(ಚಿತ್ರ,ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಪುಟ್ಟ ಮಗುವನ್ನು ಕೈಯಲ್ಲಿ ಎತ್ತಿಕೊಂಡು ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬರುತ್ತಿರುವ ಇವರು ಬರುತ್ತಿರುವುದು ಸಾಮಾನ್ಯ ಹಾದಿಯಲ್ಲ. ಬದಲಾಗಿ ಈ ಮೊದಲೇ ಹಲವರನ್ನು ಬಲಿತೆಗೆದುಕೊಂಡ ಡೇಂಜರಸ್ ಸ್ಫಾಟ್ ಇದು. ಇವರೆಲ್ಲಾ ನಡೆದು ಬರುತ್ತಿರುವುದು ಹೊಳೆ ಮದ್ಯದ ಕಿರು ಅಣೆಕಟ್ಟಿನ ಹಾದಿ. ತುಂಬಿ ಹರಿಯುವ ನದಿಯ ನಡುವಿನ ಹಾದಿಯಲ್ಲೇ ನಿತ್ಯ ಪಯಣಿಸುವ ಕಂಡ್ಲೂರು ಹಾಗೂ ಸೌಕೂರು ಗ್ರಾಮದ ಕಟ್ಟಿನಗುಂಡಿ ಎಂಬಲ್ಲಿನ ಜನರ ಬದುಕಿನ ವ್ಯಥೆಯ ಕಥೆಯಿದು.
ಕುಂದಾಪುರ ತಾಲೂಕಿನ ಕಂಡ್ಲೂರು ಹಾಗೂ ಸೌಕೂರು ಗ್ರಾಮದ ನಡುವಿನ ಕಟ್ಟಿನಗುಂಡಿ ಪ್ರದೇಶದಲ್ಲಿನ ನದಿಯ ಉಪ್ಪು ನೀರಿನ ತಡೆಗಾಗಿ ಸುಮಾರು ನಲವತ್ತೈದು ವರ್ಷಗಳ ಹಿಂದೆ ನಿರ್ಮಿಸಲಾದ ಕಿರು ಅಣೆಕಟ್ಟು ಇದು. ಸೌಕೂರಿನಿಂದ ಅನತಿ ದೂರದ ಕಂಡ್ಲೂರಿಗೆ ಬರಲು ಮೂರ್ನಾಲ್ಕು ಕಿಲೋಮೀಟರ್ ಸುತ್ತಿ ಬರುತ್ತಿದ್ದ ಈ ಭಾಗದ ಜನರಿಗೆ ಇದೇ ಕಿರು ಅಣೆಕಟ್ಟು ನಿರ್ಮಾಣದ ತರುವಾಯ ಸಂಪರ್ಕ ಸೇತುವೆಯಾಗಿತ್ತು. ಈ ಅಣೆಕಟ್ಟಿನ ಮೇಲೆ ನಡೆದು ಬರುವಾಗ ಹತ್ತಕ್ಕೂ ಅಧಿಕ ಜನರು ಈ ನೀರಿನಲ್ಲಿ ಕೊಚ್ಚಿಹೋದ ಉದಾಹರಣೆಗಳೂ ಇದೆ.
ಸುಮಾರು ೪೫ ವರ್ಷಗಳ ಹಿಂದೆ ನಿರ್ಮಾಣವಾದ ಈ ಕಿಂಡಿ ಅಣೆಕಟ್ಟು ಎಪ್ಪತ್ತೈದು ಮೀಟರ್ ಇದೆ.ಉಪ್ಪು ನೀರಿನ ತಡೆಗಾಗಿ ನಿರ್ಮಿಸಿದ ಈ ಅಣೆಕಟ್ಟಿನ ಸ್ಲ್ಯಾಬ್ ಅಡಿಬದಿಗೆ ಮರದ ಫೋಲ್ಸ್ ಅಳವಡಿಸಿದ್ದು ಹಲವು ವರ್ಷಗಳೇ ಆಗಿರುವ ಕಾರಣ ನೀರಿನಲ್ಲಿರುವ ಫೋಲ್ಸ್ ಗಳು ಶಿಥೀಲಗೊಂಡಿರುವ ಸಾಧ್ಯತೆಗಳು ಇದೆ ಎನ್ನುತ್ತಾರೆ ಸ್ಥಳೀಯರು. ಇನ್ನು ಮಳೆಗಾಲ ಹೊರತುಪಡಿಸಿ ಉಳಿದಷ್ಟೂ ತಿಂಗಳು ಶಿಥೀಲಗೊಂದ ಇದೇ ಸೇತುವೆ ಮೇಲೆ ಸೌಕೂರು ಜನರ ನಿತ್ಯ ಸರ್ಕಸ್. ಮಳೆಗಾಲದ ಮೂರು ತಿಂಗಳು ಮಾತ್ರ ಈ ಭಾಗದಲ್ಲಿ ಸಂಪೂರ್ಣ ಜಲವ್ರತವಾಗುವ ಕಾರಣ ಸುತ್ತುಹಾಕಿ ಕಂಡ್ಲೂರು ಪೇಟೆಗೆ ಸಾಗಬೇಕಾದ ಅನಿವಾರ್ಯತೆಯೂ ಇದೆ.
ಇನ್ನು ಈ ಅಣೆಕಟ್ಟು ಆಶ್ರಯಿಸಿದ ನದಿ ತಟದ ಸೌಕೂರು ಭಾಗದಲ್ಲಿ ಐವತ್ತಕ್ಕೂ ಅಧಿಕ ಮನೆಗಳಿದೆ. ನೂರಾರು ವಿದ್ಯಾರ್ಥಿಗಳು ಸೇರಿದಂತೆ, ನಿತ್ಯ ಕೆಲಸ ಕಾರ್ಯಗಳಿಗಾಗಿ ಆಚೀಚೆ ತೆರಳುವರೆಲ್ಲರೂ ಇದೇ ಅಣೆಕಟ್ಟಿನ ಮೇಲೆಯೇ ಸಾಗಬೇಕು. ಅಲ್ಲದೇ ಯವುದೋ ಶುಭ ಸಮಾರಂಭಗಳಿಗೆ ತೆರಳಬೇಕಾದರೂ ಇದೇ ಸೇತುವೆ ಅಗತ್ಯ. ಮೊಣಕಾಲಿನವರೆಗೂ ನೀರು ಇರುವಾಗ ಅದರಲ್ಲಿಯೇ ನಡೆದು ಸಾಗಬೇಕು. ಈ ನಡುವೆ ಕೊಂಚ ಯಾಮಾರಿದ್ರೂ ಅಪಾಯ ಖಂಡಿತ.
ಇನ್ನು ಈ ಭಾಗಕ್ಕೆ ಸಂಪರ್ಕ ಸೇತುವೆ ನಿರ್ಮಿಸಿಕೊಡಿ ಎಂದು ಇಲ್ಲಿನ ಸ್ಥಳೀಯರು ಹಲವು ಬಾರೀ ಸಂಬಂದಪಟ್ಟ ಜನಪ್ರತಿನಿಧಿಗಳಿಗೆ ಮನವಿಯನ್ನು ಸಲ್ಲಿಸುತ್ತಲೇ ಇದ್ದಾರೆ. ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅವರಿಗೂ ಈ ಬಗ್ಗೆ ಮನವಿ ನೀಡಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ.