ಕುವೈತ್: ಕುವೈತ್ ಕನ್ನಡ ಕೂಟದ ದಾಸೋತ್ಸವ ಆಚರಣೆಯು 20 ಫೆಬ್ರವರಿ, 2015 ರಂದು ಖೈತಾನ್ ಕಾರ್ಮೆಲ್ ಶಾಲಾ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು. ಕನ್ನಡಕೂಟದ ಪ್ರತಿ ವರ್ಷದ ಮೊದಲ ಕಾರ್ಯಕ್ರಮ ದಾಸೋತ್ಸವವು ದಾಸರು, ಶರಣರುಗಳ ನೆನಪಿಗಾಗಿ ಹಾಗೂ ಅವರುಗಳ ಆರಾಧನೆಯನ್ನು ಅವರ ಕೀರ್ತನೆ, ಕೃತಿಗಳನ್ನು ಹಾಡಿ, ಅಭಿನಯಿಸುವುದರ ಮೂಲಕ ನಮ್ಮ ಕರ್ನಾಟಕದ ದಾಸ ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ನವಪೀಳಿಗೆಯವರಿಗೆ ಹಾಗೂ ಕೂಟದ ಮಕ್ಕಳಿಗೆ ತಿಳಿಸಿಕೊಡುವುದರಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮವು ಶ್ರೀಮತಿ ವಸಂತ ಅಶೋಕ್ ಹಾಗೂ ಮಾಧವಿ ಕುಲಕರ್ಣಿಯವರ ಪ್ರಾರ್ಥನಾ ಗಾಯನದೊಂದಿಗೆ, ಕೂಟದ ಕಾರ್ಯಕಾರಿ ಸಮಿತಿಯವರಾಗಿ ಅಧ್ಯಕ್ಷ ಸುಧೀರ್ ಶೆಣೈ, ಉಪಾಧ್ಯಕ್ಷ ಗಿರೀಶ್ ಶೆಣೈ, ಕಾರ್ಯದರ್ಶಿ ದೀಪಕ್ ಕಟ್ಟಿ, ಹಾಗೂ ಖಜಾಂಚಿ ಕಿರಣ್ ಭಟ್ ರವರು ದೀಪ ಬೆಳಗುವುದರ ಮೂಲಕ ಆರಂಭವಾಯಿತು. ಕೂಟದ ಅಧ್ಯಕ್ಷರು ತಮ್ಮ ಸ್ವಾಗತ ಭಾಷಣದಲ್ಲಿ, ಯುವ ಪೀಳಿಗೆಗೆ ವಿಜ್ಞಾನ, ತಂತ್ರಜ್ಞಾನದ ಜೊತೆ ಜೊತೆಗೆ ಭಕ್ತಿ ಮತ್ತು ಆಧ್ಯಾತ್ಮಿಕ ಜ್ಞಾನದ ಅವಶ್ಯಕತೆಯನ್ನು ತಿಳಿಸಿ ಹೇಳಿದರು. ಕೂಟದ ಮಕ್ಕಳಿಗೆ ಪೌರಾಣಿಕ ಪಾತ್ರಗಳ ಛದ್ಮವೇಷ ಸ್ಪರ್ಧೆಯನ್ನು ಮತ್ತು ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹತ್ತನೆಯ ಮತ್ತು ಹನ್ನೆರಡನೆಯ ತರಗತಿಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ ಕೂಟದ ಸದಸ್ಯರ ಮಕ್ಕಳಿಗೆ ಪದಕ ಹಾಗೂ ಪ್ರಶಸ್ತಿಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು.
ಕೂಟದ ಮಹಿಳೆಯರು ಸ್ಥಳೀಯ ಪ್ರದೇಶವಾರು ಸಾಲ್ಮಿಯಾ, ರಿಗೈ, ಫಾಹಹೀಲ್ ಎಂಬ ಮೂರು ವಿಭಾಗಗಳಲ್ಲಿ ಸಾಂಪ್ರದಾಯಿಕ ಭಕ್ತಿಗೀತೆಗಳನ್ನು ಹಾಡಿದರು. ಪುರುಷ ವೃಂದದಿಂದ ಡಾ|ಸುರೇಂದ್ರ ನಾಯಕ್ ರವರ ನೇತೃತ್ವದಲ್ಲಿ ಸುಶ್ರಾವ್ಯ ದಾಸ ಸಂಕೀರ್ತನೆ ನೆಡೆಯಿತು. ವೇದಿಕೆಯಲ್ಲಿ ಮಹಾಲಕ್ಷ್ಮಿ ಮೂರ್ತಿಯ ಪ್ರತಿಷ್ಠಾಪನೆ, ಅಲಂಕಾರ ಕಣ್ಮನ ಸೆಳೆಯುವಂತಿತ್ತು. ಮಹಿಳಾ ಭಕ್ತವೃಂದ ಸಾಮೂಹಿಕ ಕುಂಕುಮಾರ್ಚನೆಯಲ್ಲಿ ಭಕ್ತಿಯಿಂದ ಪಾಲ್ಗೊಂಡರು. ಮರಳಮಲ್ಲಿಗೆ ಸಂಚಾಲಕ ಉಲ್ಲಾಸ ವದನ ಹಾಗೂ ಸಮಿತಿಯವರು ಮಕ್ಕಳು ಹಾಗೂ ಕಾರ್ಯಕಾರಿ ಸಮಿತಿ ಜೊತೆಯಲ್ಲಿ, ತ್ರೈಮಾಸಿಕ ಪತ್ರಿಕೆ ’ಮರಳ ಮಲ್ಲಿಗೆ’ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಇದೇ ಸಂದರ್ಭದಲ್ಲಿ, ಕೂಟದ 2014 ನೆಯ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಸನ್ಮಾನಿಸಲಾಯಿತು. ಕೂಟದ ಮಾಜಿ ಅಧ್ಯಕ್ಷರುಗಳಾಗಿ ಸೇವೆಸಲ್ಲಿಸಿ, ಈಗ ಸ್ವದೇಶಕ್ಕೆ ಮರಳಿರುವ ಡಾ|ಪೀಟರ್ ಹಾಗೂ ಎಕನಾಥ್ ವರ್ಣೇಕರ್ ರವರ ಬಗ್ಗೆ ಸ್ಥಾಪಕ ಸದಸ್ಯ, ಮಾಜಿ ಅಧ್ಯಕ್ಷರಾದ ವಾಸುಕಿ ನುಗ್ಗೇಹಳ್ಳಿಯವರು ಹಿತವಚನಗಳನ್ನಾಡಿದರು. ಆ ಮೂಲಕ ಅವರುಗಳಿಗೆ ಬೀಳ್ಕೊಡುಗೆ ನೀಡಲಾಯಿತು. ಸಾರ್ವಜನಿಕ ಸಂಪರ್ಕ ಸಮಿತಿ ಸದಸ್ಯರು, ಸಂಚಾಲಕಿ ರೇಖಾ ದಾಮೋದರ್ ರವರ ಮುಂದಾಳತ್ವದಲ್ಲಿ ರಂಗೋಲಿ, ಸ್ವಾಗತಮಂಟಪ, ದೀಪಗಳಿಂದ ಶೃಂಗರಿಸಿ, ಸ್ವಾಗತಿಸಿ ಹಬ್ಬದ ವಾತಾವರಣ ಮೂಡಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕಿ ದಿವ್ಯಾ ಕೃಷ್ಣಪ್ರಸಾದ್, ಸಹ ಸಂಚಾಲಕಿ ಡಾ|ಪ್ರೀತಿ ಶೆಟ್ಟಿ ಹಾಗೂ ಸಮಿತಿ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆಡೆಸಿಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಅಷ್ಟಲಕ್ಷ್ಮಿಯರ ಪಾತ್ರಗಳೊಂದಿಗೆ ಸುಮಂಗಲಿಯರಿಂದ ಅಕ್ಷತೆ, ಧಾನ್ಯ, ಕಲಶ ಇತ್ಯಾದಿಗಳ ಸ್ವಾಗತದೊಂದಿಗೆ, ಕೆಂಡ ಸೇವೆ, ಕಂಸಾಳೆ, ಡೊಳ್ಳು ಕುಣಿತ ಹಾಗೂ ಇನ್ನಿತರ ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆ ನೆಡೆದು ನೆರೆದವರ ಮೆಚ್ಚುಗೆ ಗಳಿಸಿತು.
ಕ್ರೀಡಾಸಮಿತಿ ಸಂಚಾಲಕ ರಾಮ್ ಕುಮಾರ್ ರವರ ನೇತೃತ್ವದಲ್ಲಿ ಉಪಹಾರ, ಊಟೋಪಚಾರದ ವ್ಯವಸ್ಥೆ ನೆಡೆಯಿತು. ಕಾರ್ಯದರ್ಶಿ ದೀಪಕ್ ಕಟ್ಟಿಯವರಿಂದ ಧನ್ಯವಾದ ಸಮರ್ಪಣೆ ನೆಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ, ಓರಿಯಂಟಲ್ ರೆಸ್ಟೋರೆಂಟ್ ರವರಿಂದ ಸಾತ್ವಿಕ ಭೋಜನ ಸಾಂಪ್ರದಾಯಿಕ ’ಬಾಳೆಎಲೆ ಊಟ’ ದ ವ್ಯವಸ್ಥೆ ಮಾಡಲಾಗಿತ್ತು.
ವರದಿ: ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿ.