ಮಂಗಳೂರು, ಮೇ 21:ಉಳ್ಳಾಲ ಸೈಯದ್ ಮದನಿ ದರ್ಗಾದ ಆಡಳಿತ ಸಮಿತಿಯ ಅಧ್ಯಕ್ಷ ಅಯ್ಕೆ ವಿವಾದಕ್ಕೆ ಸಂಬಂಧ ಪಟ್ಟಂತೆ ಕೆಲವು ದಿನಗಳಿಂದ ನಡೆಯುತ್ತಿದ್ದ ಗೊಂದಲಕ್ಕೆ ತಾತ್ಕಲಿಕ ಪರಿಹಾರ ಸಿಕ್ಕಿದ್ದು, ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂರವರ ಮನವಿಯಂತೆ ಇದೀಗ ಅಧ್ಯಕ್ಷರ ಅಯ್ಕೆ ಪ್ರಕ್ರಿಯೆ ನಡೆಯುವವರೆಗೆ ಉಳ್ಳಾಲ ಸೈಯದ್ ಮದನಿ ದರ್ಗಾದ ಆಡಳಿತ ಸಮಿತಿಗೆ ಆಡಳಿತಾಧಿಕಾರಿಯಾನ್ನು ನೇಮಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉಳ್ಳಾಲ ಸೈಯದ್ ಮದನಿ ದರ್ಗಾದ ಆಡಳಿತ ಸಮಿತಿಗೆ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ಹಾಜಿ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್ ತಿಳಿಸಿದ್ದಾರೆ.
ಪತ್ರಿಕೆಯೊಂದರೊಂದಿಗೆ ಮಾತನಾಡಿದ ಅವರು, ಉಳ್ಳಾಲ ದರ್ಗಾ ಸಮಿತಿಗೆ ಸಂಬಂಧಿಸಿದಂತೆ ಗೊಂದಲ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಯೊಂದಿಗೆ ಎರಡು ಬಣಗಳ ತಲಾ ನಾಲ್ಕು ಮಂದಿಯನ್ನು ಈ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗುವುದು ಎಂದರು.
ಮೂರು ತಿಂಗಳಲ್ಲಿ ದರ್ಗಾ ಸಮಿತಿಯು ಬೈಲಾ(ಕಾರ್ಯವಿಧಾನದ ನಿಯಮಾವಳಿಗಳು)ವನ್ನು ಸಿದ್ಧಪಡಿಸುವಂತೆ ಸೂಚನೆ ನೀಡಲಾಗಿದೆ. ಆನಂತರ ದರ್ಗಾ ಆಡಳಿತ ಸಮಿತಿಗೆ ನೂತನವಾಗಿ ಚುನಾವಣೆಯನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.
ಪವಿತ್ರ ರಮಝಾನ್ ತಿಂಗಳು ಸಮೀಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಮುದಾಯದವರು ಪರಸ್ಪರ ಆರೋಪ, ಪ್ರತ್ಯಾರೋಪ, ಕಿತ್ತಾಟಗಳನ್ನು ನಡೆಸುವುದು ಸರಿಯಲ್ಲ. ಆದುದರಿಂದ, ಪ್ರತಿಯೊಬ್ಬರು ಶಾಂತಿಯನ್ನು ಕಾಪಾಡಬೇಕು. ಉಳ್ಳಾಲ ದರ್ಗಾಕ್ಕೆ ಸಂಬಂಧಿಸಿದ ಎಲ್ಲ ಗೊಂದಲಗಳನ್ನು ಬಗೆಹರಿಸಲು ವಕ್ಫ್ ಬೋರ್ಡ್ ಸಿದ್ಧವಿದೆ ಎಂದು ಮುಹಮ್ಮದ್ ಯೂಸುಫ್ ಹೇಳಿದರು.
Comments are closed.