ಬೆಂಗಳೂರು,ಮಾರ್ಚ್.02 : ಮುಖ್ಯಮಂತ್ರಿ ಸಿದ್ದರಾಮಯ್ಯನವರ 10 ನೆ ಬಜೆಟ್, ತೆಂಗು ಬೆಳೆಗಾರರಲ್ಲಿ ಹರ್ಷ ತರುವ ಸಾಧ್ಯತೆ ಇದೆ. ತೆಂಗು ಬೆಳೆದಾರರು ಅಲ್ಕೋಹಾಲ್ ಅಲ್ಲದ ಈ ಪಾನೀಯವನ್ನು ಮಾರುಕಟ್ಟೆಗೆ ಪರಿಚಯಿಸಬಹುದಾದ ಉದಾರ ನೀರಾ ನೀತಿಯನ್ನು ಬಜೆಟ್ ನಲ್ಲಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ತೆಂಗಿನ ಮರದಿಂದ ಇಳಿಸುವ ಈ ಪಾನೀಯವನ್ನು ಕೆಲವೇ ಘಂಟೆಗಳಲ್ಲಿ ಕುಡಿಯದೇ ಹೋದರೆ ಅಥವಾ ಸರಿಯಾದ ಉಷ್ಣಾಂಶದಲ್ಲಿ ಶೇಖರಿಸದಿದ್ದರೆ ಮದ್ಯವಾಗಿ ಅದು ಪರಿವರ್ತನೆಯಾಗುತ್ತದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಮೂಲಗಳ ಪ್ರಕಾರ ಸಿದ್ದರಾಮಯ್ಯನವರು ಕೇರಳ ಮತ್ತು ಗೋವಾದಲ್ಲಿ ನೀರಾ ನೀತಿಯನ್ನು ಅಧ್ಯಯನ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ವಾಣಿಜ್ಯ ಉದ್ಯಮಕ್ಕಾಗಿ ನೀರಾ ಇಳಿಸುವುದಕ್ಕೆ, ಸಂಸ್ಕರಿಸುವುದಕ್ಕೆ ಮತ್ತು ಮಾರಾಟ ಮಾಡುವುದಕ್ಕೆ ಈಗಿನ ಕರ್ನಾಟಕ ಅಬಕಾರಿ ನೀತಿಗೆ ತಿದ್ದುಪಡಿ ಮಾಡಬೇಕಿದೆ. ಹಲವಾರು ವರ್ಷಗಳಿಂದ ತೆಂಗು ಬೆಳೆದಾರಾರು ಈ ತಿದ್ದುಪಡಿಗೆ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಸಿದ್ದರಾಮಯ್ಯ ಬಜೆಟ್ ಪೂರ್ವ ರೈತರೊಂದಿಗೆ ಸಂವಾದ ನಡೆಸಿದ ವೇಳೆಯಲ್ಲೂ ಈ ವಿಷಯ ಚರ್ಚೆಗೆ ಬಂದಿತ್ತು.