ಕುವೈಟ್: ಕೇರಳ ಹಾಗೂ ಕರ್ನಾಟಕದ ಮುಸ್ಲಿಂ ಭಾಂಧವರು ಜಂಟಿಯಾಗಿ ನಡೆಸುಕೊಂಡು ಹೋಗುತ್ತಿರುವ “ಕುವೈಟ್ ಕೇರಳ ಮುಸ್ಲಿಂ ಎಸೋಸಿಯೇಶನ್” ಇದರ ಫಹಾಹೀಲ್,ಮಂಗಫ್ ಹಾಗೂ ಮಹಬೂಲ ಯೂನಿಟ್ ಗಳ ವಾರ್ಷಿಕ ಮಹಾಸಭೆಯು ದಿನಾಂಕ 28/11/2014 ರ ಶುಕ್ರವಾರದಂದು ಫಹಾಹೀಲ್ ನ ಕಮ್ಯೂನಿಟಿ ಹಾಲ್ (ಕೆ.ಕೆ.ಎಮ್.ಎ.) ಇದರಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಕೆ.ಎಮ್.ಎ ಇದರ ಕಾರ್ಯಾಧ್ಯಕ್ಷರಾದ ಜನಾಬ್ ಬಿ.ಎಮ್. ಇಕ್ಬಾಲ್ ರವರು ವಹಿಸಿದ್ದರು. ಗಣ್ಯ ಅಥಿತಿಗಳಾಗಿ ಜನಾಬ್ ಅಬ್ದುಲ್ ಫತಾಹ್ ತೈಯ್ಯಿಲ್ (ಅಧ್ಯಕ್ಷರು ಕೆ.ಕೆ.ಎಮ್.ಎ.ಕುವೈಟ್) ರವರು ಆಗಮಿಸಿ 13000 ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ ಬೃಹತ್ ಸಂಸ್ಥೆಯ ಕಾರ್ಯಕಲಾಪಗಳ ಬಗ್ಗೆ ಸವಿವರವಾಗಿ ಸಭಿಕರಿಗೆ ಮನದಟ್ಟು ಮಾಡಿದರು. ವೇದಿಕೆಯಲ್ಲಿ ಕೆ.ಕೆ.ಎಮ್.ಎ. ಇದರ ಹಿರಿಯ ಸದಸ್ಯರೂ ಗಣ್ಯ ವ್ಯಕ್ತಿಯೂ ಆದಂತಹ ಜನಾಬ್ ಹಸನ್ ಯೂಸುಫ್ (ಕಂಕನಾಡಿ) ರವರು ಹಾಗೂ ಫಹಾಹೀಲ್ ಯೂನಿಟ್ ನ ಅಧ್ಯಕ್ಷರೂ ಆದಂತಹ ಜನಾಬ್ ನಾಸಿರ್ ಆದ್ಯಪ್ಪಾಡಿಯವರು ಉಪಸ್ಥಿತರಿದ್ದರು.
ಇದೇ ವೇಳೆ ಈ ಹಿಂದಿನ ಮೂರು ಯೂನಿಟ್ ಗಳ ಕಮಿಟಿಗಳನ್ನು ಬರ್ಖಾಸ್ತು ಮಾಡಿ ಮುಂದಿನ ಅವಧಿಗಾಗಿ ಸರ್ವಾನುಮತದಿಂದ ಅಭ್ಯರ್ಥಿಗಳನ್ನು ಆರಿಸಲಾಯಿತು. ಚುನಾವಣಾ ಪ್ರಕ್ರಿಯೆಯು ಅಬ್ದುಲ್ ಜಬ್ಬಾರ್ ಗುರುಪುರ(ಪ್ರಧಾನ ಕಾರ್ಯದರ್ಶಿ ಕೆ.ಕೆ.ಎಮ್.ಎ.ಕರ್ನಾಟಕ ವಿಂಗ್) ಇವರ ನೇತೃತ್ವದಲ್ಲಿ ನಡೆಯಿತು. ಫಹಾಹೀಲ್ ಯೂನಿಟ್ ನಿಂದ ನಾಸಿರ್ ಅದ್ಯಪ್ಪಾಡಿಯವರನ್ನು ಅಧ್ಯಕ್ಷರಾಗಿಯೂ, ಉಸ್ಮಾನ್ ರವರನ್ನು ಉಪಾಧ್ಯಕ್ಷರನ್ನಾಗಿ, ತಮೀಮ್ ಉಳ್ಳಾಲ ರವರನ್ನು ಕಾರ್ಯದರ್ಶಿಗಳಾಗಿ, ತನ್ ಝೀಲ್ ರವರನ್ನು ಸಂಘಟನಾ ಕಾರ್ಯದರ್ಶಿಗಳನ್ನಾಗಿ ಹಾಗೂ ದರ್ವೇಝ್ ರವರನ್ನು ಖಜಾಂಚಿಯನ್ನಾಗಿ ಆರಿಸಲಾಯಿತು. ಮಹಬೂಲ ಯೂನಿಟ್ ನಿಂದ ಮಾಬಿಯ ಕಡಬ ರವರನ್ನು ಅಧ್ಯಕ್ಷರನ್ನಾಗಿ, ಮುಹಮ್ಮದ್ ಹನೀಫ್ ಮಂಚಿ ರವರನ್ನು ಉಪಾಧ್ಯಕ್ಷರನ್ನಾಗಿ, ಅಶ್ರಫ್ ಪುತ್ತೂರು ರವರನ್ನು ಕಾರ್ಯದರ್ಶಿಗಳನ್ನಾಗಿ, ಶಿಹಾಬುದ್ದೀನ್ ರವರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ, ಉಬೈದುಲ್ಲಾರವರನ್ನು ಖಜಾಂಚಿಯನ್ನಾಗಿ ಆರಿಸಲಾಯಿತು. ಹಾಗೂ ಮಂಗಫ್ ಯೂನಿಟ್ ನಿಂದ ಫಿರೋಝ್ ಅಹ್ಮದ್ ರವರನ್ನು ಅಧ್ಯಕ್ಷರನ್ನಾಗಿ, ಅಬ್ದುಲ್ ಮಲಿಕ್ ರವರನ್ನು ಉಪಾಧ್ಯಕ್ಷರನ್ನಾಗಿ, ಅಬ್ದುಲ್ ಕಾದರ್ ಪುತ್ತೂರು ರವರನ್ನು ಕಾರ್ಯದರ್ಶಿಯನ್ನಾಗಿ, ಝುಬೈರ್ ರವರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ಅಬೂಬಕರ್ ಅಲ್ ಶಾಯರವರನ್ನು ಖಜಾಂಚಿಯನ್ನಾಗಿ ಆರಿಸಲಾಯಿತು. ಇದೇ ವೇಳೆ ಹಾಸನದ ನೂತನ ಯೂನಿಟನ್ನೂ ರಚಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಕೆ.ಕೆ.ಎಮ್.ಎ. ಕರ್ನಾಟಕ ವಿಂಗ್ ಇದರ ಉಪಾಧ್ಯಕ್ಷರಾದ ಜನಾಬ್ ಎಸ್.ಎಮ್.ಬಶೀರ್ ರವರು “ಕುವೈಟ್ ಕೇರಳ ಮುಸ್ಲಿಂ ಎಸೋಸಿಯೇಶನ್” ಇದರ ಪರಿಣಾಮಕಾರಿ ಸಮಾಜ ಸೇವೆಗಳ ಬಗ್ಗೆ ಅತ್ಯಂತ ವ್ಯವಸ್ಥಿತ ರೂಪದಲ್ಲಿ ಕಂಪ್ಯೂಟರ್ ನ ಪರದೆಯಲ್ಲಿ ಶೇಖರಿಸಿದ ಸಾಕ್ಷ್ಯಚಿತ್ರಗಳ ಮೂಲಕ ನೆರೆದ ಸಭಿಕರಿಗೆ ಮಾಹಿತಿಯನ್ನು ನೀಡಿದರು. ಅದೆಷ್ಟೋ ಮುಸ್ಲಿಂ ಕುಟುಂಬಗಳು, ನಿರ್ಗತಿಕ ಮಕ್ಕಳು, 25 ವರ್ಷ ದಾಟಿದರೂ ಮದುವೆಯಾಗದೆ ಉಳಿದ ಹೆಣ್ಮಕ್ಕಳು, ಜಾನುವಾರುಗಳೂ ನಿಲ್ಲದಂತಹ ಮುಸ್ಲಿಮರ ಹರುಕು ಮುರುಕು ಮನೆಗಳು, ಶಾಲಾ, ಕಾಲೇಜು ಫೀಸ್ ಕಟ್ಟಲು ಅಸಮರ್ಥರಾದಂತಹ ಅದೆಷ್ಟೋ ಮುಸ್ಲಿಂ ಪ್ರತಿಭೆಗಳು, ಎರಡು ಹೊತ್ತಿನ ಊಟಕ್ಕೂ ಗತಿಯಿಲ್ಲದಂತಹ ಅದೆಷ್ಟೋ ಕುಟುಂಬಗಳು, ಮಾರಕ ಕಾಯಿಲೆಗಳನ್ನು ಹೊಂದಿರುವ ರೋಗಿಗಳನ್ನೂ ಹಾಗೂ ಇನ್ನಿತರ ಹತ್ತು ಹಲವು ಸಮಸ್ಯೆಗಳನ್ನು ಹೊತ್ತುಕೊಂಡಿರುವ ಮುಸ್ಲಿಂ ಕುಟುಂಬಗಳ ಸ್ಥಿತಿಗತಿಗಳನ್ನು ನೋಡಿ ನೆರೆದ ಸಭಿಕರ ಕಣ್ಣುಗಳು ತಮಗರಿಯದಂತೆ ತೇವಗೊಂಡವು. ಈ ಬೃಹತ್ ಸಂಸ್ಥೆಯು ಬಡವರಿಗೆ ಮನೆ, ಮಕ್ಕಳಿಗೆ ಶಾಲಾ ಫೀಸ್, ಕಿಡ್ನಿ ರೋಗಕ್ಕೆ ತುತ್ತಾಗಿ ಡಯಾಲಿಸೀಸ್ ಮಾಡಿಸಲು ಅನುಕೂಲ ಇಲ್ಲದವರಿಗೆ ಉಚಿತ ಡಯಾಲಿಸೀಸ್ ನ ಸೇವೆ, ಮನೆ ಇಲ್ಲದ ಬಡ ಕುಟುಂಬಗಳಿಗೆ ಹೊಸ ಮನೆ ಹಾಗೂ 85 ಕ್ಕೂ ಮಿಕ್ಕಿ ಬಡ ನಿರ್ಗತಿಕ ಮುಸ್ಲಿಂ ಕುಟುಂಬಗಳಿಗೆ ಸಹಾಯಹಸ್ತವನ್ನು ಚಾಚಿಸಿದಂತಹ ಬೃಹತ್ ಸೇವೆ ನಿಜಕ್ಕೂ ಶ್ಲಾಘನೀಯ. ಇಂದು ಅಲ್ ಹಮ್ದುಲಿಲ್ಲಾಹ್ ತನ್ನಿಂದಾದಷ್ಟು ಮಟ್ಟದಲ್ಲಿ ಸೇವೆಯನ್ನು ಈ ಸಂಸ್ಥೆ ಮಾಡುತ್ತಿದೆ. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಸಮಾಜ ಸೇವೆಯನ್ನು ಸಲ್ಲಿಸುವಂತಹ ಕೆ.ಕೆ.ಎಮ್.ಎ. ಇದರ ಸದಸ್ಯರಾಗಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಆದ್ದರಿಂದ ಈ ಸಂಸ್ಥೆಯ ಏಳಿಗೆಗಾಗಿ ಎಲ್ಲಾ ಮುಸ್ಲಿಂ ಭಾಂಧವರೂ ಸಹಕರಿಸಬೇಕು ಹಾಗೂ ಈ ವರ್ಷ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸೇರಿಸಬೇಕು ಎಂದು ಕಾರ್ಯಾಧ್ಯಕ್ಷರಾದ ಬಿ.ಎಮ್.ಇಕ್ಬಾಲ್ ರವರು ಕರೆ ನೀಡಿದರು.
ಕಾರ್ಯಕ್ರಮವನ್ನು ಮುನಿಯಮ್ ರವರು ನಿರೂಪಿಸಿದರು. ಅಶ್ರಫ್ ಪುತ್ತೂರು ಇವರು ಕಿರಾತ್ ಮಾಡಿದರು. ಹಾಗೂ ಅಯ್ಯೂಬ್ ಸೂರಿಂಜೆ ರವರು ಧನ್ಯವಾದ ಸಮರ್ಪಿಸಿದರು. ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಸದಸ್ಯರಿಗೆ ಊಟದ ವ್ಯವಸ್ಥೆ ಮಾಡಲಾಯಿತು.
ವರದಿ: ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ(ಕುವೈಟ್)