
ಗುಫೂಲ್, ಬಹ್ರೈನ್: ದಶಮಾನೋತ್ಸವದ ಸಡಗರದಲ್ಲಿರುವ ಮೊಗವೀರ್ಸ್ ಬಹ್ರೈನ್ ಸಂಸ್ಥೆಯು ಇತ್ತೀಚೆಗೆ ದ್ವೀಪ ರಾಷ್ಟ್ರದ ಗುಫೂಲ್ ನಗರದಲ್ಲಿರುವ ಜ಼ೆಜ಼ೆನ್ಯಾ ಈಜುಕೊಳದ ಪರಿಸರದಲ್ಲಿ ತನ್ನ ಚಳಿಗಾಲದ ಸ್ನೇಹಕೂಟವನ್ನು ಸಂಭ್ರಮದಿಂದ ಆಚರಿಸಿತು. ಸಂಸ್ಥೆಯ ಸದಸ್ಯರು, ಮತ್ತವರ ಪರಿವಾರ ಹಾಗೂ ವಿಶೇಷ ಆಹ್ವಾನಿತರಿಗಷ್ಟೇ ಮೀಸಲಾಗಿದ್ದ ಈ ಸ್ನೇಹಕೂಟದ ಆರಂಭದಲ್ಲಿ ತುಳುನಾಡಿನ ಸಾಂಪ್ರದಾಯಿಕ ಶೈಲಿಯಂತೆ ನಾರೀಕೇಳ ಒಡೆಯುವ ಮೂಲಕ ಸಂಸ್ಥೆಯ ಹಿರಿಯ ಸದಸ್ಯ ಕೋದಂಡರಾಮ ಸಾಲ್ಯಾನ್ ಅವರು ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಲೀಲಾಧರ್ ಬೈಕಂಪಾಡಿ, ಇತರ ಪ್ರಮುಖ ಸದಸ್ಯರು ಮತ್ತು ವಿಶೇಷ ಆಹ್ವಾನಿತರುಗಳಾದ ನವೀನ್ ಮೆಂಡನ್, ಸತೀಶ್ ಕುಮಾರ್, ಗಿರೀಶ್ ಇಡ್ಯಾ, ಚಂದ್ರ ಮೆಂಡನ್, ಪುನೀತ್ ಪುತ್ರನ್, ಸುರೇಶ್ ಸಾಲ್ಯಾನ್, ಪದ್ಮನಾಭ ಕಾಂಚನ್, ಚಂದ್ರಶೇಖರ ಮೆಂಡನ್ ಇವರೆಲ್ಲಾ ಉಪಸ್ಥಿತರಿದ್ದರು.









ದ್ವೀಪದಲ್ಲಿ ಕಡು ಬೇಸಿಗೆ ಮುಗಿದು ಚಳಿಗಾಲ ಕಾಲಿಡುತ್ತಿದ್ದಂತೆ ಎಲ್ಲೆಡೆ ಆವರಿಸಿರುವ ಅಹ್ಲಾದಕರ ವಾತಾವರಣದ ಒಂದು ಸುಂದರ ಸಂಜೆ ಆರಂಭಗೊಂಡ ಈ ಸ್ನೇಹಮಿಲನದಲ್ಲಿ ವಿವಿಧ ಮೋಜಿನ ಆಟಗಳು, ವೈವಿಧ್ಯಮಯ ಖಾದ್ಯಗಳ ಪ್ರತ್ಯಕ್ಷ ತಯಾರಿ, ಸಂಗೀತ ಮತ್ತು ನೃತ್ಯಗಳೆಲ್ಲವಿದ್ದು, ಅಂದಿನ ಒಟ್ಟು ಕಾರ್ಯಕ್ರಮವು ತಡ ರಾತ್ರಿಯವರೆಗೂ ಅತಿ ಸಂಭ್ರಮದಿಂದ ಜರುಗಿತು. ದ್ವೀಪರಾಷ್ಟ್ರದಾದ್ಯಂತ ಮತ್ತು ಸೌದಿ ಅರೇಬಿಯಾದ ಪೂರ್ವ ಗಡಿಪ್ರದೇಶದಲ್ಲಿ ಉದ್ಯೋಗ ನಿಮಿತ್ತ ವಾಸಿಸುತ್ತಿರುವ ಅನೇಕ ಅನಿವಾಸಿ ಮೊಗವೀರ ಸಮಾಜ ಬಾಂಧವರು ಈ ಕಾರ್ಯಕ್ರಮದ ಮೂಲಕ ಪರಸ್ಪರ ಭೇಟಿಯಾಗಿ ತಮ್ಮ ಭಾವನೆ ಮತ್ತು ವಿಚಾರಗಳನ್ನು ವಿನಿಮಯ ಮಾಡಿಕೊಂಡರು.
ಈ ಕಾರ್ಯಕ್ರಮವು ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ಯೋಜಿಸಲಾಗಿರುವ ದಶ-ವಿಶೇಷ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಇದಕ್ಕೆ ಮುಖ್ಯ ಪ್ರಾಯೋಜಕತ್ವವನ್ನು ನವೀನ್ ಮೆಂಡನ್ ಅವರೂ, ಅಂತೆಯೇ ಸಹ ಪ್ರಾಯೋಜಕತ್ವವನ್ನು ತೀರ್ಥ ಸುವರ್ಣ ಮತ್ತು ಗಿರೀಶ್ ಇಡ್ಯಾ ಅವರೂ ನೀಡಿದ್ದರು. ಅದೇ ರೀತಿ ಸಂಸ್ಥೆಯ ಇತರ ಅನೇಕ ಸದಸ್ಯರು ಈ ಸ್ನೇಹ ಮಿಲನವನ್ನು ಸಂಘಟಿಸುವಲ್ಲಿ ವಿವಿಧ ರೀತಿಯ ಸಹಾಯ-ಸಹಕಾರವನ್ನಿತ್ತಿದ್ದರು. ಕಾರ್ಯಕ್ರಮದ ಕೊನೆಗೆ ಸ್ನೇಹಕೂಟದಲ್ಲಿ ಭಾಗಿಯಾದ ಎಲ್ಲರಿಗೂ ಸುಂದರ ನೆನಪಿನ ಕಾಣಿಕೆಯನ್ನು ನೀಡಿ ಪ್ರೋತ್ಸಾಹಿಸಲಾಯಿತು.