ಮಂಗಳೂರು,ಮೇ.13 : ನಗರದ ತೊಕ್ಕೊಟ್ಟು ಬಬ್ಬುಕಟ್ಟೆ ಬಳಿಯ ಮನೆವೊಂದರಲ್ಲಿ ಸುಮಾರು 12 ವರ್ಷ ಪ್ರಾಯದ ಬಾಲಕಿಯನ್ನು ಮನೆಗೆಲಸಕ್ಕಿಟ್ಟುಕೊಂಡಿರುವ ಬಗ್ಗೆ ಚೈಲ್ಡ್ ಲೈನ್ ಮಂಗಳೂರು-1098ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಚೈಲ್ಡ್ಲೈನ್ ಮಂಗಳೂರು- 1098, ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಬಾಲ ಕಾರ್ಮಿಕಳಾಗಿ ದುಡಿಯುತ್ತಿದ್ದ ಬಾಲಕಿಯನ್ನು ರಕ್ಷಿಸಲಾಗಿದೆ. ಈ ಬಾಲಕಿ ಮೂಲತಃ ಮಡಿಕೇರಿ ಮೂಲದ ಕಾಫಿ ತೋಟ ಕಾರ್ಮಿಕರಾಗಿದ್ದು, ಬಡ ಕುಟುಂಬದವರಾಗಿರುತ್ತಾರೆ.
ಬಾಲಕಿಗೆ ಶಿಕ್ಷಣವನ್ನು ಮುಂದುವರಿಸುವ ಆಸಕ್ತಿಯಿದ್ದರೂ, ಕುಟುಂಬದಲ್ಲಿ ಬಡತನವಿರುವ ಕಾರಣ ಶಾಲೆಯನ್ನು ಅರ್ಧದಲ್ಲಿ ಬಿಟ್ಟು, ಮನೆಕೆಲಸಕ್ಕೆ ಬಂದಿರುವುದಾಗಿ ಬಾಲಕಿ ಹೇಳಿದ್ದಾಳೆ. ಸೂಕ್ತ ವ್ಯವಸ್ಥೆಯಿಲ್ಲದೇ ಬಾಲಕಿ ಶಿಕ್ಷಣ ವಂಚಿತರಾಗಿದ್ದಾಳೆ. ಈ ಬಾಲಕಿ “ಶಾಲೆಯಿಂದ ಹೊರಗುಳಿದ ಮಗು’ ಎಂದು ಗುರುತಿಸಲಾಗಿದ್ದು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ವತಿಯಿಂದ ನಡೆಯುತ್ತಿರುವ “ಶಾಲೆ ಕಡೆ, ನಮ್ಮ ನಡೆ’ ಎಂಬ ಆಂದೋಲನದ ಅಡಿಯಲ್ಲಿ ಮರಳಿ ಶಾಲೆಗೆ ದಾಖಲಿಸಲಾಗುವುದು ಹಾಗೂ ಈ ಮಾಹಿತಿಯನ್ನು ಶಿಕ್ಷಣ ಇಲಾಖೆ ಗಮನಕ್ಕೆ ತರಲಾಗುವುದು.
ಈ ಬಾಲಕಿಯ ಹೆತ್ತವರು ಮಡಿಕೇರಿ ವಿರಾಜಪೇಟೆಯ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಆ ತೋಟದ ಮಾಲಕರ ಮಗ ಮಂಗಳೂರು ನಗರದ ವೈದ್ಯಕೀಯ ಕಾಲೇಜೊಂದರಲ್ಲಿ ಶಿಕ್ಷಣ ಪಡೆಯುತ್ತಿದ್ದು, ಅವರು ಬಬ್ಬುಕಟ್ಟೆಯಲ್ಲಿ ಉಳಿದು ಕೊಳ್ಳಲು ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ. ಆ ಮನೆ ಕೆಲಸಕ್ಕೆ ಮಡಿಕೇರಿ ಯಿಂದ ಈ ಬಾಲಕಿಯನ್ನು ಕರೆತರಲಾಗಿತ್ತು. ವೈದ್ಯಕೀಯ ವಿದ್ಯಾರ್ಥಿಯ ತಾಯಿ ತಿಂಗಳಿಗೊಮ್ಮೆ ಬಂದು ಹೋಗುತ್ತಿದ್ದರು.
ಮುಂದಿನ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ. ಬಾಲಕಿಯ ರಕ್ಷಣಾ ತಂಡದಲ್ಲಿ ಕಾರ್ಮಿಕ ಇಲಾಖಾಧಿಕಾರಿಗಳಾದ ಗಣಪತಿ ಹೆಗಡೆ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನ ಯೋಜನಾ ನಿರ್ದೇಶಕರಾದ ಶ್ರೀನಿವಾಸ್, ಚೈಲ್ಡ್ಲೈನ್ ಮಂಗಳೂರು-1098ನ ಕೇಂದ್ರ ಸಂಯೋಜಕರಾದ ಸಂಪತ್ ಕಟ್ಟಿ ಇವರ ಮಾರ್ಗದರ್ಶನದಲ್ಲಿ ಚೈಲ್ಡ್ಲೈನ್ ಮಂಗಳೂರು-1098ನ, ರೇವತಿ ಹೊಸಬೆಟ್ಟು, ಜಯಂತಿ ಕೋಕಳ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಭವ್ಯ ಕುಮಾರ್ ಎಸ್., ಯಶೋದಾ ಪುಂಜಾಲಕಟ್ಟೆ, ವಾಹನ ಚಾಲಕರಾದ ಅಮರ್ ಹಾಗೂ ಉಳ್ಳಾಲ ಪೊಲೀಸ್ ಠಾಣೆಯ ಪ್ರಮೀಳಾ ಎಚ್. ಭಾಗವಹಿಸಿದ್ದರು