ಚಿತ್ರ,ವರದಿ- ಯೋಗೀಶ್ ಕುಂಭಾಸಿ
ಕುಂದಾಪುರ: ರಾಜ್ಯದ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ನೀಲಮಣಿ ರಾಜು ಅವರು ಶನಿವಾರ ಗಂಗೊಳ್ಳಿಯ ಬಂದರು ಸಮೀಪದಲ್ಲಿರುವ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಕರಾವಳಿ ತೀರಗಳ ಭದ್ರತೆ ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ರಾಜ್ಯದ ವಿವಿಧೆಡೆ ಸುಸಜ್ಜಿತವಾದ ಕರಾವಳಿ ಕಾವಲು ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿದೆ. ಆರಂಭಿಸಲಾಗಿರುವ ಕರಾವಳಿ ಕಾವಲು ಪೊಲೀಸ್ ಠಾಣೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಠಾಣೆಗಳಲ್ಲಿನ ಅಗತ್ಯತೆಗಳ ಬಗ್ಗೆ ಸೂಕ್ತ ಕ್ರಮಕೈಗೊಂಡು ಕರಾವಳಿ ತೀರಗಳ ರಕ್ಷಣೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಇಲಾಖೆಯಿಂದ 10 ಸ್ಪೀಡ್ ಬೋಟ್ಗಳನ್ನು ಈಗಾಗಲೇ ವಿವಿಧ ಠಾಣೆಗಳಿಗೆ ನೀಡಲಾಗಿದೆ. ಸ್ಪೀಡ್ ಬೋಟ್ ಇಲ್ಲದಿರುವ ಠಾಣೆಗಳಿಗೆ ಕೇಂದ್ರ ಸರಕಾರ ಸ್ಪೀಡ್ ಬೋಟ್ ಒದಗಿಸಲಿದೆ. ಇನ್ನು ಸಿಬ್ಬಂದಿ ಕೊರತೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ಕಡೆಗಳಲ್ಲಿಯೂ ಸಿಬ್ಬಂದಿ ಕೊರತೆಯಿರುವಂತೆಯೂ ಕರಾವಳಿ ಕಾವಲು ಪೊಲೀಸ್ ಠಾಣೆಗಳಲ್ಲಿನ ಸಿಬ್ಬಂದಿ ಕೊರತೆಯಿರುವುದು ನಿಜ. ಆದರೇ ಇರುವ ಸಿಬ್ಬಂದಿಗಳು ಉತ್ತಮವಾಗಿ ಕೆಲಸಮಾಡುತ್ತಿದ್ದು ಎಲ್ಲವನ್ನು ಸುವ್ಯವಸ್ಥಿತವಾಗಿ ನಿಬಾಯಿಸುತ್ತಿದ್ದಾರೆ. ಸಿಬ್ಬಂದಿ ಕೊರತೆಯನ್ನು ತಪ್ಪಿಸಲು ಮುಂದಿನ ದಿನಗಳಲ್ಲಿ ಇನ್ನಷ್ಟು ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ನೂತನವಾಗಿ ಠಾಣೆಗಳಿಗೆ ನೇಮಕವಾಗುವ ಸಿಬ್ಬಂದಿಗಳಿಗೆ ಸಮರ್ಪಕವಾದ ತರಭೇತಿ ನೀಡುವ ಕಾರ್ಯ ಹಿಂದಿನಿಂದಲೂ ನಡೆಯುತ್ತಿದೆ ಎಂದು ಅವರು ಹೇಳಿದರು.
.
ಆಂತರಿಕ ಭದ್ರತಾ ವಿಭಾಗದ ಡಿಜಿಪಿಯಾಗಿ ನೇಮಕಗೊಂಡ ಬಳಿಕ ಗಂಗೊಳ್ಳಿಗೆ ಭೇಟಿ ನೀಡಿದ ಅವರು ಇಲ್ಲಿನ ಕರಾವಳಿ ಕಾವಲು ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ವೀಕ್ಷಿಸಿದರು. ಅಲ್ಲದೇ ಕಟ್ಟಡಕ್ಕೆ ಸಂಬಂದಪಟ್ಟ ಹಾಗೆಯೂ ಕೆಲವೊಂದು ಚಿಕ್ಕಪುಟ್ಟ ಬದಲಾವಣೆ ಮಾಡುವಂತೆಯೂ ಸೂಚಿಸಿದರು.
ಈ ಸಂದರ್ಭದಲ್ಲಿ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಸುನೀಲ್ ಕುಮಾರ್, ಐಜಿಪಿ ಮಾಲಿನಿ ಕೃಷ್ಣಮೂರ್ತಿ, ಕರಾವಳಿ ಕಾವಲು ಪೊಲೀಸ್ ಎಸ್ಪಿ ಚೆನ್ನಬಸವಣ್ಣ, ಡಿವೈಎಸ್ಪಿ ಸುಧಾಕರ ನಾಯಕ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ, ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಗುಪ್ತಚರ ವಿಭಾಗದ ಎಸ್ಪಿ ಹರಿಬಾಬು, ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವೆಂಕಟೇಶ ನಿರ್ಮಿತಿ ಕೇಂದ್ರದ ಇಂಜಿನಿಯರ್ ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.
Comments are closed.