ಕಲಾಪ್ರಾಕಾರಗಳಿಗೆ ವೇದಿಕೆಯನ್ನು ಕಲ್ಪಿಸಲಾಗುತ್ತಿದ್ದು, ನೂರಾರು ಕಲಾ ಪ್ರತಿಭೆಗಳು ಹೊರಹೊಮ್ಮಿದ್ದು, ವಿಶ್ವದ ವಿವಿಧ ಕಡೆಗಳಿಂದ ಪ್ರಖ್ಯಾತ ಕಲಾವಿದರು ಕಾರ್ಯಕ್ರಮ ನೀಡಿರುವ ಪವಿತ್ರ ವೇದಿಕೆ ಮತ್ತು ಎರಡು ಸಾವಿರ ಪ್ರೇಕ್ಷಕರು ಆಸೀನರಾಗುವ ಹವಾನಿಯಂತ್ರಿತ ಸಭಾಂಗಣ ಮತ್ತು ಮುನ್ನೂರು ಮಂದಿ ಆಸೀನರಾಗುವ ಎರಡು ಕಿರಿಯ ಸಭಾಂಗಣಗಳು ಹೊಂದಿದೆ. ಈಜುಕೊಳ, ಜಿಮ್, ಒಳಾಂಗಣ ಕ್ರೀಡಾವ್ಯವಸ್ಥೆ, ಉಪಹಾರ ಮಂದಿರದ ವ್ಯವಸ್ಥೆ ಇದ್ದು ಐದು ಸಾವಿರಕಿಂತಲೂ ಹೆಚ್ಚು ಮಂದಿ ಸೌಲಭ್ಯ ಪಡೆಯುತಿದ್ದಾರೆ.

ಐ ಎಸ್. ಸಿ. ಯಲ್ಲಿ ಎರಡು ಸಾವಿರ ಸದಸ್ಯರಿದ್ದು, ಬೃಹತ್ ಉಧ್ಯಮಿಗಳು, ವೃತ್ತಿಪರ ಗಣ್ಯರು ಆಡಳಿತ ಮಂಡಳಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿವರ್ಷ ಚುನಾವಣೆಯ ಮೂಲಕ ಪದಾಧಿಕಾರಿಗಳ ಆಯ್ಕೆ ನಡೆಸಲಾಗುತ್ತಿದ್ದು 2018 -19ನೇ ಸಾಲಿನ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಬಹುಮತದಿಂದ ಜಯಗಳಿಸಿರುವ ಮಿತ್ರಂಪಾಡಿ ಜಯರಾಮ್ ರೈ ಏಕೈಕ ಕನ್ನಡಿಗರಾಗಿದ್ದು, ತುಳುನಾಡಿಗೆ, ಕರ್ನಾಟಕಕ್ಕೆ ಸಂದ ಗೌರವವಾಗಿದೆ. ಸಮಸ್ಥ ಅನಿವಾಸಿ ಕನ್ನಡಿಗರ ಪರವಾಗಿ ಅಭಿನಂದನೆಗಳು.

ಬಿ. ಕೆ. ಗಣೇಶ್ ರೈ
ಯು.ಎ.ಇ.

Comments are closed.