Photo: Ashok Belman
ದುಬೈ: ಕನ್ನಡದ ಹಿರಿಯ ಕವಿ, ಸಾಹಿತಿ, ಪದ್ಮಶ್ರೀ ಪುರಸ್ಕೃತ ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್ ನಿಸ್ಸಾರ್ ಅಹ್ಮದ್ ಅವರಿಗೆ ಶುಕ್ರವಾರದಂದು ದುಬೈಯಲ್ಲಿ ನಡೆದ ಸಮಾರಂಭದಲ್ಲಿ ”ಕನ್ನಡ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಇತರ ಕೆಲಸಗಳಲ್ಲಿ ನಿರತರಾಗಿರುವ ‘ಕನ್ನಡಿಗರು ದುಬೈ’ ಶುಕ್ರವಾರದಂದು ಕರ್ನಾಟಕ ರಾಜ್ಯೋತ್ಸವ ಸಂಗೀತ ರಸಮಂಜರಿ ಹಾಗು ”ಕನ್ನಡ ರತ್ನ” ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಅಲ್ ಕಿಸೆಸ್’ನ ಜೇಮ್ಸ್ ಮಿಲ್ಲೇನಿಯಂ ಶಾಲಾ ಸಭಾಂಗಣದಲ್ಲಿ ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಿಸ್ಸಾರ್ ಅಹ್ಮದ್, ಕನ್ನಡಿಗರು ಎಲ್ಲೇ ಇದ್ದರು ಭಾಷಾ ಅಭಿಮಾನವನ್ನು ಮರೆಯುದಿಲ್ಲ. ಸದಾ ವಿಶ್ವಾಸದಿಂದಲೇ ಎಲ್ಲರೊಂದಿಗೆ ಬೆರೆತು ಸಾಗುವ ಔದಾರ್ಯ ಹೊಂದಿದವರು ಕನ್ನಡಿಗರು ಎಂದು ಕನ್ನಡಿಗರನ್ನು ಕೊಂಡಾಡಿದರು.
ಕವಿ ನಿಸ್ಸಾರ್ ಅಹ್ಮದ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ಸ್ಯಾಂಡಲ್ ವುಡ್ ಸ್ಟಿಲ್ ಛಾಯಾಗ್ರಾಹಕ ಸೀನು ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.ಮುಖ್ಯ ಅತಿಥಿಯಾಗಿ ದುಬೈಯ ಭಾರತ ರಾಯಭಾರಿ ಎಚ್.ಎಚ್ ದೀಪಾ ಜೈನ್ ಭಾಗವಹಿಸಿದ್ದರು. ಇದೇ ವೇಳೆ ಡಿಸೆಂಬರ್ 9 ರಂದು ನಡೆಯುವ ”ಹಂಸ ನಾದ” ಸಂಗೀತ ಕಾರ್ಯಕ್ರಮದ ಕರಪತ್ರವನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ದುಬೈಯ ಉದ್ಯಮಿಗಳಾದ ರವೀಶ್ ಗೌಡ, ಮುಸ್ತಫಾ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಸುಗಂದ್ ರಾಜ್ ಬೇಕಲ್, ಅಸಿಮ್, ಬರಹಗಾರ ಇರ್ಷಾದ್ ಮೂಡಬಿದ್ರೆ, ಕಲಾವಿದ ಗಣೇಶ್ ರೈ, ಧ್ವನಿ ಪ್ರತಿಷ್ಠಾನದ ಪ್ರಕಾಶ್ ಪಯ್ಯಾರ್, ತುಂಬೆ ಗ್ರೂಪ್ ಆಸ್ಪತ್ರೆಯ ಧರ್ಮಪಾಲ ಮೊದಲಾದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಎ.ಜಿ.ಜಿ ನೃತ್ಯ ತಂಡದವರು ಜಾನಪದ ನೃತ್ಯ ರೂಪಕ ಪ್ರದರ್ಶನಗೊಂಡಿತು. ಧಾರವಾಡ ರಂಗ ಗಂಗಾ ತಂಡದವರ ಹಾಸ್ಯಮಯ ಪೌರಾಣಿಕ ನಾಟಕ ಎಲ್ಲರ ಗಮನ ಸೆಳೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕನ್ನಡಿಗರು ದುಬೈ ಅಧ್ಯಕ್ಷೆ ಶ್ರೀಮತಿ ಉಮಾ ವಿದ್ಯಾಧರ್ ಅವರು ಸ್ವಾಗತಿಸಿದರು. ಕವಿ ನಿಸ್ಸಾರ್ ಅಹ್ಮದ್ ಅವರ ಪರಿಚಯವನ್ನು ಶ್ರೀಮತಿ ವಿಜಯ ಶಿವರುದ್ರಪ್ಪ ಅವರು ವಾಚಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಬಹಳ ಸುಂದರವಾಗಿ ಬಾಲಕೃಷ್ಣ ಹಾಗೂ ಶ್ರೀನಿವಾಸ್ ಉರಸ್ ಜೊತೆಯಾಗಿ ನಿರ್ವಹಿಸಿದರು, ಮಲ್ಲಿಕಾರ್ಜುನ ಗೌಡ ಅವರು ಧನ್ಯವಾದ ಸಲ್ಲಿಸಿದರು.
Comments are closed.