ಜುಬೈಲ್, ಸರ್ವರಿಗೂ ಸಮಾನ ಹಕ್ಕು ಇರುವ ಹೊಸ ಭಾರತ ನಿರ್ಮಾಣವು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಗುರಿಯಾಗಿದೆ. ಈ ನಿಟ್ಟಿನಲ್ಲಿ ತಳಮಟ್ಟದಿಂದಲೇ ಜನರನ್ನು ರಾಜಕೀಯವಾಗಿ ಪ್ರಜ್ಞಾವಂತರನ್ನಾಗಿಸುವ ಕೆಲಸವನ್ನು ಪಕ್ಷವು ನಿರಂತರವಾಗಿ ನಡೆಸುತ್ತಾ ಬಂದಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನತೆಗೆ ನೀಡಿರುವ ಮೂರು ವಿಚಾರವನ್ನು ಪಕ್ಷವು ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿದೆ. ‘ಸಂಘಟಿತರಾಗಿ, ಸುಶಿಕ್ಷಿತರಾಗಿ ಹಾಗೂ ಹೋರಾಡಿ’ ಎಂಬ ಅಂಬೇಡ್ಕರ್ ಆಶಯದಂತೆ ಎಸ್ಡಿಪಿಐ ಸಕಾರಾತ್ಮಕ ರಾಜಕೀಯ ಹೋರಾಟಕ್ಕಿಳಿದಿದೆ. ಈ ಮೂಲಕ ‘ಜನರಿಗೆ ಅಧಿಕಾರ’ ಎಂಬ ಪಕ್ಷದ ಕಲ್ಪನೆಯನ್ನು ಕಾರ್ಯರೂಪಕ್ಕಿಳಿಸಲಾಗುವುದು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್ ಬೆಂಗಳೂರು ಅವರು ತಿಳಿಸಿದರು.
ಅವರು ಇತ್ತೀಚೆಗೆ ಜುಬೈಲ್ನ ಕುಕ್ಸೋನ್ ಹೊಟೇಲ್ ಸಭಾಂಗಣದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ವತಿಯಿಂದ ಹಮ್ಮಿಕೊಳ್ಳಲಾದ ‘ಪ್ರಸಕ್ತ ಭಾರತ ಮತ್ತು ಪರ್ಯಾಯ ರಾಜಕೀಯ’ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಭಾರತದ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಎಸ್ಡಿಪಿ ಪಕ್ಷದ ಅನಿವಾರ್ಯತೆ, ಕಾರ್ಯವೈಖರಿ, ಗುರಿಯ ಬಗ್ಗೆ ಸಭಿಕರಿಗೆ ವಿವರಿಸಿದರು. ಮಾತ್ರವಲ್ಲದೆ, ಪಕ್ಷವು ಪ್ರತಿಪಾದಿಸುತ್ತಿರುವ ಸಕಾರಾತ್ಮಕ ರಾಜಕೀಯದ ಅರ್ಥ ವ್ಯಾಪ್ತಿಯನ್ನು ಅಬ್ದುಲ್ ಹನ್ನಾನ್ ಅವರು ಮನದಟ್ಟು ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಂಡಿಯನ್ ಸೋಶಿಯಲ್ ಫೋರಮ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರೀಫ್, ಐಎಸ್ಎಫ್ ಎಂಬುದು ಅನಿವಾಸಿ ಭಾರತೀಯರ ವೇದಿಕೆಯಾಗಿದ್ದು, ನಮ್ಮ ದೇಶದ ರಾಜಕೀಯ ವಿದ್ಯಮಾನ ಮತ್ತು ನಾವು ನಿರ್ವಹಿಸಬೇಕಾದ ಪಾತ್ರದ ಕುರಿತು ಜಾಗತಿ ಮೂಡಿಸಿ ಪ್ರಜ್ಞಾವಂತರನ್ನಾಗಿಸುವ ಕೆಲಸವನ್ನು ಮಾಡುತ್ತಿದೆ. ಅನಿವಾಸಿ ಭಾರತೀಯರಿಗೆ ತಮ್ಮ ಹಕ್ಕುಗಳ ಬಗ್ಗೆ ಜಾಗತಿ ಮೂಡಿಸಿ ಸಕಾರಾತ್ಮಕ ರಾಜಕೀಯ ಹೋರಾಟದಲ್ಲಿ ಪಾಲುದಾರರನ್ನಾಗಿಸುವ ಉದ್ದೇಶವನ್ನು ಹೊಂದಿದೆ ಎಂದರು.
ವೇದಿಕೆಯಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಕೇಂದ್ರ ಸಮಿತಿ ಮುಹಮ್ಮದ್ ವಾಸೀಮ್, ಐಎಸ್ಎಫ್ ಕರ್ನಾಟ ರಾಜ್ಯ ಸಮಿತಿ ಅಧ್ಯಕ್ಷ ಮುಹಮ್ಮದ್ ಶರೀಫ್, ಇಂಡಿಯ ಫ್ರೆಟರ್ನಿಟಿ ಫೋರಮ್ ಈಸ್ಟರ್ನ್ ಪ್ರೊವಿನ್ಸ್ ಅಧ್ಯಕ್ಷ ಇಮ್ತಿಯಾಝ್ ಹಾಗೂ ಐಎಸ್ಎಫ್ ಜುಬೈಲ್ ಬ್ರಾಂಚ್ ಅಧ್ಯಕ್ಷ ಸಲೀಮ್ ಅವರು ಉಪಸ್ಥಿತರಿದ್ದರು.
ಸಮಾಲೋಚನಾ ಸಭೆ: ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್ ಅವರೊಂದಿಗೆ ಸೌದಿಅರೇಬಿಯ ಈಸ್ಟನ್ ಪ್ರೊವಿನ್ಸ್ನ ವಿವಿಧ ಭಾಗಗಳಲ್ಲಿ ಸಮಾಲೋಚನಾ ಸಭೆ ನಡೆಯಿತು. ದಮಾಮ್, ಖೋಬರ್, ಅಲ್ಹಸ ಮುಂತಾದ ಕಡೆಗಳಲ್ಲಿ ನಡೆದ ಸಮಾಲೋಚನಾ ಸಭೆಗಳಲ್ಲಿ ಕರ್ನಾಟಕ ಮಾತ್ರವಲ್ಲದೆ, ಬಿಹಾರ, ಮುಂಬೈ, ಹೈದರಾಬಾದ್ ಮುಂತಾದ ಭಾಗಗಳಿಂದಲೂ ಸಮುದಾಯ ಮುಖಂಡರು, ವಿವಿಧ ಸಾಮಾಜಿಕ ಸಂಘಟನೆಗಳ ಮುಖಂಡರು ಮುಕ್ತ ಸಮಾಲೋಚನೆ ನಡೆಸಿದರು.