ಕುವೈತ್: ಕುವೈತ್ ಕನ್ನಡ ಕೂಟದ ಮೂವತ್ತನೆಯ ವಾರ್ಷಿಕ ಸಮಾರಂಭ ’ಕರ್ನಾಟಕ ಸಿರಿ ಸಂಭ್ರಮ’ ವನ್ನು ದಿನಾಂಕ 7-11-2014 ರಂದು ರಿಗೈನ ರಮದಾ ಹೋಟೇಲ್ನ ಭವ್ಯ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ದಂಪತಿಗಳು ಆಗಮಿಸಿ, ಭಾಗವಹಿಸಿದ್ದು ವಿಶೇಷ ತಾರಾ ಆಕರ್ಷಣೆ ಯಿಂದ ಸಮಾರಂಭಕ್ಕೆ ಮೆರಗು ನೀಡಿತ್ತು.
ಡಾ| ಸುರೇಂದ್ರ ನಾಯಕ್ ಮತ್ತು ತಂಡದವರ ಪ್ರಾರ್ಥನಾ ಗಾಯನ, ಕೂಟದ ಅಧ್ಯಕ್ಷರಾದ ಡಾ|ದಿವಾಕರ್, ಉಪಾಧ್ಯಕ್ಷ ವಿಶ್ವೇಶ್ವರ ಕಾರ್ಕಳ, ಕಾರ್ಯದರ್ಶಿ ಅನಂತ ಮಂಗಲಗಿ, ಖಜಾಂಚಿ ರಾಜೇಶ್ ವಿಠ್ಠಲ್ ದಂಪತಿಗಳೊಡಗೂಡಿ ಜ್ಯೋತಿ ಬೆಳಗುವುದರ ಮೂಲಕ ಸಂಭ್ರಮದ ಮಹಾ ಸಮಾರಂಭಕ್ಕೆ ಚಾಲನೆ ದೊರೆಯಿತು. ಸಾರ್ವಜನಿಕ ಸಂಪರ್ಕ ಸಮಿತಿ ಸಂಚಾಲಕಿ ಡಾ|ಸಂಗೀತ ಅಮೃತರಾಜ್ ರವರ ಸಮಿತಿಯವರು ರಂಗೋಲಿ, ದೀಪ, ನವಿಲಿನ ಸ್ವಾಗತ ಮಂಟಪ ದೊಂದಿಗೆ ಶೃಂಗರಿಸಿ, ಸ್ವಾಗತಿಸಿ ಕನ್ನಡ ಹಬ್ಬದ ವಾತಾವರಣ ಮೂಡಿಸಿದರು.
ಸಾಂಸ್ಕೃತಿಕ ಸಮಿತಿ ಸಂಚಾಲಕಿ ಸಂಧ್ಯಾ ಅರುಣ್ಕುಮಾರ್ ಮತ್ತು ಸಮಿತಿ ಸದಸ್ಯರು ಹಾಗೂ ವಿವಿಧ ನಿರ್ದೇಶಕರುಗಳು, ಕೂಟದ ಸದಸ್ಯರು ಮತ್ತು ಮಕ್ಕಳ ಭಾಗವಹಿಸುವಿಕೆಯಲ್ಲಿ ವೇದಿಕೆಯ ಮೇಲೆ ನಾಡುಸಿರಿ, ನುಡಿಸಿರಿ, ಜನಸಿರಿ, ಜನಪದಸಿರಿ, ಜೀವನಸಿರಿಯ ಮೂಲಕ ’ಸಿರಿ ಸಂಭ್ರಮ’ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೆಡೆಸಿಕೊಟ್ಟರು. ನಂದಾ ಸುರೇಶ್ರವರ ನಿರ್ದೇಶನದಲ್ಲಿ ವೈಭವಯುತ ’ಜಂಬೂ ಸವಾರಿ’ ನೆಡೆದು, ಮೈಸೂರು ದಸರಾವನ್ನು ನೆನಪಿಸಿತು. ನಂತರ ಸದಸ್ಯ ದಂಪತಿಗಳು ಸಂಗೀತ ಮಂಗಲಗಿಯವರ ನಿರ್ದೇಶನದಲ್ಲಿ ’ಸುಲಗ್ನ ಸಾವಧಾನ್’ ನಲ್ಲಿ ಕರ್ನಾಟಕದ ವಿವಿಧ ಪ್ರದೇಶದ ವಧು-ವರರ ವೇಷ-ಭೂಷಣದಲ್ಲಿ ಕಂಗೊಳಿಸಿದರು. ಮಕ್ಕಳಿಂದ ಪುನೀತ್ ರಾಜ್ ಕುಮಾರ್ಅರ್ಪಣೆಯ ಅವರೆ ಹಾಡಿದ ಹಾಗೂ ಅವರ ಚಿತ್ರದಿಂದ ಆಯ್ದ ಹಾಡುಗಳ ನೃತ್ಯ ’ನಮ್ಮ ಅಪ್ಪು’ ವಿನಲ್ಲಿ ಮಕ್ಕಳ ಜೊತೆ ಸ್ವತಹ: ಪುನೀತ್ ರವರು ಹಾಡಿ, ನರ್ತಿಸಿ ನೆರೆದಿದ್ದವರ ಮನರಂಜಿಸಿದರು.
ಪುನೀತ್ ದಂಪತಿಗಳಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ, ಪುನೀತ್ ರವರು ಸಾಂಸ್ಕೃತಿಕ ಕಾರ್ಯಕ್ರಮಗಳು, ಕುವೈತ್ ಕನ್ನಡ ಕೂಟದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು.
ಮರಳ ಮಲ್ಲಿಗೆ ಸಂಚಾಲಕ ಡಾ|ಆಜಾದ್ ರವರ ಸಮಿತಿಯವರು ಸುಂದರವಾದ ’ಸ್ಮರಣ ಸಂಚಿಕೆ’ ಯನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಪ್ರಾಯೋಜಕರುಗಳಿಗೆ ಸ್ಮರಣಿಕೆ ನೀಡಲಾಯಿತು. ಕ್ರೀಡಾಸಮಿತಿ ಸಂಚಾಲಕ ಪ್ರಶಾಂತ್ ಶೆಟ್ಟಿಯವರ ನೇತೃತ್ವದಲ್ಲಿ ಊಟೋಪಚಾರದ ವ್ಯವಸ್ಥೆ ನೆಡೆಯಿತು. ಕಾರ್ಯದರ್ಶಿ ಅನಂತ್ ಮಂಗಲಗಿ ಧನ್ಯವಾದ ಸಮರ್ಪಣೆ ನೆಡೆಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭವನ್ನು ಸಮಾಪನಗೊಳಿಸಲಾಯಿತು.
ವರದಿ: ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿ.