ಮಂಗಳೂರು, ಮೇ 16: ಮಾರಾಕಯುಧಗಳೊಂದಿಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಯುವಕನ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ಸೋಮವಾರ ಮಧ್ಯಾಹ್ನ ನಗರದ ಜೆಪ್ಪು ಹಾಗೂ ಮಂಗಳಾದೇವಿ ಸಮೀಪದ ಮಾರ್ನಮಿ ಕಟ್ಟೆಯಲ್ಲಿ ನಡೆದಿದೆ.
ದಾಳಿಗೊಳಗಾದ ಯುವಕನನ್ನು ಸಂದೀಪ್ ಎಂದು ಗುರುತಿಸಲಾಗಿದ್ದು, ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಸಂದೀಪ್ ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮಧ್ಯಾಹ್ನದ ವೇಳೆ ಮಾರ್ನಮಿ ಕಟ್ಟೆ ಕಡ್ಪಾಡಿ ರಸ್ತೆಯಲ್ಲಿರುವ ಸಂದೀಪ್ ಮನೆಗೆ ಏಕಾಏಕಿ ನುಗ್ಗಿದ ದುಷ್ಕರ್ಮಿಗಳ ತಂಡ ಸಂದೀಪ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದೆ ಎನ್ನಲಾಗಿದೆ.
ಪಡೀಲ್ ನಲ್ಲಿ ಹೋಂ ಸ್ಟೇ ದಾಳಿ ಪ್ರಕರಣದ ಆರೋಪಿ ಶ್ರೇಯಸ್ ಎಂಬಾತನ ಮೇಲೆ ಕೆಲವು ದಿನಗಳ ಹಿಂದೆ ಹಲ್ಲೆ ನಡೆದಿತ್ತು. ಈ ಹಲ್ಲೆ ಗೆ ಪ್ರತಿಕಾರವಾಗಿ ಸಂದೀಪ್ ಮೇಲೆ ದಾಳಿ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.
ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.