ವರದಿ- ಯೋಗೀಶ್ ಕುಂಭಾಸಿ
ಕುಂದಾಪುರ: ಆಕೆ ತಂದೆಯ ವೃತ್ತಿಯೇ ಹಾಗೇ ಬೇರೆ ಬೇರೆ ದೇಶವನ್ನು ಭೇಟಿಯಾಗಬೇಕು. ಈ ನಿಟ್ಟಿನಲ್ಲಿ ಆಕೆ ಒಂದನೇ ತರಗತಿಯಿಂದ ಒಂಬತ್ತನೇ ತರಗತಿಯವರೆಗೆ ವಿದೇಶ ಹಾಗೂ ಸ್ವದೇಶ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಭಾಷೆಗಳಲ್ಲಿ ಓದಿದ್ದಾಳೆ. ಉಡುಪಿಯ ಮೂಲದವರಾದರೂ ಕೂಡ ಈಕೆಗೆ ಕನ್ನಡ ಭಾಷಾಜ್ಞಾನ ತುಂಬಾ ಕಮ್ಮಿಯೇ ಇತ್ತು.
ಈಕೆ ಹೆಸರು ಶ್ರೇಯಾ ಕಾಮತ್. ತಂದೆ ಗಣಪತಿ ಕಾಮತ್ ತಾಯಿ ಶುಭಾ. ಕುಂದಾಪುರದ ಕಾಲೇಜೊಂದರ ನಿವೃತ್ತ ಉಪನ್ಯಾಸಕ ಮೋಹನದಾಸ್ ಅವರ ಮೊಮ್ಮಗಳು ಈಕೆ. ಅಜ್ಜಿ ಮನೆ ಸಂತೆಕಟ್ಟೆ. ಇಲ್ಲಿನ ಸಂಪರ್ಕ ಈಕೆಗೆ ತೀರಾ ಕಮ್ಮಿ.
ಆದರೇ ಈ ವರ್ಷ ಅಂದರೇ 2015-16ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕನ್ನಡ ಮಾಧ್ಯಮವನ್ನು ದ್ವಿತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಿದ್ದಳು. ಕುಂದಾಪುರದ ಹೋಲಿರೋಜರಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಈ ವರ್ಷ ವಿದ್ಯಾಭ್ಯಾಸ ಪಡೆದ ಕನ್ನಡ ಗೊತ್ತರಿಯದ ಆಕೆ ಪರೀಕ್ಷೆಯಲ್ಲಿ ಪಡೆದದ್ದು ನೂರಕ್ಕೆ 99 ಅಂಕವನ್ನು.
ಹೆಬ್ರಿ ಸಮೀಪದ ಸಂತೆಕಟ್ಟೆಯ ಗಣಪತಿ ಕಾಮತ್ ಹಾಗೂ ಕುಂದಾಪುರದ ಶುಭಾ ಕಾಮತ್ ಅವರ ಪುತ್ರಿಯಾಗಿರುವ ಶ್ರೇಯಾ ಎಲ್ಕೆಜಿ ಯಿಂದ ಶಿಕ್ಷಣಾಭ್ಯಾಸವನ್ನು ಆರಂಭಿಸಿದ ಬಳಿಕ ಇಲ್ಲಿಯವರೆಗೆ ಭಾರತ ಸೇರಿದಂತೆ ವಿಶ್ವದ 6 ಬೇರೆ ಬೇರೆ ದೇಶಗಳಲ್ಲಿ ಶಿಕ್ಷಣ ಪಡೆಯುವ ಅವಕಾಶ ದೊರೆಕಿತ್ತು. ಇದಕ್ಕೆ ಕಾರಣ ಆಕೆಯ ತಂದೆ ಸಾರ್ಕ್ ನಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಂದೆ ಉದ್ಯೋಗಕ್ಕಾಗಿ ಕೀನ್ಯಾ, ನೈಜೇರಿಯಾ, ತಾಂಜೇನಿಯಾ, ಭೂತಾನ್, ಉಗಾಂಡ ಹಾಗೂ ಭಾರತದ ಮುಂಬಯಿ, ಹುಬ್ಬಳ್ಳಿ, ತುಮಕೂರುಗಳಲ್ಲಿ ನೆಲೆಸಿದ್ದಾಗ ಅಲ್ಲಿನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಆಕೆ ದ್ವಿತೀಯ ಭಾಷೆಯನ್ನಾಗಿ ಇತರ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವ ಅನೀವಾರ್ಯತೆ ಇತ್ತು. ಹಾಗಾಗಿಯೇ ಈಕೆ ಕನ್ನಡ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿದ್ದಳು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಗಳಲ್ಲಿ 600 ಅಂಕಗಳನ್ನು ಈಕೆ ಪಡೆದುಕೊಂಡಿದ್ದಾಳೆ.
Comments are closed.