ಮಂಗಳೂರು: ರಸ್ತೆ ಬದಿಯಲ್ಲಿದ್ದ ಬೃಹದಾಕಾರದ ಅಶ್ವತ ಮರವೊಂದರ ಬ್ರಹತ್ ಗಾತ್ರದ ಕೊಂಬೆ ಮುರಿದು ಟ್ರಾನ್ಸ್ ಫಾರ್ಮರ್ ಹಾಗೂ ಪಕ್ಕದಲ್ಲೇ ಇದ್ದ ಮೂರು ಅಂಗಡಿಗಳ ಮೇಲೆ ಬಿದ್ದ ಘಟನೆ ಗುರುವಾರ ಮಧ್ಯಾಹ್ನ ನಗರದ ಬಂಟ್ಸ್ ಹಾಸ್ಟೆಲ್ ವೃತ್ತ ಬಳಿಯ ಕರಂಗಲ್ಪಾಡಿ ಮಾರುಕಟ್ಟೆ ಎದುರು ನಡೆದಿದೆ, ಘಟನೆಯಿಂದ ಅದೃಷ್ಟವಶಾತ್ ಯಾರಿಗೂ ಯಾವೂದೇ ರೀತಿಯ ಅಪಾಯ ಸಂಭವಿಸಲಿಲ್ಲ.
ಸುಮಾರು ವರ್ಷಗಳಿಂದ ಈ ರಸ್ತೆಯಲ್ಲಿದ್ದ ತುಂಬಾ ಹಳೆಯಾದಾದ ಈ ಅಶ್ವತ ಮರದ ದೊಡ್ಡ ಗಾತ್ರದ ರೆಂಬೆಯೊಂದು ಗುರುವಾರ ಮಧ್ಯಾಹ್ನ ಸುಮಾರು 2.30ಕ್ಕೆ ಏಕಾಏಕಿ ಮುರಿದು ಬಿದಿದ್ದೆ. ತುಂಬಾ ದೊಡ್ಡದಾದ ಈ ರೆಂಬೆ ರಸ್ತೆ ಬದಿಯಲ್ಲಿದ್ದ ಟ್ರಾನ್ಸ್ ಫಾರ್ಮರ್ ಹಾಗೂ ಪಕ್ಕದಲ್ಲೇ ಇದ್ದ ಮಾರುಕಟ್ಟೆಯ ಒಳಗಿನ ಮೂರು ಅಂಗಡಿಗಳ ಮತ್ತು ಕಾಂಪೌಂಡ್ ನ ಹೊರಗಡೆ ಪಾರ್ಕ್ ಮಾಡಲಾಗಿದ್ದ ಕಾರೊಂದರ ಮೇಲೆ ಬಿದ್ದ ಪರಿಣಾಮ ಟ್ರಾನ್ಸ್ ಫಾರ್ಮರ್, ಕಾರು ಹಾಗೂ ಅಂಗಡಿಗಳಿಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ.
ಕರಂಗಲ್ಪಾಡಿ ಮಾರುಕಟ್ಟೆಯ ಮುಂಭಾಗ ಯಾವಾಗಲೂ ಜನದಟ್ಟಣಿ ಸಾಮಾನ್ಯವಾಗಿರುತ್ತದೆ. ಆದರೆ ನಿನ್ನೆ ಎತ್ತಿನಹೊಳೆ ಯೋಜನೆ ಸ್ಥಗಿತಕ್ಕೆ ಆಗ್ರಹಿಸಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ನೇತೃತ್ವದಲ್ಲಿ ಕರೆ ನೀಡಲಾಗಿದ್ದ ಸ್ವಯಂ ಪ್ರೇರಿತ ಜಿಲ್ಲಾ ಬಂದ್ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹೆಚ್ಚಿನ ಅಂಗಡಿ ಮುಂಗಟ್ಟುಗಳು ಬಂದ್ಗೊಳಿಸಲಾಗಿತ್ತು. ಜೊತೆಗೆ ಬಂದ್ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನಗಳ ಓಡಾಟ ಹಾಗೂ ಜನ ಸಂಚಾರ ವಿರಳವಾಗಿತ್ತು. ಇದರಿಂದಾಗಿ ಈ ಮರದ ಗೆಲ್ಲು ಮುರಿದು ಬಿದ್ದ ಸಂದರ್ಭ ಜನದಟ್ಟಣೆ ಹಾಗೂ ವಾಹನ ಸಂಚಾರ ಕಡಿಮೆಯಾದ್ದು, ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ಕೊಂಬೆ ಮುರಿದು ಟ್ರಾನ್ಸ್ ಫಾರ್ಮರ್ ಮೇಲೆ ಬಿದ್ದ ಪರಿಣಾಮ ಪರಿಸರದಲ್ಲಿ ವಿದ್ಯುತ್ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ರಸ್ತೆಗೆ ಆಡಲಾಗಿ ಬಿದ್ದಿದ್ದ ಮರದ ಕೊಂಬೆಯನ್ನು ಕತ್ತರಿಸಿ ತೆರವು ಗೊಳಿಸಿದರು. ಮನಪಾ ಆಯುಕ್ತ ಡಾ.ಎಚ್.ಗೋಪಾಲಕೃಷ್ಣ ಮತ್ತು ಸ್ಥಳೀಯ ಮನಪಾ ಸದಸ್ಯ ಡಿ.ಕೆ.ಅಶೋಕ್ ಸ್ಥಳಕ್ಕೆ ಭೇಟಿ ನೀಡಿದರು.
Comments are closed.