ಕುಂದಾಪುರ: ಪ್ರಸಕ್ತ ಸಾಲಿನ ಮನೆತೆರಿಗೆಯನ್ನ ಆರು ಪಟ್ಟು ಹೆಚ್ಚಿಸಿರುವ ಗ್ರಾಮ ಪಂಚಾಯತ್ ನಿರ್ಧಾರವನ್ನು ಗ್ರಾಮಸ್ಥರು ವಿರೋಧಿಸಿ ಪ್ರತಿಭಟನೆ ನಡೆಸಿದ ಘಟನೆ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮ ಪಂಚಾಯತ್ ಕಚೇರಿ ಎದುರು ನಡೆದಿದೆ.
ಭಾನುವಾರ ಬೆಳಿಗ್ಗೆ ಕೆರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರಾಡಿ ಹಾಗೂ ಬೆಳ್ಳಾಲ ಗ್ರಾಮದ ಸುಮಾರು ಐನೂರಕ್ಕೂ ಹೆಚ್ಚು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಎದುರಿಗೆ ಕಾಲ್ನಡಿಗೆ ಮೆರವಣಿಗೆಯಲ್ಲಿ ಪಂಚಾಯತ್ ವಿರುದ್ಧ ಘೋಷಣೆ ಕೂಗುತ್ತಾ ಆಗಮಿಸಿದರು.
ಈ ಸಂದರ್ಭ ಕೆರಾಡಿಯ ಮಾಜಿ ಗ್ರಾ.ಪಂ. ಅಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿ, ಗ್ರಾಮಪಂಚಾಯತ್ ಸರ್ವಾಧಿಕಾರ ಧೋರಣೆಯಿಂದ ಗ್ರಾಮೀಣ ಭಾಗದಲ್ಲಿ ಆರು ಪಟ್ಟು ತೆರಿಗೆಯನ್ನು ಏಕಾಏಕೀಯಾಗಿ ಹೆಚ್ಚಿಸಿರುವುದು ಸರಿಯಲ್ಲ. ಇದು ರಾಜ್ಯದ ಇತಿಹಾಸದಲ್ಲಿಯೇ ಮೊದಲು. ತೇರಿಗೆ ವಿಚಾರವನ್ನು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿರುವ ನಿರ್ಣಯಕ್ಕೆ ಗ್ರಾಮಸ್ಥರಿಂದ ಆಕ್ಷೇಪಣೆಗೂ ಅವಕಾಶ ನೀಡದೇ ನೆಪಮಾತ್ರಕ್ಕೆ ದಿನಪತ್ರಿಕೆಯೊಂದರಲ್ಲಿ ಸಣ್ಣ ಜಾಹೀರಾತು ನೀಡಿ ಪಂಚಾಯಿತಿ ಗ್ರಾಮಸ್ಥರಿಗೆ ಅನ್ಯಾಯವೆಸಗಿದೆ. ಮೊದಲಿನಮ್ತೆಯೇ ಮನೆ ತೆರಿಗೆ ರೀತಿಯಲ್ಲಿಯೇ ತೆರಿಗೆ ವಸೂಲು ಮಾಡಬೇಕು. ಇಲ್ಲದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದರು. ನೂರು ರೂಪಾಯಿ ಮನೆ ತೆರಿಗೆ ಇದ್ದ ಕುಟುಂಬ ಈಗ ಆರು ನುರು ರೂಪಾಯಿ ಪಾವತಿಸುವುದು ಸಾಧ್ಯವೇ ಇಲ್ಲ. ಮನೆ ತೆರಿಗೆಯಿಂದ ಪಂಚಾಯಿತಿ ಅಭಿವೃದ್ಧಿ ಮಾಡಬೇಕಾಗಿಲ್ಲ. ಅದಕ್ಕಾಗಿ ಸಾಕಷ್ಟು ಅನುದಾನಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿತ್ತಿದೆ ಎಂದವರು ಆಕ್ರೋಷ ವ್ಯಕ್ತಪಡಿಸಿದರು.
ಸುಮಾರು ನಾನೂರಕ್ಕೂ ಹೆಚ್ಚು ಗ್ರಾಮಸ್ಥರು ಆಕ್ಷೇಪಣಾ ಸಹಿ ಸಂಗ್ರಹಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಂತರ ಕೆರಾಡಿ ಗ್ರಾಮ ಪಂಚಾಯಿತಿ ಪಿಡಿಓ ಸತೀಶ್ ಅವರಗಿಗೆ ಮನವಿ ನೀಡಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಕೆರಾಡಿ ಗ್ರಾ.ಪಂ. ಪಿಡಿಓ ಸತೀಶ್ ಮುಂದಿನ ಸಾಮಾನ್ಯ ಸಭೆಯಲ್ಲಿ ಗ್ರಾಮಸ್ಥರ ಬೇಡಿಕೆಯನ್ನು ಇಟ್ಟು ನಿರ್ಣಯ ಕೈಗೊಳ್ಳುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ನಾಗಪ್ಪ ಕೊಠಾರಿ, ಸ್ಥಳೀಯರಾದ ಮಂಜು ಕೊಠಾರಿ, ತೇಜರಾಜ ಶೆಟ್ಟಿ, ವಿನೋದ ಪೂಜಾರಿ, ಹೆರ್ಜೆ ಕರುಣಾಕರ ಶೆಟ್ಟಿ, ಶಾಲಿನಿ ಶೆಟ್ಟಿ, ಶ್ರೀಮತಿ ಶೆಟ್ಟಿ,ಕನಕಾ ಆಚಾರಿ, ಶ್ರೀಮತಿ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಕೊಲ್ಲೂರು ಪೊಲೀಸ್ ಉಪನಿರೀಕ್ಷಕ ಶೇಖರ್ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
Comments are closed.