“ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾದರೆ ಅದಕ್ಕೆ ಮೊದಲಿಗೆ ನಮ್ಮ ನಮ್ಮ ಮನೆಯಿಂದಲೇ ಚಾಲನೆ ಸಿಗಬೇಕು , ಅದೂ ಮಕ್ಕಳಿಂದ ” – ಡಾ ಎ . ಪಿ . ಜೆ ಅಬ್ದುಲ್ ಕಲಾಂ
ಬಹರೈನ್ ; ಮಾರ್ಗದ ಇಕ್ಕೆಡೆಗಳಲ್ಲೂ ಕಿಕ್ಕಿರಿದ ಜನಸಾಗರ , ದೇಶಭಕ್ತಿ ಗೀತೆಗಳನ್ನು ನಿರಂತರವಾಗಿ ನುಡಿಸುತ್ತಿರುವ ಇಂಡಿಯನ್ ಸ್ಕೂಲಿನ ವಾದ್ಯ ವ್ರಂದದೊಂದಿಗೆ ಇಲ್ಲಿನ ಮನಾಮದಲ್ಲಿರುವ ಇಂಡಿಯನ್ ಕ್ಲಬ್ಬಿನ ಶತಮಾನೋತ್ಸವದ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲು ಬಂದ ಡಾ ಎ .ಪಿ . ಜೆ ಅಬ್ದುಲ್ ಕಲಾಮ್ ರವರಿಗೆ ಸಕಲ ಮರ್ಯಾದೆಗಳೊಂದಿಗೆ ಅಭೂತಪೂರ್ವ ಸ್ವಾಗತ ಕೋರಲಾಯಿತು .ಸಾಂಪ್ರದಾಯಿಕ ಚೆಂಡೆ ,ಕೊಂಬು ,ವಾದ್ಯಗಳೊಂದಿಗೆ ಕ್ಲಬ್ಬಿನ ಮುಖ್ಯ ಪ್ರವೇಶ ದ್ವಾರದಿಂದ ವೇದಿಕೆಯವರೆಗೆ ಸುಮಾರು ನೂರಕ್ಕೂ ಹೆಚ್ಚು ಮುತ್ತೈದೆಯರು ಇಕ್ಕೆಡೆಗಳಲ್ಲೂ ಕಲಶಗಳನ್ನು ಹಿಡಿದುಕೊಂಡು , ಹೂಗಳನ್ನು ಚೆಲ್ಲುತ್ತಾ,ಆರತಿಯೊಂದಿಗೆ ಡಾ ಕಲಾಂ ರವರಿಗೆ ಪೂರ್ಣಕುಂಭ ಸ್ವಾಗತ ನೀಡಿದರು . ಸುಮಾರು ೨೦೦೦ ಕ್ಕೂ ಹೆಚ್ಚು ಭಾರತೀಯರು ಈ ಸಮಾರಂಭದಲ್ಲಿ ಭಾಗಿಯಾಗಿ ಡಾ ಕಲಾಂ ರವರ ಮಾತುಗಳನ್ನು ಆಲಿಸಿ ಪುಳಕಿತರಾದರು .
ಕಾರ್ಯಕ್ರಮದ ಪ್ರಾರಂಭದಲ್ಲಿ ಇಂಡಿಯನ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೀ ಆನಂದ್ ಲೋಬೋರವರು ನೆರೆದವರನ್ನು ಉದ್ದೇಶಿಸಿ ಮಾತನಾಡಿ ಡಾ ಕಲಾಂ ಹಾಗು ಇತರರನ್ನು ಸ್ವಾಗತಿಸಿದರು . ವೇದಿಕೆಯಲ್ಲಿ ಕೊಲ್ಲಿಯಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿ ಪ್ರತಿಷ್ಟಿತ ಇಂಡಿಯನ್ ಕ್ಲಬ್ಬಿನ ಶತಮಾನದ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡಿಗ ಉದ್ಯಮಿ ,ಸಮಾಜ ಸೇವಕ ಶ್ರೀ ರೋನಾಲ್ಡ್ ಕ್ಹೊಲಾಸೋ ,ಡಾ ವರ್ಗೀಸ್ ಕುರಿಯನ್ ,ಡಾ ರವಿ ಪಿಳ್ಳೈ , ಡಾ ಬಿ . ಆರ್ . ಶೆಟ್ಟಿ ಯವರ ಪ್ರತಿನಿಧಿಯಾಗಿ ವಿನೀಶ್ ಕುಮಾರ್ ,ಶ್ರೀ ಯೂಸುಫ್ ಆಲಿಯವರ ಪ್ರತಿನಿಧಿಯಾಗಿ ಶ್ರೀ ಜೂಸರ್ ರುಪರೆಲ್ ಮಾತ್ರವಲ್ಲದೆ ಇಲ್ಲಿನ ಭಾರತೀಯ ದೂತವಾಸದ ಪ್ರಥಮ ಕಾರ್ಯದರ್ಶಿ ಶ್ರೀ ರಾಮ್ ಸಿಂಗ್ ,ಭಾರತೀಯ ರಾಯಭಾರಿಯವರ ಧರ್ಮಪತ್ನಿ ಶ್ರೀಮತಿ ಮಾಲ ಮೋಹನ್ ಕುಮಾರ್ , ಇಂಡಿಯನ್ ಕ್ಲಬ್ಬಿನ ಉಪಾಧ್ಯಕ್ಷ ಶ್ರೀ ಅಶೋಕ್ ಕುಮಾರ್ ,ಕಾರ್ಯಕ್ರಮದ ಸಮನ್ವಯಕಾರ ಶ್ರೀ ಮ್ಯಾತಿವ್ ಜೋಸೆಫ್ ಹಾಗು ಆಡಳಿತ ಮಂಡಳಿಯ ಪಧಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು .
ಡಾ ಅಬ್ದುಲ್ ಕಲಾಂ ಹಾಗು ಇತರ ಗಣ್ಯರುಗಳು ದೀಪ ಬೆಳಗಿಸಿ ಶತಮಾನೋತ್ಸವದ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು . ಡಾ ಅಬ್ದುಲ್ ಕಲಾಂರವರು ವಿವಿಧ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿ ಪ್ರತಿಷ್ಟಿತ ಇಂಡಿಯನ್ ಕ್ಲಬ್ಬಿನ ಶತಮಾನದ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡಿಗ ಉದ್ಯಮಿ ,ಸಮಾಜ ಸೇವಕ ಶ್ರೀ ರೋನಾಲ್ಡ್ ಕ್ಹೊಲಾಸೋ ,ಡಾ ವರ್ಗೀಸ್ ಕುರಿಯನ್ ,ಡಾ ರವಿ ಪಿಳ್ಳೈ , ಡಾ ಬಿ . ಆರ್ . ಶೆಟ್ಟಿ ಹಾಗು ,ಶ್ರೀ ಯೂಸುಫ್ ಆಲಿಯವರಿಗೆ ಶತಮಾನೋತ್ಸವದ ಪ್ರಶಸ್ತಿ ನೀಡಿ ಸಮ್ಮಾನಿಸಿದರು . ಪೂರ್ವನಿಯೋಜಿತ ಕಾರ್ಯಕ್ರಮಗಳಿಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಡಾ ಬಿ . ಆರ್ . ಶೆಟ್ಟಿ,ಹಾಗು ಶ್ರೀ ಯೂಸುಫ್ ಅಲಿಯವರ ಪರವಾಗಿ ಡಾ ಬಿ . ಆರ್ . ಶೆಟ್ಟಿ ಯವರ ಪ್ರತಿನಿಧಿಯಾಗಿ ವಿನೀಶ್ ಕುಮಾರ್ ,ಶ್ರೀ ಯೂಸುಫ್ ಆಲಿಯವರ ಪ್ರತಿನಿಧಿಯಾಗಿ ಶ್ರೀ ಜೂಸರ್ ರುಪರೆಲ್ ರವರು ಪ್ರಶಸ್ತಿ ಸ್ವೀಕರಿಸಿದರು . ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಇವರೆಲ್ಲರೂ ಕ್ರಜ್ನತೆಗಳನ್ನು ಅರ್ಪಿಸಿ ,ಇನ್ನು ಮುಂದೆಯೂ ಸಮಾಜ ಸೇವೆಗಾಗಿ ಕಟಿ ಬದ್ಧರಾಗಿರುತ್ತೇವೆ ಎಂದರು .
ತದನಂತರ ಎಲ್ಲರೂ ಕಾತುರದಿಂದ ಕಾಯುತ್ತಿರುವ ಡಾ ಕಲಾಂ ರವರು ಮಾತು ಆರಂಭಿಸುತ್ತಿರುವಂತೆಯೇ ಅಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದತೆ ಒಮ್ಮೆಲೇ ಆವರಿಸ್ಕೊಂಡಿತು . ಸಾವಿರಾರು ಸಂಖ್ಯೆಯಲ್ಲಿ ನೆರೆದ ಭಾರತೀಯರು ಡಾ ಕಲಾಂ ರವರ ಮಾತುಗಳನ್ನು ತದೇಕ ಚಿತ್ತದಿಂದ ಆಲಿಸಿದರು . ಅವರು ಬಹಳ ಸರಳವಾಗಿ ,ಅಷ್ಟೇ ಪರಿಣಾಮಕಾರಿಯಾಗಿ ಎಲ್ಲರ ಮನಮುಟ್ಟುವಂತೆ ಮಾತನಾಡಿ ಪ್ರಶಂಸೆಗೆ ಪಾತ್ರರಾದರು . ಅವರು ಮಾತನಾಡಿ ‘ ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾದರೆ ಅದಕ್ಕೆ ಮೊದಲಿಗೆ ನಮ್ಮ ನಮ್ಮ ಮನೆಯಿಂದಲೇ ಚಾಲನೆ ಸಿಗಬೇಕು , ಅದೂ ಮಕ್ಕಳಿಂದ.ಮಕ್ಕಳು ತಮ್ಮ ಅಮ್ಮಂದಿರನ್ನು ಸಂತೋಷದಿಂದ ನೋಡಿಕೊಂಡರೆ ಇದೇ ಮನೆಯಲ್ಲಿ ಶಾಂತಿ,ಸಂತೋಷ ತುಂಬಿರುತ್ತದೆ ,ಮನೆಯಲ್ಲಿ ಸಂತೋಷ ತುಂಬಿದ್ದರೆ ನಗರಗಳಲ್ಲಿ ಸಂತೋಷ ತುಂಬಿರುತ್ತದೆ ,ನಗರಗಳಲ್ಲಿ ಸಂತೋಷ ತುಂಬಿದ್ದರೆ ರಾಜ್ಯಗಳಲ್ಲಿ ಸಂತೋಷ ತುಂಬಿರುತ್ತದೆ ,ರಾಜ್ಯಗಳಲ್ಲಿ ಸಂತೋಷ ತುಬಿದ್ದರೆ ದೇಶಗಳಲ್ಲಿ ಸಂತೋಷ ತುಂಬಿರುತ್ತದೆ ,ದೇಶಗಳಲ್ಲಿ ಸಂತೋಷ ತುಂಬಿದ್ದರೆ ಇದೇ ಜಗತ್ತಿನಲ್ಲೇ ಸಂತೋಷ ತುಂಬಿ ಶಾಂತಿ ನೆಲೆಸುತ್ತದೆ ಎಂದರು ಮಾತ್ರವಲ್ಲದೆ ಮಕ್ಕಳು ಟಿ ವಿ ನೋಡುವುದನ್ನು ಕಡಿಮೆ ಮಾಡಿ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಅಲ್ಲದೆ ಮಕ್ಕಳಿಗೆ ೧೭ ವರುಷ ತುಂಬುವ ಮೊದಲೇ ಹೆತ್ತವರು ಹಾಗು ಭೋದಕರು ಅವರಲ್ಲಿ ನೈತಿಕತೆ ,ಪ್ರಾಮಾಣಿಕತೆ ,ಉತ್ತಮ ಗುಣನಡತೆಗಳನ್ನು ಬೆಳೆಸಬೇಕು” ಎಂದರು ಹಾಗು ಶತಮಾನೋತ್ಸವದ ಸಂಭ್ರಮದಲ್ಲಿರುವ ಇಂಡಿಯನ್ ಕ್ಲಬ್ಬಿಗೆ ಶುಭ ಹಾರೈಸಿ ಇಷ್ಟು ವರುಷಗಳಿಂದ ಇದನ್ನು ಕಟ್ಟಿ ಬೆಳೆಸಿದ ಎಲ್ಲರೂ ನಿಜಕ್ಕೂ ಶ್ಲಾಘನೆಗೆ ಅಹ್ರರು ಎಂದರು .
ಇದೆ ಸಂಧರ್ಭದಲ್ಲಿ ಇಲ್ಲಿನ ಸಮಸ್ತ ಭಾರತೀಯರ ಪ್ರೀತಿ ,ವಿಶ್ವಾಸ , ಅಭಿಮಾನದ ಧ್ಯೋತಕವಾಗಿ ಡಾ ಅಬ್ದುಲ್ ಕಲಾಂರವರಿಗೆ ಪೇಟ ತೊಡಿಸಿ , ಶಾಲು ಹೊದಿಸಿ ಫಲ ಪುಷ್ಪಗಳೊಂದಿಗೆ ಸ್ಮರಣಿಕೆಯನ್ನು ನೀಡಿ ಹ್ರದಯಸ್ಪರ್ಶಿ ಸಮ್ಮಾನ ನೀಡಲಾಯಿತು .
ಕ್ಲಬ್ಬಿನ ಅಧ್ಯಕ್ಷರಾದ ಶ್ರೀ ಆನಂದ್ ಲೋಬೋ ರವರು ಮಾತನಾಡಿ ತಮ್ಮ ಕರೆಗೆ ಓಗೊಟ್ಟು ಆಗಮಿಸಿದ ಮಹಾನ್ ಆಸ್ತಿಗೆ ತುಂಬು ಹ್ರದಯದ ಕ್ರತಜ್ನತೆಗಳು ಎಂದರಲ್ಲದೆ ಡಾ ಅಬ್ದುಲ್ ಕಲಾಮ್ ರವರ ಪಾದ ಸ್ಪರ್ಶದಿಂದ ಇಂಡಿಯನ್ ಕ್ಲಬ್ ಪಾವನವಾಯಿತು ,ನಾವೆಲ್ಲರೂ ನಿಜಕ್ಕೂ ಧನ್ಯರು ಎಂದು ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು
ಚಿತ್ರ -ವರದಿ -ಕಮಲಾಕ್ಷ ಅಮೀನ್